ಪಾಕಿಸ್ತಾನ ಪರ ಘೋಷಣೆ: ಅರುದ್ರಾ ಪೋಷಕರಿಗೆ ಆಘಾತ
ಬೆಂಗಳೂರು, ಫೆಬ್ರವರಿ 21: ಟೌನ್ ಹಾಲ್ ಬಳಿ ಪ್ರತಿಭಟನೆ ವೇಳೆ ಭಿತ್ತಿ ಪತ್ರ ಪ್ರದರ್ಶಿಸಿದ ಯುವತಿ ಅರುದ್ರಾಳ ಅಜ್ಜ ಅಜ್ಜಿ, ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಅತ್ಯಂತ ಸಭ್ಯ ಮತ್ತು ಸಂಪ್ರದಾಯಸ್ಥ ಕುಟುಂಬ. ಆಕೆಯನ್ನು ನಾವು ಅನ್ನಪೂರ್ಣ ಎಂಬ ಹೆಸರಿನಿಂದ ಕರೆಯುತ್ತೇವೆ. ಆಕೆ ಎಂದಿಗೂ ತನ್ನ ವೈಯಕ್ತಿಕ ಅಭಿಪ್ರಾಯ, ನಿಲುವುಗಳ ಕುರಿತು ನಮ್ಮೊಂದಿಗೆ ಮಾತನಾಡಿರಲಿಲ್ಲ. ಈ ಘಟನೆಯಿಂದ ನಮಗೂ ಅಚ್ಚರಿಯಾಗಿದೆ ಎಂದು ಹೇಳಿದ್ದಾರೆ.
ಆಕೆ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಓದಿದ್ದಳು. ಕಚೇರಿಯಿಂದ ಮನೆ ದೂರ ಇದೆ ಎನ್ನುವ ಕಾರಣಕ್ಕೆ ಆಕೆ ಸಿ.ವಿ. ರಾಮನ್ ನಗರದಲ್ಲಿ ವಾಸವಿದ್ದಳು. ಹತ್ತು ದಿನಗಳ ಹಿಂದಷ್ಟೇ ಮನೆಗೆ ಬಂದು ಹೋಗಿದ್ದಳು. ಅದನ್ನು ಹೊರತುಪಡಿಸಿದರೆ ಆಕೆ ಈ ರೀತಿ ಮನಸ್ಥಿತಿ ಹೊಂದಿದ್ದಳಾ ಎನ್ನುವುದು ನಮಗೆ ಗೊತ್ತಿಲ್ಲ ಎಂದು ಅರುದ್ರಾ ಅಜ್ಜ ರಾಮಮೂರ್ತಿ ತಿಳಿಸಿದರು.
ವಿಜಯದ ಸಂಕೇತ ತೋರಿಸಿದ ಅಮೂಲ್ಯ ಲಿಯೋನಾ
ನೀವು ಕೇಳುತ್ತಿರುವ ಯುವತಿ ಬಗ್ಗೆ ನಮಗೆ ತಿಳಿದಿಲ್ಲ. ಆಕೆಯ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ, ಈಗಲೂ ಇಲ್ಲ. ನೀವು ಹೇಳುವ ಯುವತಿ ನಮ್ಮ ಮೊಮ್ಮಗಳು ಅಲ್ಲ ಎಂದು ಅಮೂಲ್ಯ ಲಿಯೋನಾಗೂ ಅರುದ್ರಾಗೂ ಗೆಳೆತನವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪೋಷಕರ ಮನೆಗೆ ಪೊಲೀಸರ ಭೇಟಿ
ಅರುದ್ರಾ ವಿರುದ್ಧ ಐಪಿಸಿ ಸೆಕ್ಷನ್ 153 a ಅಡಿ ವೈರತ್ವ ಬಿತ್ತುವುದು ಮತ್ತು ಸೆಕ್ಷನ್ 153 b ಅಡಿ ಭಾವೈಕ್ಯತೆ, ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವುದು ಪ್ರಕರಣಗಳನ್ನು ದಾಖಲಿಸಲಾಗಿದೆ.
ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ಅರುದ್ರಾ ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಮಾತುಕತೆ ನಡೆಸಿದರು. ಇಂತಹ ಘಟನೆಗಳು ನಡೆದಾಗ ಮನೆಯ ಮುಂದೆ ಅಹಿತಕರ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಿರುವುದಾಗಿ ಅವರು ತಿಳಿಸಿದರು.
ಪ್ರತಿಭಟನೆ ಮಾಡಿದರೆ ಕ್ರಮ
ಅರುದ್ರಾ ಪೋಷಕರ ಮನೆ ಎದುರು ಪ್ರತಿಭಟನೆ ಮಾಡಿದರೆ ಕ್ರಮ ತೆಗೆದುಕೊಳ್ಳಬಾರದು. ಅವರಿಗೆ ತೊಂದರೆ ನೀಡಲು ಮಾಧ್ಯಮದವರು, ಪೊಲೀಸರು ಮತ್ತು ಅಪರಿಚಿತರು ಹೋಗಬಾರದು. ಮಗಳು ಮತ್ತು ಮೊಮ್ಮಗಳು ಮಾಡಿರುವ ಕೆಲಸದ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ನಾವು ಎಲ್ಲವನ್ನೂ ಅವರಿಗೆ ತಿಳಿಸಿದ್ದೇವೆ. ಅವರಿಗೆ ಇದರಿಂದ ಆಘಾತವಾಗಿದೆ. ನಾವು ಧಾರ್ಮಿಕ ವ್ಯಕ್ತಿಗಳು ಮತ್ತು ಕಾನೂನಿಗೆ ಬದ್ಧರಾಗಿರುವವರು ಎಂದು ಪೋಷಕರು ತಿಳಿಸಿದ್ದಾರೆ. ಸಂಬಂಧಿಸಿದ ಠಾಣೆಗೆ ತೆರಳಿ ಅಲ್ಲಿನ ಪ್ರಕ್ರಿಯೆಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಶಶಿಕುಮಾರ್ ಹೇಳಿದರು.
ಪೊಲೀಸರ ಪ್ರಕರಣಕ್ಕೆ ಸಾಕ್ಷಿ
ಅರುದ್ರಾ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ. ಅದಕ್ಕೆ ನಾವು ಸಾಕ್ಷಿಗಳಾಗಿ ಸಹಿ ಹಾಕಿದ್ದೇವೆ. ಹಾಗೆಯೇ ನಾವು ಕೂಡ ದೂರು ನೀಡಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗಿರುವುದನ್ನು ಉಲ್ಲೇಖಿಸಿದ್ದೇವೆ ಎಂದು ಹಿಂದೂ ಜನಜಾಗೃತಿ ವೇದಿಕೆ ವಕ್ತಾರ ಮೋಹನ್ ತಿಳಿಸಿದರು.
ಶಾಂತಿ ಕದಡುವ ಪ್ರಯತ್ನ
ನಮ್ಮ ಪ್ರತಿಭಟನೆ ಮುಗಿಯುವ ಸಂದರ್ಭದಲ್ಲಿ ಯುವತಿಯೊಬ್ಬಳು ಅನಧಿಕೃತವಾಗಿ ಪ್ಲೇ ಕಾರ್ಡ್ ಹಿಡಿದು ನಮ್ಮ ಪ್ರತಿಭಟನೆಯಲ್ಲಿನ ಶಾಂತಿ ಕದಡಲು ಪ್ರಯತ್ನಿಸಿದ್ದಳು. ಇದು ಸಮಗ್ರತೆ, ಭದ್ರತೆ ಹಾಗೂ ಸಮುದಾಯದ ನಡುವೆ ದ್ವೇಷ ಬಿತ್ತುವ ಷಡ್ಯಂತ್ರ. ಆಕೆಯ ಹಿಂದೆ ಯಾರಿದ್ದಾರೆ ಎಂಬುದು ಸಂಪೂರ್ಣ ತನಿಖೆ ಆಗಬೇಕು. ಆಕೆಗೆ ಕಠಿಣ ಶಿಕ್ಷೆ ಅಗಬೇಕು ಎಂದು ಸಮಸ್ತ ಹಿಂದೂ ಸಂಘಟನೆಗಳ ಪರ ದೂರು ನೀಡಿದ್ದೇವೆ ಎಂದು ತಿಳಿಸಿದರು.