B - Khata: ಬಿ - ಖಾತಾದಿಂದ ಎ - ಖಾತಾ: ಡಿ.ಕೆ ಶಿವಕುಮಾರ್ ಲೆಕ್ಕಾಚಾರ ತೆಲೆಕೆಳಗೆ! ನೆಟ್ಟಿಗರು ಹೇಳಿದ್ದೇನು
B - Khata: ಕರ್ನಾಟಕ ಸರ್ಕಾರವು ಬಿ ಒ- ಖಾತಾದಿಂದ ಎ - ಖಾತಾ ಪರಿವರ್ತನೆಗೆ ಅವಕಾಶ ನೀಡಿರುವುದರಿಂದ ಆಸ್ತಿದಾರರು ಖುಷಿಯಾಗಲಿದ್ದು, ಆಸ್ತಿದಾರರಿಗೆ ಸರ್ಕಾರದ ಮೇಲೆ ಒಳ್ಳೆಯ ಮನೋಭಾವನೆ ಮೂಡಲಿದೆ. ಇದು ಮುಂದಿನ ದಿನಗಳಲ್ಲಿ ವರದಾನವಾಗಲಿದೆ ಎನ್ನುವ ಕಾಂಗ್ರೆಸ್ನ ಲೆಕ್ಕಾಚಾರಗಳು ತಲೆಕೆಳಗಾಗುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಬಿ - ಖಾತಾದಿಂದ ಎ- ಖಾತಾ ಪರಿವರ್ತನೆಗೆ ಸರ್ಕಾರ ನಿಗದಿ ಮಾಡಿರುವ ಶುಲ್ಕ ಹಾಗೂ ಗೈಡ್ಲೈನ್ಸ್ವ್ಯಾಲ್ಯೂ. ಇದು ಹಲವು ಆಸ್ತಿದಾರರಿಗೆ ಬಿಸಿ ತುಪ್ಪವಾಗಿ ಬದಲಾಗಿದ್ದು, ಆಸ್ತಿದಾರರು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಡಿ.ಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜನರ ಆಸ್ತಿ ದಾಖಲೆ ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ, ಬಿ ಖಾತದಿಂದ ಎ-ಖಾತೆಗೆ ಬದಲಾವಣೆ ಮಾಡಿಕೊಳ್ಳುವುದು ಒಂದು ಕ್ರಾಂತಿಕಾರಕ ಯೋಜನೆಯಾಗಿದೆ. ಇದರಿಂದ ಆಸ್ತಿ ಮೌಲ್ಯ ಹೆಚ್ಚಾಗುವುದರ ಜೊತೆಗೆ ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳಲು ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದು ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಜನ ಶುಲ್ಕ ನಿಗದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರವನ್ನು ಹಾಗೂ ಡಿ.ಕೆ ಶಿವಕುಮಾರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅರುಣ ಎನ್ನುವವರು, ಬೆಂಗಳೂರಿನ ರಾಮಮೂರ್ತಿ ನಗರದ ಎನ್ಆರ್ಐ ಲೇಔಟ್ನಲ್ಲಿರುವ ನನ್ನ 7 ಅಪಾರ್ಟ್ಮೆಂಟ್ಗಳಿಗೆ ಇ - ಖಾತಾ ಪಡೆಯಲು ನಾನು ₹ 8.5 ಲಕ್ಷ ಲಂಚ ನೀಡಿದ್ದೇನೆ. ಆದರೂ ನನ್ನ ಕೆಲಸ ಇನ್ನೂ ಮುಗಿದಿಲ್ಲ, 8 ತಿಂಗಳು ಕಳೆದಿವೆ. ಇದು ಖಾತಾ ಪಡೆಯುವ ಸಾಹಸದ ಪರಿಸ್ಥಿತಿ ಎಂದು ವಿವರಿಸಿದ್ದಾರೆ. ಶ್ರೀಧರ್ ಹೆಗ್ಗಡೆ ಎನ್ನುವವರು, ಎ ಮತ್ತು ಬಿ ಖಾತೆ ಹೆಸರಲ್ಲಿ ಬೆಂಗಳೂರಿನಲ್ಲಿ ಸಾಲ ಮಾಡಿ ಸೈಟ್ ತೆಗೆದುಕೊಂಡು, ಕೇಳಿದಷ್ಟು ಟ್ಯಾಕ್ಸ್ ಕಟ್ಟಿಕೊಂಡು, ಮಕ್ಕಳ ಶಾಲಾ ಫೀಸ್ ಕಟ್ಟಿಕೊಂಡು ದಣಿದು ಜೀವನ ಸಾಗಿಸುತ್ತಿರುವ ಸಾಮಾನ್ಯ ಜನರಿಗೆ ಕನಿಷ್ಠ ಸೌಲಭ್ಯ ಕೊಡದೇ ಖಾತೆ ಹೆಸರಲ್ಲಿ ಬಡಜನರ ಜೇಬಿಗೆ ಕತ್ತರಿ ಹಾಕೋದು ಸರಿಯಲ್ಲ. ಎ ಮತ್ತು ಬಿ ಖಾತಾ ಎಂದು ಯಾರನ್ನ ಕೇಳಿ ಮಾಡಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ.
ಒಸಿ ಆದೇಶಕ್ಕೂ ಮುನ್ನ ಹೊಸದಾಗಿ ನಿರ್ಮಿಸಲಾದ 30x40 ವಿಸ್ತೀರ್ಣದ ಕಟ್ಟಡಕ್ಕೆ ಬೆಸ್ಕಾಂ ವಿದ್ಯುತ್ ಸಂಪರ್ಕದ ವಿಷಯ ಏನು. ಜನರು ಇನ್ನೂ ಕತ್ತಲೆಯಲ್ಲಿದ್ದಾರೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ. ಇಲ್ಲದಿದ್ದರೆ ಜಿಬಿಎ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಇಲ್ಲದಿದ್ದರೆ ಜನರು ನಿಮ್ಮನ್ನು ಶಪಿಸಬಹುದು ಎಂದೂ ಮತ್ತೊಬ್ಬ ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ.
ಕೆಲವು ಆಸ್ತಿದಾರರಿಗೆ ಇದು ಸಂಕಷ್ಟವಾಗಿ ಬದಲಾಗಿದೆ. ಸಾಮಾನ್ಯ ಜನರಿಗೆ ಪರಿವರ್ತನೆ ಶುಲ್ಕ ಹೆಚ್ಚು ಹೊರೆಯಾಗಿದೆ. ಗೈಡ್ಲೈನ್ಸ್ ವ್ಯಾಲ್ಯೂ ಮೊತ್ತವನ್ನು ಶೇ. 5% ಬದಲಾಗಿ, ಕನಿಷ್ಠ 2 ಅಥವಾ 3%ಕ್ಕೆ ಕಡಿಮೆ ಮಾಡಬೇಕು ಎಂದೂ ಕೆಲವರು ಮನವಿ ಮಾಡಿದ್ದಾರೆ. ಅನೂಪ್ ಎನ್ನುವವರು, ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡುವುದು ಒಳ್ಳೆಯ ನಿರ್ಧಾರ. ಆದರೆ ಐದು ಪರ್ಸೆಂಟ್ (5%) ಗೈಡ್ಲೈನ್ ವ್ಯಾಲ್ಯೂ ಕಟ್ಟಿ ಅನ್ನೋದು ಎಷ್ಟು ಸರಿ. ಶ್ರೀಮಂತರಿಗೆ ಇದು ಜಾಸ್ತಿ ಅನ್ನಿಸುವುದಿಲ್ಲ ಆದರೆ ಮಧ್ಯಮವರ್ಗದವರಿಗೆ ಇದು ತುಂಬಾ ಜಾಸ್ತಿ ಆಗುತ್ತೆ. ಇದನ್ನು ಎರಡು ಪರ್ಸೆಂಟ್ ಗೆ (2%) ಇಳಿಸಿ ಖಂಡಿತ ಪ್ರತಿಯೊಬ್ಬರಿಗು ಇದು ಅನುಕೂಲವಾಗುತ್ತೆ ಇದು ಯಶಸ್ವಿ ಕೂಡ ಆಗುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications