ಸಚಿವರ ಟೆಸ್ಟ್ : ಸಿದ್ದು, ಪರಮೇಶ್ವರ್ ನಡುವೆ ಭಿನ್ನಮತ

ಸೋಮವಾರ ಬೆಳಗ್ಗೆ "ಪಕ್ಷ ಅವರದ್ದು, ಸರ್ಕಾರ ನನ್ನದು" ಎಂದು ಸಿಎಂ ಸಿದ್ದರಾಮಯ್ಯ ಪರಮೇಶ್ವರ್ ಕ್ರಮವ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೈ ಕಮಾಂಡ್ ನಾಯಕರ ಆದೇಶದಂತೆ ಮೌಲ್ಯಮಾಪನ ನಡೆಸಲಾಗುತ್ತಿದೆ ಎಂದು ಪರಮೇಶ್ವರ್ ಸಮರ್ಥನೆ ನೀಡಿದ್ದರು.
ಸೋಮವಾರ ಸಂಜೆ ಪರಮೇಶ್ವರ್, ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿಮಾಡಿ ಸಚಿವರ ಮೌಲ್ಯಮಾಪನ ಕುರಿತು ಮಾತುಕತೆ ನಡೆಸಿದರು. ಈ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ.
ಈಗ ಮೌಲ್ಯಮಾಪನ ನಡೆಸುವ ಅಗತ್ಯವಿಲ್ಲ. ಕನಿಷ್ಠ ಒಂದು ವರ್ಷವಾದ ಬಳಿಕ ಮೌಲ್ಯಮಾಪನ ನಡೆಸಬಹುದು ಎಂದು ಹೇಳಿದರು. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಸಚಿವರ ಮೌಲ್ಯಮಾಪನ ಬೇಡ, ಚುನಾವಣೆ ಪೂರ್ಣಗೊಂಡ ಬಳಿಕ, ಸರ್ಕಾರಕ್ಕೂ ಒಂದು ವರ್ಷ ತುಂಬಿರುತ್ತದೆ. ಆಗ ಮೌಲ್ಯಮಾಪನ ಮಾಡಬಹುದು ಎಂದು ಹೇಳಿದರು.
ಆದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ. ಎಐಸಿಸಿಯ ನಿರ್ದೇಶನಂತೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಮೌಲ್ಯಮಾಪನ ನಡೆಸುವ ಆಲೋಚನೆಯಲ್ಲಿದ್ದಾರೆ. ಉಭಯ ನಾಯಕರು ಈ ಕುರಿತು ಸ್ಪಷ್ಟ ತೀರ್ಮಾನಕ್ಕೆ ಬರಲು ವಿಫಲರಾಗಿದ್ದಾರೆ.
ಸಚಿವರ ಮೌಲ್ಯಮಾಪನ ವಿಚಾರ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಡುವೆ ಭಿನ್ನಾಭಿಪ್ರಾಯ ಮೂಡಿಸಿದೆ. ಎಐಸಿಸಿ ಮೌಲ್ಯಮಾಪನ ನಡೆಸಲು ಅನುಮತಿ ನೀಡುತ್ತದೆಯೇ? ಎಂದು ಕಾದು ನೋಡಬೇಕು. ಈ ನಡುವೆ ಕೆಪಿಸಿಸಿ ಪದಾಧಿಕಾರಿಗಳ ಮೌಲ್ಯಮಾಪನ ನಡೆಸಬೇಕು ಎಂಬ ಕೂಗೂ ಕೇಳಿಬಂದಿದ್ದು, ಮತ್ತಷ್ಟು ಗೊಂದಲ ಹುಟ್ಟು ಹಾಕಿದೆ.












Click it and Unblock the Notifications