Assembly Election 2023: ಬೆಂಗಳೂರಲ್ಲಿ ಫೆ. 15ಕ್ಕೆ ರ್ಯಾಲಿ ಆರಂಭಿಸಲಿರುವ ಎಎಪಿ, ವಿಶೇಷತೆ ತಿಳಿಯಿರಿ
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಆಮ್ ಆದ್ಮಿ ಪಾರ್ಟಿ (AAP) ಸಹ ಬೆಂಗಳೂರಿನಾದ್ಯಂತ ಪ್ರಚಾರ ಅಭಿಯಾನ ಹಮ್ಮಿಕೊಳ್ಳುತ್ತಿದೆ. ಬುಧವಾರ ಯಾತ್ರೆಯೊಂದಕ್ಕೆ ಪಕ್ಷ ಚಾಲನೆ ನೀಡಲಿದೆ
ಬೆಂಗಳೂರು, ಫೆಬ್ರವರಿ 13: ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆ ಕಾವು ದಿನೇ ದಿನೆ ಏರುತ್ತಿದೆ. ಅಧಿಕಾರ ಗದ್ದಗೆ ಏರಲು ಯತ್ನಿಸುತ್ತಿರುವ ರಾಜಕೀಯ ಪಕ್ಷಗಳ ಪೈಕಿ ಆಮ್ ಆದ್ಮಿ ಪಾರ್ಟಿ (AAP) ಸಹ ಬೆಂಗಳೂರಿನಾದ್ಯಂತ ಪ್ರಚಾರ ಅಭಿಯಾನ ಹಮ್ಮಿಕೊಳ್ಳುತ್ತಿರುವ ಬಗ್ಗೆ ಪಾರ್ಟಿ ಮಾಹಿತಿ ನೀಡಿದೆ.
ವಿಧಾನಸಭಾ ಚುನಾವಣೆಯ ಬೆಂಗಳೂರು ನಗರದಲ್ಲಿ ಆಮ್ ಆದ್ಮಿ ಪಕ್ಷ ಪ್ರಚಾರ ಕೈಗೊಳ್ಳುತ್ತಿದೆ. 'ಪೊರಕೆಯೇ ಪರಿಹಾರ' ಎಂಬ ಪ್ರಚಾರ ಯಾತ್ರೆ ನಡೆಸಲು ಉದ್ದೇಶಿಸಿದೆ. ಈ ಯಾತ್ರೆಗೆ ಇದೇ ಫೆಬ್ರವರಿ 15ರಂದು ಬುಧವಾರ ಚಾಲನೆ ನೀಡಲಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ತಿಳಿಸಿದರು.
ಬೆಂಗಳೂರಲ್ಲಿರುವ ಎಎಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಪ್ರಮುಖ ಸ್ಥಳವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ (KSR) ನಿಲ್ದಾಣದ ಮುಂಭಾಗದಿಂದ ಯಾತ್ರೆ ಆರಂಭವಾಗಲಿದೆ. ಸಂಗೊಳ್ಳಿ ರಾಯಣ್ಣ ವೃತ್ತ, ಆನಂದ್ ರಾವ್ ವೃತ್ತ ಹಾದು ಸ್ವಾತಂತ್ರ್ಯ ಉದ್ಯಾನ ತಲುಪಿ ಬಳಿಕ ಅಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಆರೋಗ್ಯ, ಶಿಕ್ಷಣ, ಸ್ವಚ್ಛತೆ, ವಿದ್ಯುತ್ ಮತ್ತಿತರ ಮೂಲಭೂತ ಸೌಕರ್ಯಗಳಿಗೆ ಕುರಿತ ಸಮಸ್ಯೆಗಳಿಗೆ ಎಎಪಿಯೊಂದೆ ಪರಿಹಾರ. ಇದನ್ನು ಮತದಾರರಿಗೆ ತಿಳಿಸಲೆಂದೇ 'ಪೊರಕೆಯೇ ಪರಿಹಾರ' ಯಾತ್ರೆ ಆಯೋಜಿಸಿದ್ದೇವೆ ಎಂದು ಅವರು ವಿವರಿಸಿದರು.

ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್, ನಾಡಿದ್ದು ಆರಂಭವಾಗುವ ಯಾತ್ರೆಯಲ್ಲಿ ಎಎಪಿಯ ರಾಜ್ಯ ಮತ್ತು ಬೆಂಗಳೂರು ಮಟ್ಟದ ಪದಾಧಿಕಾರಿಗಳು, ಸ್ಪರ್ಧಾಕಾಂಕ್ಷಿಗಳು, ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹಿಡಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಆಡಳಿತದಿಂದ ರಾಜ್ಯದ ಜನತೆ ಮುಖ್ಯವಾಗಿ ಬೆಂಗಳೂರಿಗರು ಬೇಸತ್ತಿದ್ದಾರೆ.
ಇಂತಹ ಜ್ವಲಂತ ಸಮಸ್ಯೆಗಳಿಗೆ ಆಮ್ ಆದ್ಮಿ ಪಾರ್ಟಿಯೊಂದೇ ಪರಿಹಾರವೆಂಬುದು ಜನರಿಗೆ ಮನವರಿಕೆ ಮಾಡಲಾಗುವುದು. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ನೀಡುತ್ತಿರುವ ಜನಪರ ಆಡಳಿತವನ್ನು ಕರ್ನಾಟಕದಲ್ಲೂ ಕಾಣಬೇಕೆಂದು ಜನತೆ ಬಯಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಎಪಿ ಬೆಂಗಳೂರು ನಗರ ಉಪಾಧ್ಯಕ್ಷ ಅಶೋಕ್ ಮೃತ್ಯುಂಜಯ, ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications