ಹಲ್ಲೆ ಪ್ರಕರಣ: ಮೈತ್ರಿಯಾ ಗೌಡಗೆ ತಾತ್ಕಾಲಿಕ ರಿಲೀಫ್
ಬೆಂಗಳೂರು, ಜೂನ್ 10: ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈತ್ರಿಯಾ ಗೌಡ ಅವರಿಗೆ ಸೆಷನ್ಸ್ ಕೋರ್ಟಿನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟಿನ ಆದೇಶವನ್ನು ಅಮಾನತಿನಲ್ಲಿಟ್ಟಿರುವ ಸೆಷನ್ಸ್ ಕೋರ್ಟ್, ಮೈತ್ರಿಯಾಗೆ ಜಾಮೀನು ಮಂಜೂರು ಮಾಡಿದೆ.
ಮೇ 13ರಂದು ಶುಕ್ರವಾರ ಬೆಳಗ್ಗೆ ಜೈಲುಶಿಕ್ಷೆಗೊಳಗಾಗಿದ್ದ ನಟಿ ಮೈತ್ರಿಯಾ ಗೌಡ ಅವರು ಸಂಜೆ ವೇಳೆಗೆ ಜಾಮೀನು ಪಡೆದು ಮನೆಗೆ ತೆರಳಿದ್ದರು.[ಹಲ್ಲೆ ಪ್ರಕರಣ: ಮೈತ್ರಿಯಾಗೆ ರಿಲೀಫ್ ಬೆಳಗ್ಗೆ ಜೈಲು, ಸಂಜೆಗೆ ಬೇಲು]
2011ರ ಮೇ 20ರಂದು ನಡೆದ ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ (5ನೇ ಎಸಿಎಂಎಂ ) ಕೋರ್ಟ್ ಶುಕ್ರವಾರ ಬೆಳಗ್ಗೆ ಮೈತ್ರಿಯಾ ಗೌಡ ಅವರಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಮೈತ್ರಿಯಾ ಅವರ ತಂಗಿ ಸುಪ್ರಿಯಾ, ಸಂಬಂಧಿಕರಾದ ರೂಪಾ ಹಾಗೂ ರೇಖಾಗೆ ಕೋರ್ಟ್ ತಲಾ 1 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿತ್ತು

ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸೆಷನ್ಸ್ ನ್ಯಾಯಾಲಯಕ್ಕೆ ಮೈತ್ರಿಯಾ ಅವರು ಅರ್ಜಿ ಸಲ್ಲಿಸಿದ್ದರು. ಮೈತ್ರಿಯಾ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ಮುಂದಿನ ವಿಚಾರಣೆ ನಡೆಯುವ ತನಕ ಶಿಕ್ಷೆ ಜಾರಿಗೊಳಿಸದಂತೆ ಆದೇಶಕ್ಕೆ ತಡೆ ನೀಡಿದೆ.
2011ರಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ನಟಿ ಮೈತ್ರಿಯಾ ಗೌಡ ಹಾಗೂ ಮನೆಯವರು ಕಾರಿನಲ್ಲಿ ಬರುತ್ತಿದ್ದ ವೇಳೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸುತ್ತಿದ್ದರು.
ಆಗ ಬಸವೇಶ್ವರ ನಗರ ಸಂಚಾರಿ ಠಾಣೆ ಮುಖ್ಯ ಪೇದೆ ಶಿವಕುಮಾರ್ ಅವರು ಕಾರನ್ನು ನಿಲ್ಲಿಸಿ, ಮೊಬೈಲ್ ಫೋನ್ ನಲ್ಲಿ ಮಾತನಾಡಿಕೊಂಡು ಕಾರು ಚಲಾಯಿಸದಂತೆ ಆಕ್ಷೇಪಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಪೇದೆ ಶಿವಕುಮಾರ್ ಮೇಲೆ ಮೈತ್ರಿಯಾ ಗೌಡ ಹಲ್ಲೆ ನಡೆಸಿದ್ದರು.ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.












Click it and Unblock the Notifications