ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಬಾಹುಬಲಿ ಪ್ರತಿಕೃತಿ
ಬೆಂಗಳೂರು, ಡಿಸೆಂಬರ್ 13 : ಲಾಲ್ ಬಾಗ್ ನಲ್ಲಿ ಜನವರಿ 19 ರಿಂದ ಪ್ರಾರಂಭವಾಗಲಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಶ್ರವಣಬೆಳಗೊಳದ ಬಾಹುಬಲಿ ಪ್ರತಿಕೃತಿ ನಿರ್ಮಾಣಗೊಳ್ಳಲಿದೆ.
ಈ ಬಾರಿ ಫಲಪುಷ್ಪ ಪ್ರದರ್ಶನದ ಅಂಗವಾಗಿ ಗಾಜಿನ ಮನೆಯಲ್ಲಿ ಬಾಹುಬಲಿ( ಗೊಮ್ಮಟೇಶ್ವರ) ಪ್ರತಿಮೆ ನಿರ್ಮಿಸಲು ಮೈಸೂರು ಉದ್ಯಾನ ಕಲಾಸಂಘ ಹಾಗೂ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಪುಷ್ಪ ಪ್ರದರ್ಶನ
ಜನವರಿ 19 ರಿಂದ ರಿಂದ ಜನವರಿ 28 ರವರಗೆ ನಡೆಯಲಿದೆ. ಪ್ರತಿ ವರ್ಷ ಫಲಪುಷ್ಪ ಪ್ರದರ್ಶನದಲ್ಲಿ ದೇಶದ ಪ್ರತಿಷ್ಠಿತ ಸ್ಮಾರಕಗಳನ್ನು ನಿರ್ಮಿಸಿ ಪುಷ್ಪ ಪ್ರೇಮಿಗಳನ್ನು ರಂಜಿಸುವುದು ಪದ್ಧತಿಯಾಗಿತ್ತು.
ಈ ಸಲ ಸ್ವಾತಂತ್ರ್ಯೋತ್ಸವ ಪ್ರದರ್ಶನದಲ್ಲಿ ಕುವೆಂಪು ಮನೆ, ಕವಿಶೈಲ ಎಲ್ಲರ ಗಮನ ಸೆಳೆದಿತ್ತು.12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ 2018ರ ಫೆಬ್ರುವರಿಯಲ್ಲಿ ನಡೆಯುತ್ತಿದೆ.
ಬಾಹುಬಲಿಯ ಚರಿತ್ರೆ ತಿಳಿಸಲು ಇದು ಸಕಾಲ. ಹಾಗಾಗಿ ಈ ವಿಷಯವನ್ನು ಆಯ್ದುಕೊಳ್ಳಲಾಗಿದೆ ಎಂದು ತೋಟಗಾರಿಕೆ
ಇಲಾಖೆಯ ಜಂಟಿ ನಿರ್ದೇಶಕ ಡಾ. ಎಂ.ಜಗದೀಶ್ ತಿಳಿಸಿದರು. ಶ್ರವಣಬೆಳಗೊಳದಲ್ಲಿ 58.8 ಅಡಿ ಎತ್ತರದ ಗೊಮ್ಮಟ ಮೂರ್ತಿ ಇದೆ. ಅಷ್ಟೇ ಎತ್ತರ ನಿರ್ಮಿಸಲು ಸಾಧ್ಯವಾಗದು.
ಎಷ್ಟು ಎತ್ತರದ ಮೂರ್ತಿ ನಿರ್ಮಿಸಬೇಕು, ಅದಕ್ಕೆ ಹೂ ಎಷ್ಟು ಬೇಕಾಗುತ್ತದೆ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದರು.
ಫಲಪುಷ್ಪ ಪ್ರದರ್ಶನದಲ್ಲಿ ಸಾಕಷ್ಟು ಪ್ರತಿಮೆಗಳ ಪ್ರತಿಕೃತಿ ನಿರ್ಮಿಸಿದ್ದೇವೆ. ಆದರೆ, ದೇವರ ಮೂರ್ತಿಯ ಪ್ರತಿರೂಪ ನಿರ್ಮಿಸುತ್ತಿರುವುದು ಇದೇ ಮೊದಲು. 2010ರಲ್ಲಿ ಹಂಪಿಯ ಕಲ್ಲಿನ ರಥದ ಪ್ರತಿಕೃತಿ ನಿರ್ಮಿಸಿದ್ದೆವು.
2012ರಲ್ಲಿ ಸಾಂಚಿಯಲ್ಲಿನ ಬುದ್ಧನ ಸ್ತೂಪ ಗಾಜಿನ ಮನೆಯಲ್ಲಿ ಅನಾವರಣಗೊಂಡಿತ್ತು ಎಂದು ವಿವರಿಸಿದರು.
ಈ ಸಲದ ಆಕರ್ಷಣೆಗಳು: ಕೆರೆಯ ನೀರು ಶುದ್ಧೀಕರಿಸಲು ಲಾಲ್ಬಾಗ್ನಲ್ಲಿ ನಿರ್ಮಿಸಲಾಗುತ್ತಿರುವ ಸಣ್ಣ ನಯಾಗಾರ ಈ ಬಾರಿಯ ಫಲಪುಷ್ಪ ಪ್ರದರ್ಶನದ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ. ಹಾಗಾಗಿ
ಪ್ರದರ್ಶನಕ್ಕೂ ಮುನ್ನವೇ ಜಲಪಾತದ ಉದ್ಘಾಟನೆ ನಡೆಸಲು ಇಲಾಖೆ ಚಿಂತನೆ ನಡೆಸಿದೆ. ಜೊತೆಗೆ ಜವರಾಯ ಜಲಪಾತವನ್ನು ಜನರು ಕಣ್ತುಂಬಿಕೊಳ್ಳಬಹುದು.
ಲಾಲ್ಬಾಗ್ನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಡಾ. ಎಂ. ಎಚ್. ಮರಿಗೌಡ ರಾಷ್ಟ್ರೀಯ ತೋಟಗಾರಿಕೆ ಗ್ರಂಥಾಲಯ ನವೀಕರಣ ಕೆಲಸವೂ ಮುಕ್ತಾಯ ಹಂತಕ್ಕೆ ಬಂದಿದ್ದು, ಫಲಪುಷ್ಪ ಪ್ರದರ್ಶನದ ವೇಳೆಗೆ
ಸಾರ್ವಜನಿಕರ ವೀಕ್ಷಣೆಗೆ ಸಾಧ್ಯವಾಗಿಸಲು ಪ್ರಯತ್ನಿಸುತ್ತಿದ್ದೇವೆ. ಶೀಘ್ರ ಲೋಕಾರ್ಷಣೆ ಮಾಡುತ್ತೇವೆ ಎಂದು ಜಗದೀಶ್ ತಿಳಿಸಿದರು.