ಬೆಂಗಳೂರಿನ ಫ್ಲೈಓವರ್ ಗಳು ಎಷ್ಟು ಸೇಫ್ ಆಗಿವೆ? ಇಲ್ಲಿದೆ ಮಾಹಿತಿ
Recommended Video

ಬೆಂಗಳೂರು, ಸೆಪ್ಟೆಂಬರ್ 7: ಇತ್ತೀಚೆಗೆ ಕೋಲ್ಕತ್ತಾದಲ್ಲಿ ಫ್ಲೈಓವರ್ ಒಂದು ಕುಸಿದು ದುರಂತ ಸೃಷ್ಟಿಸಿದ ಬೆನ್ನಲ್ಲೇ ಬೆಂಗಳೂರಿನ ಹಲವು ಫ್ಲೈಓವರ್ ಗಳ ಸ್ಥಿತಿಯೂ ಕೂಡ ಅಷ್ಟಾಗಿ ಸರಿಯಾಗಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಫ್ಲೈಓವರ್ ಗಳ ಮೇಲೆ ಸಂಚರಿಸುವ ವಾಹನ ಚಾಲಕರು ಹಾಗೂ ಫ್ಲೈಓವರ್ ಗಳ ಸುತ್ತ ನೆಲೆಸಿರುವ ನಿವಾಸಿಗಳು ಫ್ಲೈಓವರ್ ನ ಅಲ್ಲಲ್ಲಿ ಕೆಲವು ಅಪಾಯಕಾರಿ ಕುರುಹುಗಳನ್ನು ಪತ್ತೆ ಮಾಡಿದ್ದಾರೆ. ಬೆಂಗಳೂರಿನ ಕೆಆರ್ ಪುರಂ ನಲ್ಲಿರುವ ತೂಗು ಸೇತುವೆಯ ಇಕ್ಕೆಲಗಳಲ್ಲಿ ಅಲ್ಲಲ್ಲಿ ಫ್ಲೈಓವರ್ ಗೋಡೆಯ ಮೇಲೆ ಸಸಿಗಳು ಬೆಳೆಯುತ್ತಿರುವುದು ಫ್ಲೈಓವರ್ ಶಿಥಿಲಗೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಅಲ್ಲದೆ ಸೇತುವೆಯ ಎರಡೂ ಬದಿಯ ಕಂಬಗಳಿಂದ ಆಗಾಗ ಕಾಂಕ್ರೀಟಿನ ಪದರಗಳು, ತೂಗು ಸೇತುವೆ ಕೆಳಗಿರುವ ಪಾದಚಾರಿ ಮಾರ್ಗಗಗಳ ಮೇಲೆ ಉದುರಿ ಬೀಳುತ್ತಿರುವುದನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ.

ಜತೆಗೆ ತೂಗು ಸೇತುವೆ ಮೇಲೆ ಸಂಚರಿಸುವ ವಾಹನ ಚಾಲಕರಿಗೆ ತಿರುವು ಬಂದ ಸಂದರ್ಭದಲ್ಲಿ ಫ್ಲೈಓವರ್ ನಿಂದ ಗಾಢವಾದ ಶಬ್ಧ ಕೇಳಿಬರುತ್ತಿದ್ದು, ಸೇತುವೆ ಶಿಥಿಲಗೊಂಡಂತೆ ಭಾಸವಾಗುತ್ತದೆ ಎಂದು ವಾಹನ ಚಾಲಕರು ಹೇಳಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೂಡಲೇ ವೈಜ್ಞಾನಿಕ ಪರಿಶೀಲನೆ ನಡೆಸಬೇಕು, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದೇ ಪರಿವರ್ತಿಸಿ ಸರ್ಕಲ್ ಫ್ಲೈಓವರ್ ನಲ್ಲೂ ಕಂಡುಬಂದಿದ್ದು, ಬಿಬಿಎಂಪಿ ಈ ಕುರಿತು ಸಮೀಕ್ಷೆ ನಡೆಸಬೇಕು ಎಂಬ ಒತ್ತಡ ಕೇಳಿಬಂದಿದೆ.
ಈ ಕುರಿತು ಬಿಬಿಎಂಪಿ ಅಧಿಕಾರಿ ತಾರಾನಾಥ್ ಪ್ರತಿಕ್ರಿಯೆ ನೀಡಿದ್ದು, ಫ್ಲೈಓವರ್ ಗಳ ಗೋಡೆಗಳಲ್ಲಿ ಸಸಿಗಳು ಬೆಳೆಯುತ್ತಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ, ಈ ರೀತಿ ಕಂಡುಬಂದರೆ ಕೂಡಲೇ ಆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಎಚ್ ಎನ್ ರಮೇಶ್ ಸಿವಿಲ್ ಎಂಜಿನಿಯರಿಂಗ್ ವಿಭಾಗದ ತಜ್ಞರಾಗಿದ್ದು, ಫ್ಲೈವರ್ ಗಳ ಮೇಲೆ ಸಸಿಗಳು ಬೆಳೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದೇ ಅರ್ಥ.
ಈ ರೀತಿ ಬೇರುಗಳು ಗೋಡೆಗಳಲ್ಲಿ ಬೆಳೆಯುತ್ತಿರುವುದು ಫ್ಲೈಓವರ್ ಅಲ್ಲಲ್ಲಿ ಶಿಥಿಲಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ರೀತಿಯ ಸಸಿಗಳು ಕಾಂಕ್ರೀಟ್ ನಿರ್ಮಿತ ಕಟ್ಟಡಗಳಲ್ಲಿ ಬೆಳೆಯುವುದು ಸರಿಯಾದ ಲಕ್ಷಣವಲ್ಲ ಈ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ಸಸಿಗಳನ್ನು ತೆರವುಗೊಳಿಸಲು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications