ಬೆಂಗಳೂರಿನಲ್ಲಿ ಹೃದಯಾಘಾತದಿಂದ ಆಟೋ ಚಾಲಕ ಸಾವು!
ಬೆಂಗಳೂರು ಆಗಸ್ಟ್ 22: ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚಾಗಿದ್ದು ಜನಸಾಮಾನ್ಯರನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರಿನಲ್ಲಿಂದು ಆಟೋ ಚಲಾಯಿಸುವ ವೇಳೆ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಬೆಂಗಳೂರಿನ ಸಂಪಗಿರಾಮನಗರದಲ್ಲಿ ಈ ಘಟನೆ ನಡೆದಿದೆ. 53 ವರ್ಷದ ತಿಮ್ಮೇಶ್ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ದೈವಿ. ಟೀ ಕುಡಿದು ಅರ್ಧ ಗಂಟೆ ಆಟೋ ಚಲಾಯಿಸಿದ ತಿಮ್ಮೇಶ್ಗೆ ರಸ್ತೆ ಮಾರ್ಗದಲ್ಲಿ ಎದೆ ನೋವು ಕಾಣಿಸಿಕೊಂಡಿದೆ.

ಆಟೋ ನಿಲ್ಲಿಸುತ್ತಿದ್ದಂತೆ ಎದೆ ನೋವು ಅಧಿಕವಾಗಿದೆ. ಬಳಿಕ ತಿಮ್ಮೇಶ್ ಎದೆಯನ್ನು ಉಜ್ಜಿಕೊಂಡು ಕೊಂಚ ದೂರ ನಡೆದಿದ್ದಾರೆ. ಅಷ್ಟೇ ಕೆಳಗೆ ಬಿದ್ದವರ ಪ್ರಾಣ ಪಕ್ಷ ಹಾರಿ ಹೋಗಿದೆ.
ಅವರು ಕೆಳಗೆ ಬಿದ್ದ ತಕ್ಷಣ ಅಕ್ಕಪಕ್ಕದ ಅಂಗಡಿಯವರು ಅವರನ್ನು ರಕ್ಷಿಸಲು ಆಗಮಿಸಿದ್ದಾರೆ. ಎದೆಯನ್ನು ಉಜ್ಜಿದ್ದಾರೆ. ಪಿಟ್ಸ್ ಬಂದಿರಬಹುದು ಎಂದು ಭಾವಿಸಿ ಕಬ್ಬಿಣವನ್ನೂ ಕೈಗೆ ನೀಡಿದ್ದಾರೆ ಆದರೆ ಪ್ರಯೋಜನವಾಗಿಲ್ಲ. ತಿಮ್ಮೇಶ್ ಬಿದ್ದ ತಕ್ಷಣ ಅವರ ಜೀವ ಹೊರಟು ಹೋಗಿತ್ತು.
ಈ ಬಗ್ಗೆ ಪ್ರತ್ಯಕ್ಷದರ್ಶಿ ರಾಜು ಮಾಹಿತಿ ನೀಡಿ, ''ನಮ್ಮ ಅಂಗಡಿ ಪಕ್ಕ ತಿಮ್ಮೇಶ್ ಅನ್ನೋರು ಎದೆ ಉಜ್ಜಿಕೊಂಡು ಬಂದರು. ತಕ್ಷಣ ಅವರು ನೆಲಕ್ಕೆ ಬಿದ್ದರು. ಅಕ್ಕಪಕ್ಕದವರು ಎದೆ ಉಜ್ಜಿದರು. ನಮ್ಮ ಶಾಪ್ ಅಲ್ಲಿ ತಂದು ಮಲಗಿಸಿದರು. ಬಿದ್ದು ತಕ್ಷಣ ಜೀವ ಹೋಗಿತ್ತು. ಆಟೋದಿಂದ ಕೆಳಗೆ ಇಳಿದ ಒಂದೇ ನಿಮಿಷದಲ್ಲಿ ಈ ಘಟನೆ ನಡೆದಿದೆ'' ಎಂದು ರಾಜು ಹೇಳಿದರು.
''ಅವರು ಬಿದ್ದ ತಕ್ಷಣ ಸ್ಥಳಕ್ಕೆ ನಾವು ಓಡಿ ಬಂದು ಅವರನ್ನು ಎಬ್ಬಿಸಲು ಪ್ರಯತ್ನ ಮಾಡಿದೆವು. ಆದರೆ ಆಗಲಿಲ್ಲ. ಶರ್ಟ್ ಬಿಚ್ಚಿ ಕಾಲು ಕೂಡ ಉಜ್ಜಿದೆವು ಅವರು ಕಣ್ಣು ಬಿಡಲಿಲ್ಲ. ನಾವು ತಕ್ಷಣ ಅಂಬ್ಯುಲೆನ್ಸ್ಗೆ ಕರೆ ಮಾಡಿದೆವು. ಅದು ತಡವಾಗಿ ಬಂತು. ಅವರು ಆಸ್ಪತ್ರೆಗೆ ಸಾಗುವ ಹೊತ್ತಿಗೆ ಜೀವ ಹೋಗಿತ್ತು'' ಎಂದು ಪ್ರತ್ಯಕ್ಷದರ್ಶಿ ನವೀನ್ ಹೇಳಿದರು.
ಹೃದಯಾಘಾತದಿಂದ ಸಾವನ್ನಪ್ಪಿದ ಖ್ಯಾತ ನಟರು
ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ನಟ ವಿಯಜರಾಘವೇಂದ್ರ ಅವರ ಪತ್ನಿ ಸ್ಪಂದನ ವಿದೇಶ ಪ್ರವಾಸದಲ್ಲಿ ಇರುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದರು. ಇಡೀ ಚಂದನವನವೇ ಅವರ ಅಕಾಲಿಕ ಅಗಲಿಕೆಗೆ ಕಂಬನಿ ಮಿಡಿದಿತ್ತು. ಈ ಹಿಂದೆ ನಟ ಚಿರಂಜೀವಿ ಸರ್ಜಾ ಹಾಗೂ ಪುನೀತ್ ರಾಜಕುಮಾರ್ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ವಾಕಿಂಗ್ ತೆರಳಿದ್ದ ವೇಳೆ ವಿದ್ಯಾರ್ಥಿನಿ ಸಾವು..
ಆಗಸ್ಟ್ 09ರಂದು ಶಾಲಾ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಅನಾಥಾಲಯದಲ್ಲಿ ನಡೆದಿತ್ತು. ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಕಾನ್ವೆಂಟ್ನಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಫಿಲಿಶ್ (15) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಈಕೆ ಸಿಎಂಎಸ್ ಅನಾಥಾಲಯದಲ್ಲಿ ವಾಯುವಿಹಾರ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ವೈದ್ಯರು ತಪಾಸಣೆಗೆ ಒಳಪಡಿಸಿದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದಾರೆ.











Click it and Unblock the Notifications