ಗೌಡ್ರ ಗರಡಿಯಲ್ಲಿ ಪಳಗಿದ ಜಮೀರ್ ಅಹ್ಮದ್ ವೃತ್ತಿ ಜೀವನದ ಪ್ರಬುದ್ದತೆಯ ಮಾತು
ಬೆಂಗಳೂರು, ಮೇ 7: ರಾಜಕೀಯ ಮಾಡುವುದಕ್ಕೆ ಸಮಯ, ಸಂದರ್ಭ ಅನ್ನೋದು ಬೇಕಾಗುತ್ತದೆ. ಪಕ್ಕದ ಮನೆಗೆ ಬೆಂಕಿ ಬಿದ್ದಾಗ ಅದನ್ನು ನಂದಿಸುವ ಕೆಲಸ ಮಾಡಿದರೆ ಅದು ಮಾನವೀಯತೆ. ಆದರೆ, ಆ ಬೆಂಕಿಯಲ್ಲಿ ಹಪ್ಪಳ ಸುಡೋಣಾಂತ ಹೋದರೆ, ಗಡ್ಡ ಮೀಸೆ ಸುಟ್ಟು ಹೋದೀತು.
Recommended Video
ಅಲ್ಲಾ.. ಈ ಬಿಜೆಪಿ ಸರಕಾರ, ಕೊರೊನಾ ಹಾವಳಿಯ ನಂತರ ಅದೆಷ್ಟು ಪ್ರಮಾದವನ್ನು ಮಾಡುತ್ತಿದೆ. ಒಂದು ವೇಳೆ ಬೇರೆ ಪಕ್ಷವೇನಾದರೂ ಇಲ್ಲಿ ಅಧಿಕಾರದಲ್ಲಿದ್ದರೆ, ಅದ್ಯಾವಗಲೋ ರಾಷ್ಟ್ರಪತಿ ಆಡಳಿತ ಬಂದಿರೋದು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಇಂತಹ ಬೇವರ್ಸಿ ಸರಕಾರ ಬೇಕಾ? ಅಬ್ಬಬ್ಬಾ.. ಹಿಂದೆಂದೂ ಕೇಳದಂತಹ ಜಮೀರ್ ಮಾತಿನ ಬಿರುಗಾಳಿ
ವಿಚಾರಕ್ಕೆ ಬರುವುದಾದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಕೋವಿಡ್ ವಾರ್ ರೂಂ ದಾಳಿಯ ಮೂಲ ಉದ್ದೇಶ (ಅವರ ಆತ್ಮಸಾಕ್ಷಿ ಅದೇ ಇದ್ದರೆ) ಎಷ್ಟು ಸರಿಯಾಗಿತ್ತೋ, ಅಷ್ಟೇ ಅವರು ಆಡಿದ ಮಾತು ತಪ್ಪಾಗಿತ್ತು.
ಬಿಬಿಎಂಪಿ ವಾರ್ ರೂಂ ದಾಳಿಯ ವೇಳೆ ತೇಜಸ್ವಿ ಸೂರ್ಯ ಎತ್ತಿದ ಹದಿನೇಳು ಹೆಸರು, ಬಳಸಿದ 'ಮದರಸ' ಎನ್ನುವ ಪದ, ಪವಿತ್ರ ರಂಜಾನ್ ಮಾಸದ ವೇಳೆ, ಯಾವ ಮಟ್ಟಿಗೆ ರಿವರ್ಸ್ ಆಯಿತೆಂದರೆ, ಅದಕ್ಕೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್, ಸಿಟ್ಟಿನಿಂದ ಜೊತೆಗೆ ಭಾವನಾತ್ಮಕವಾಗಿ ಕೊಟ್ಟ ತಿರುಗೇಟು ಮುಟ್ಟಿ ನೋಡುವಂತಿತ್ತು.
ಜಮೀರ್ ಅಹ್ಮದ್ ಏನಾದರೂ ಹೇಳಿಕೆ ನೀಡಿದರೆ, ಹತ್ತರ ಜೊತೆ ಹನ್ನೊಂದು
ಸಾಮಾನ್ಯವಾಗಿ ಜಮೀರ್ ಅಹ್ಮದ್ ಏನಾದರೂ ಹೇಳಿಕೆ ನೀಡಿದರೆ, ಹತ್ತರ ಜೊತೆ ಹನ್ನೊಂದು ಎನ್ನುವಂತೆ ಇರುತ್ತಿತ್ತು. ಆದರೆ, ಗುರುವಾರದ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಜಮೀರ್ ತಮ್ಮ ಇದುವರೆಗಿನ ರಾಜಕೀಯ ಜೀವನದ ಅತ್ಯಂತ ಪ್ರಬುದ್ದವಾದ ಮಾತನ್ನು ಆಡಿದ್ದಾರೆ ಎಂದರೆ ತಪ್ಪಾಗಲಾರದು. ಇಂತಹ, ಸಮಯದಲ್ಲಿ ಹಿಂದೂ-ಮುಸ್ಲಿಂ ನಡುವೆ ತಂದಿಡುವ ವಿಚಾರ ಸರಿಯಾ, ಶವ ಸಂಸ್ಕಾರದ ವಿಚಾರದಲ್ಲಿ ಸಮುದಾಯ ಮಾಡಿದ ಕೆಲಸವನ್ನು ಅವರು ವಿವರಿಸಿದ ರೀತಿ ಮನಮುಟ್ಟುವಂತಿತ್ತು.
