ಬಿಜೆಪಿ ಮುಖಂಡನ ಹತ್ಯೆ: ತನಿಖೆಗೆ ತಂಡ ರಚನೆ
ರಾಜಕೀಯ ದ್ವೇಷದ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ಲಿನ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್(43) ಎಂಬುವವರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಸಾಯಿಸಿದ ಘಟನೆ ಇಂದು ಬೆಳಗ್ಗೆ 5:30 ಸುಮಾರಿಗೆ ನಡೆದಿತ್ತು.
ಬೆಂಗಳೂರು, ಮಾರ್ಚ್ 14: ಇಂದು ಬೆಳ್ಳಬೆಳಗ್ಗೆ ಬೆಂಗಳೂರಿನಲ್ಲಿ ಹತ್ಯೆಯಾದ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಅವರ ಸಾವಿನ ತನಿಖೆಗೆ ಡಿವೈ ಎಸ್ಪಿ ನೇತೃತ್ವದಲ್ಲಿ ನಾಲ್ಕು ಜನರ ತಂಡವನ್ನು ರಚಿಸಲಾಗಿದೆ. ಹತ್ಯೆಯ ತನಿಖೆಯನ್ನು ಸಿದ್ದರಾಮಯ್ಯ ಸರ್ಕಾರ ಶೀಘ್ರವೇ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಅನಂತ ಕುಮಾರ್ ಆಗ್ರಹಿಸಿದ್ದಾರೆ.
ರಾಜಕೀಯ ದ್ವೇಷದ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ಲಿನ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್(43) ಎಂಬುವವರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಸಾಯಿಸಿದ ಘಟನೆ ಇಂದು ಬೆಳಗ್ಗೆ 5:30 ಸುಮಾರಿಗೆ ನಡೆದಿತ್ತು.

ಕಿತಗಾನಹಳ್ಳಿ ವಾಸು ಎಂದು ಜನಪ್ರಿಯರಾಗಿದ್ದ ದಲಿತ ಮುಖಂಡ ಶ್ರೀನಿವಾಸ್ ಆರೆಸ್ಸೆಸ್, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಬೆಳಗ್ಗಿನ ವಾಕಿಂಗ್ ಮುಗಿಸಿ ಕಾರು ಹತ್ತುತ್ತಿದ್ದ ಸಂದರ್ಭದಲ್ಲಿ ಬಂದ ಏಳೆಂಟು ಜನ ಅಪರಿಚಿತರು ವಾಸು ಅವರನ್ನು ಹತ್ಯೆ ಮಾಡಿದ್ದಾರೆ
ಎನ್ನಲಾಗುತ್ತಿದೆ.
ಇವರು ಪತ್ನಿ ಶೈಲಜಾ ಮತ್ತು 9 ವರ್ಷದ ಮಗ ಮತ್ತು 5 ವರ್ಷದ ಮಗಳನ್ನು ಅಗಲಿದ್ದಾರೆ.
ಬೊಮ್ಮಸಂದ್ರ ಪುರಸಭೆಯ ಸದಸ್ಯರಾಗಿದ್ದ ಶ್ರೀನಿವಾಸ್ ಪ್ರಸಾದ್ ಹತ್ಯೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಬೆಳ್ಳಂಬೆಳಗ್ಗೆ ನಡೆದ ಈ ಬರ್ಬರ ಹತ್ಯೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.











Click it and Unblock the Notifications