Karnataka Election: ಎಲೆಕ್ಷನ್ ದಿನ ಮದ್ಯ ಬ್ಯಾನ್ ಯಾಕೆ?
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ-2023ರ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನು 2 ದಿನದಲ್ಲಿ 2613 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಅದಕ್ಕೂ ಮುನ್ನ ಎಣ್ಣೆ ಪ್ರಿಯರಿಗೆ ಶಾಕ್ ಸಿಕ್ಕಿದೆ. ಇಂದು ಸಂಜೆ 5ರಿಂದ ಮೇ 11ರ ಬೆಳಗ್ಗೆ 11 ಗಂಟೆಯ ತನಕ ಎಣ್ಣೆ ಸಿಗಲ್ಲ. ಹಗಂತಾ ಅಕ್ರಮ ಮದ್ಯ ಖರೀದಿ, ಮಾರಾಟಕ್ಕೆ ಮುಂದಾದ್ರೆ ಡೇಂಜರ್ ಡೇಂಜರ್!
ಹೌದು, 2023ರ ಅಸೆಂಬ್ಲಿ ಚುನಾವಣೆಯನ್ನ ಚುನಾವಣಾ ಆಯೋಗ ಎಂದಿಗಿಂತಲೂ ಅತ್ಯಂತ ಖಡಕ್ ಆಗಿ ನಡೆಸುತ್ತಿದೆ. ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ & ಸಾರ್ವಜನಿಕರ ಹಿತದೃಷ್ಟಿ ಕಾರಣ ರಾಜ್ಯದಲ್ಲಿ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಹೀಗಿದ್ದರೂ ಅಕ್ರಮ ಮದ್ಯ ಮಾರಾಟದ ಕಹಿ ಘಟನೆ ನಡೆದರೆ ಖಡಕ್ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಅದರಲ್ಲೂ ನೆರೆ ರಾಜ್ಯದಿಂದ ಎಣ್ಣೆ ತಂದು ತಗಲಾಕ್ಕೊಂಡ್ರೆ ಏನಾಗುತ್ತೆ ಗೊತ್ತಾ? ಮುಂದೆ ಓದಿ.

ನೆರೆ ರಾಜ್ಯದಿಂದ ಎಣ್ಣೆ ಮೇಲೆ ಕಣ್ಣು!
ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಮದ್ಯ ಮಾರಾಟದ ಮೇಲೆ ನಿಷೇಧ ಹೇರುವುದು ಅತ್ಯಗತ್ಯ. ಇಲ್ಲವಾದಲ್ಲಿ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಮತದಾನ ದಿನದ ಒಂದೂವರೆ ದಿನ ಮುಂಚಿತವಾಗಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೆ ಮದ್ಯ ಘಟಕಗಳು ಕೂಡ ಈ ಅವಧಿಯಲ್ಲಿ ಕಾರ್ಯಾಚರಣೆ ನಡೆಸುವುದಿಲ್ಲ. ಹಾಗಾದರೆ ನೆರೆ ರಾಜ್ಯದಿಂದ ಎಣ್ಣೆ ತಂದು ಲಾಕ್ ಆದ್ರೆ ಏನಾಗುತ್ತಾ ಗೊತ್ತಾ? ಅದರ ಮಾಹಿತಿ ಇಲ್ಲಿದೆ.
ಲಾಕ್ ಆದ್ರೆ ಪಕ್ಕಾ ಶಾಕ್!
ಅಷ್ಟಕ್ಕೂ ಕರ್ನಾಟಕ ಒಟ್ಟು 6 ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿದೆ. ಹೀಗಾಗಿ ತಮಿಳುನಾಡ, ಕೇರಳ & ಆಂಧ್ರ ಪ್ರದೇಶ, ತೆಲಂಗಾಣ, ಗೋವಾ ಸೇರಿದಂತೆ ಮಹಾರಾಷ್ಟ್ರದ ಅಬಕಾರಿ ಇಲಾಖೆಯ ಜೊತೆಗೆ ಮಾತುಕತೆ ನಡೆಸಲಾಗಿದೆ. ನೆರೆ ರಾಜ್ಯದ ಗಡಿ ಭಾಗಗಳಲ್ಲಿ ಎಣ್ಣೆ ಅಂಗಡಿಗಳನ್ನ ಬಂದ್ ಮಾಡಲಾಗುತ್ತದೆ. ಈ ಮೂಲಕ ನೆರೆ ರಾಜ್ಯದಿಂದ ಕರ್ನಾಟಕಕ್ಕೆ ಎಣ್ಣೆ ಸಪ್ಲೈ ಆಗದಂತೆ ಹದ್ದಿನ ಕಣ್ಣಿಡಲಾಗಿದೆ. ಹೀಗಿದ್ರೂ ಅಕಸ್ಮಾತ್ ಎಣ್ಣೆ ಒಳಗೆ ಬಂದು ತಗಲಾಕ್ಕೊಂಡ್ರೆ ಕಾನೂನು ಕ್ರಮ ಪಕ್ಕಾ. ಹೀಗಾಗಿ ಪೊಲೀಸ್ ಇಲಾಖೆ, ಫ್ಲೈಯಿಂಗ್ ಸ್ಕ್ವಾಡ್ ಎಲ್ಲೆಲ್ಲೂ ಅಲರ್ಟ್ ಆಗಿದೆ ತಪಾಸಣೆ ನಡೆಸುತ್ತಿದೆ.