ತೇಜಸ್ವಿ ಸೂರ್ಯ ವಾರ್ ರೂಂ ದಾಳಿಯ ವೇಳೆ ಹೆಸರಿಸಿದ ಅಷ್ಟೂ ನೌಕರರು
ವಾರ್ ರೂಂ ದಾಳಿಯ ವೇಳೆ ತೇಜಸ್ವಿ ಸೂರ್ಯ ಅವರು ಹೆಸರಿಸಿದ ಅಷ್ಟೂ ಮುಸ್ಲಿಂ ನೌಕರರನ್ನು ಪ್ರೆಸ್ ಮೀಟ್ ನಲ್ಲಿ ಕೂರಿಸಿ ಮಾತನಾಡಿದ ಜಮೀರ್, "ನಾನೊಬ್ಬ ಅಲ್ಪಸಂಖ್ಯಾತ ಸಮುದಾಯದವನು. ಆದರೆ, ನಾನು ಆರಿಸಿ ಬರಲು ಮುಸ್ಲಿಮರು ಮಾತ್ರ ಕಾರಣವಲ್ಲ, ಹಿಂದೂಗಳೂ ನನಗೆ ವೋಟ್ ಹಾಕಿದ್ದಾರೆ. ಕೊರೊನಾ ಮೊದಲನೇ ಅಲೆಯ ವೇಳೆ, ಕುಟುಂಬದವರೂ ಬಿಟ್ಟು ಹೋಗಿದ್ದ ಶವಗಳಿಗೆ, ಹಿಂದೂ ಸಂಸ್ಕಾರದ ಪ್ರಕಾರ, ಶವಸಂಸ್ಕಾರ ಮಾಡಿಸಿದ್ದೇನೆ" ಎಂದು ಜಮೀರ್ ಹೇಳಿದ್ದಾರೆ.
ನನ್ನ ಟೀಂ ಮಾಡಿದಷ್ಟು ಹಿಂದೂ ಶವಸಂಸ್ಕಾರವನ್ನು ಅವರು ಮಾಡಿದ್ದಾರೆಯೇ
"ತೇಜಸ್ವಿ ಸೂರ್ಯ ವಾರ್ ರೂಂ ದಾಳಿಯ ವೇಳೆ, ಅವರು ಬರೀ ನಮ್ಮ ಸಮುದಾಯದವರ ಹೆಸರನ್ನು ಹೇಳಿದ್ದಾರೆ. ನನ್ನ ಟೀಂ ಮಾಡಿದಷ್ಟು ಹಿಂದೂ ಶವಸಂಸ್ಕಾರವನ್ನು ಅವರು ಮಾಡಿದ್ದಾರೆಯೇ, ಕೊರೊನಾಗೆ ಬೆದರಿ ಮನೆಯಲ್ಲಿ ಕೂತಿದ್ರಾ, ಈಗಲೂ ನಾನು ಆ ಪುಣ್ಯದ ಕೆಲಸವನ್ನು ಮಾಡುತ್ತಿದ್ದೇನೆ. ವಾರ್ ರೂಂನಲ್ಲಿರುವ ಇನ್ನೂರಕ್ಕೂ ಹೆಚ್ಚು ಕೆಲಸಗಾರರ ನಡುವೆ, ಹದಿಮೂರು ಸಾವಿರ ರೂಪಾಯಿಗೆ ಕೆಲಸ ಮಾಡುವ ಮುಸ್ಲಿಮರೇ ನಿಮ್ಮ ಟಾರ್ಗೆಟಾ" ಎಂದು ಜಮೀರ್ ಆಕ್ರೋಶ ವ್ಯಕ್ತ ಪಡಿಸಿದರು.
ಮುಸ್ಲಿಂ ಹುಡುಗರು ಇನ್ನು ಮುಂದೆ ನನ್ನ ಜೊತೆ ಕೆಲಸ ಮಾಡುತ್ತಾರೆ
"ನೀವು ಉಲ್ಲೇಖಿಸಿದ ಆ ಎಲ್ಲಾ ಮುಸ್ಲಿಂ ಹುಡುಗರು ಇನ್ನು ಮುಂದೆ ನನ್ನ ಜೊತೆ ಕೆಲಸ ಮಾಡುತ್ತಾರೆ. ಹದಿನೈದು ಸಾವಿರ ಸಂಬಳ ಕೊಡುತ್ತೇನೆ, ನನ್ನ ಸಾಮಾಜಿಕ ಕಾರ್ಯದ ಕೆಲಸದಲ್ಲಿ ಅವರು ತೊಡಗುತ್ತಾರೆ. ಬರೀ ಪೊಲಿಟಿಕಲ್ ಲಾಭಕ್ಕೋಸ್ಕರ ತೇಜಸ್ವಿ ಸೂರ್ಯ ಹೀಗೆ ಮಾಡುತ್ತಿದ್ದಾರೆ. ಎಲ್ಲಾ ಕಡೆ ಇರೋದು ಬಿಜೆಪಿ ಸರಕಾರ ತಾನೇ, ಹಾಗಾದರೆ ಮೋದಿಯಿಂದ ಹಿಡಿದು ಇವರ ತನಕ ಎಲ್ಲಾ ಕೊರೊನಾ ನಿರ್ವಹಣೆಯಲ್ಲಿ ವೇಸ್ಟ್" ಎಂದು ಜಮೀರ್ ಸಿಟ್ಟು ಹೊರಹಾಕಿದರು.