ಕಳ್ಳ ದಾರಿಗಳ ಮೇಲೆ ಕಣ್ಣು!
ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ಈಗಾಗಲೇ ತಪಾಸಣೆ ತೀವ್ರಗೊಂಡಿದೆ. ಕಳೆದ ಕೆಲವು ದಿನಗಳಿಂದ ಅಕ್ರಮ ಮದ್ಯವನ್ನ ವಶಕ್ಕೆ ಪಡೆಯಲಾಗಿದೆ. ಈ ನಡುವೆ ಕಳ್ಳ ದಾರಿಗಳ ಮೂಲಕ ನೆರೆ ರಾಜ್ಯಗಳಿಂದ ಗಡಿ ಜಿಲ್ಲೆಗಳಿಗೆ ಅಕ್ರಮವಾಗಿ ಎಣ್ಣೆ ಸಪ್ಲೈ ಆಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಕಳ್ಳ ದಾರಿ ಮೇಲೂ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಮುಖ್ಯರಸ್ತೆ ಮಾತ್ರವಲ್ಲ, ನೆರೆ ರಾಜ್ಯವನ್ನು ಕೂಡುವ ಕಾಲು ದಾರಿಗಳನ್ನೂ ಕಾಯಲು ವ್ಯವಸ್ಥೆ ಸಿದ್ಧವಾಗಿದೆ. ಹಾಗೇನಾದರೂ ಅಕ್ರಮವಾಗಿ ನೆರೆ ರಾಜ್ಯದ ಮದ್ಯ ರಾಜ್ಯಕ್ಕೆ ಎಂಟ್ರಿಯಾದರೆ ಪಕ್ಕಾ ಲಾಕ್.
ಎಲೆಕ್ಷನ್ ಆಯ್ತು ಕೌಂಟಿಂಗ್ ಬೇರೆ!
ರಾಜ್ಯದಲ್ಲಿ ಮೇ 8ರ ಸಂಜೆ 5ರಿಂದ ಹಿಡಿದು ಮೇ 11ರ ಬೆಳಗ್ಗೆ 11 ಗಂಟೆ ತನಕ ಮಾತ್ರ ಎಣ್ಣೆ ಬಂದ್ ಆಗಲ್ಲ. ಜೊತೆಗೆ ಮತ ಎಣಿಕೆ ಹಿನ್ನೆಲೆಯಲ್ಲೂ ಮದ್ಯ ಮಾರಾಟ ಸ್ಥಗಿತವಾಗುತ್ತೆ. ಎಲೆಕ್ಷನ್ ಮುಗಿದ ತಕ್ಷಣ ಕೌಂಟಿಂಗ್ ನಡೆಸಲು ಸಿದ್ಧತೆ ಆರಂಭವಾಗುತ್ತದೆ. ಹೀಗಾಗಿ ಮತ ಎಣಿಕೆ ಕಾರಣಕ್ಕೆ ಡ್ರೈ ಡೇ ಶುರುವಾಗಲಿದೆ. ಕಟ್ಟುನಿಟ್ಟಿನ ಕ್ರಮಕ್ಕೆ ಫ್ಲೈಯಿಂಗ್ ಸ್ಕ್ವಾಡ್ ನಿಯೋಜನೆ ಮಾಡಲಾಗಿದೆ. ಬಾರ್ & ರೆಸ್ಟೋರೆಂಟ್ ಹಾಗೂ ರಿಟೇಲ್ ಮಾರಾಟ ಮಳಿಗೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಮೇ 13ರಂದು ಫಲಿತಾಂಶ ಇರುವ ಕಾರಣ ಮೇ 12ರ ಮಧ್ಯರಾತ್ರಿಯೇ ಮದ್ಯದ ಅಂಗಡಿಗಳು ಬಂದ್ ಆಗಲಿದ್ದು, ಮತ್ತೆ ಬಾಗಿಲು ತೆರೆಯೋದು ಮೇ 14ರ ಬೆಳಗ್ಗೆಯೇ.
ಒಟ್ನಲ್ಲಿ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಅಕ್ರಮಗಳಿಗೆ ಕಡಿವಾಣ ಹಾಕಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಮದ್ಯ ಮಾರಾಟ & ಸಾಗಾಟಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ಎಣ್ಣೆ ಪ್ರಿಯರು ಈಗಾಗಲೇ ತಮಗೆ ಬೇಕಾದಷ್ಟು ಪಾರ್ಸಲ್ ತಗೋಂಡು ಹೋಗಿರೋದು ಮಾತ್ರ ಸುಳ್ಳಲ್ಲ.












Click it and Unblock the Notifications