UKG Student Fail : ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿ 'ಫೇಲ್': ಸ್ಪಷ್ಟನೆ ಕೇಳಿದ ರಾಜ್ಯ ಶಿಕ್ಷಣ ಇಲಾಖೆ
ಬೆಂಗಳೂರಿನ ಖಾಸಗಿ ಶಾಲೆಯೊಂದು ಆರು ವರ್ಷದ ಯುಕೆಜಿ ವಿದ್ಯಾರ್ಥಿನಿಯನ್ನು ಅನುತೀರ್ಣ ಎಂದು ಹೇಳಿದ್ದು, ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶಾಲಾ ಆಡಳಿತ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು, ಫೆಬ್ರವರಿ. 10: ಈಗೀನ ಸನ್ನಿವೇಶದಲ್ಲಿ ಅನುತೀರ್ಣ ಎಂಬುದು ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಆತಂಕಕ್ಕೆ ನೂಕುವ ವಿಷಯವಾಗಿದ್ದು ಶಾಲೆಗಳು, ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. ಆದರೆ, ಬೆಂಗಳೂರಿನ ಈ ಶಾಲೆ ಸಂವೇದನೆ ಕಳೆದುಕೊಂಡಿದ್ದು, ಯುಕೆಜಿ ಕಂದಮ್ಮನನ್ನು ಫೇಲ್ ಮಾಡಿದೆ.
ಹೌದು, ಬೆಂಗಳೂರಿನ ಖಾಸಗಿ ಶಾಲೆಯೊಂದು ಆರು ವರ್ಷದ ಯುಕೆಜಿ ವಿದ್ಯಾರ್ಥಿನಿಯನ್ನು ಅನುತೀರ್ಣ ಎಂದು ಹೇಳಿದ್ದು, ರಾಜ್ಯ ಶಿಕ್ಷಣ ಇಲಾಖೆ ಶಾಲೆಯಿಂದ ಸ್ಪಷ್ಟನೆ ಕೇಳಿದೆ. ಪುಟ್ಟ ಮಗುವಿನ ಮೇಲೆ ಇಂತಹ ವರ್ತನೆ ತೋರಿದ ಶಾಲೆಯ ವಿರುದ್ಧ ಪೋಷಕರು ಮತ್ತು ಶಿಕ್ಷಣತಜ್ಞರು ಕಿಡಿ ಕಾರಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ದೀಪಹಳ್ಳಿಯಲ್ಲಿರುವ ಸಂತ ಜೋಸೆಫ್ ಚಾಮಿನೇಡ್ ಅಕಾಡೆಮಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಗೆ ನೀಡಿರುವ ಅಂಕಪಟ್ಟಿಯಲ್ಲಿ ಅನುತ್ತೀರ್ಣ ಎಂದು ನಮೂದಿಸಲಾಗಿದೆ. ಮಗು ನಂದಿನಿ ಒಂದು ವಿಷಯದಲ್ಲಿ 40 ಅಂಕಗಳಿಗೆ ಐದು ಅಂಕಗಳನ್ನು ಗಳಿಸಿದ್ದಾಳೆ ಎಂದು ಅಂಕಪಟ್ಟಿಯಲ್ಲಿ ದಾಖಲಿಸಿದ್ದು, ಫೇಲ್ ಎಂದು ತಿಳಿಸಲಾಗಿದೆ.

ಬಿಜೆಪಿ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶಾಲಾ ಆಡಳಿತ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದರು. "UKG ತರಗತಿಯಲ್ಲಿ ಓದುತ್ತಿರುವ ಈ ಎಳೆಯ ಮಗುವನ್ನು "ಫೇಲ್" ಮಾಡಿರುವ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ, ಹೃದಯ ಮೊದಲೇ ಇಲ್ಲ. ಆ ಮಗುವನ್ನು ಏನು ಮಾಡಲು ಹೊರಟಿದೆ ಈ ಮಹಾ ಶಿಕ್ಷಣ ಸಂಸ್ಥೆ! ನನ್ನ ಗಮನಕ್ಕೆ ಈ "ಮಹಾಕೃತ್ಯ" ಬಂದ ಕೂಡಲೇ ಶಿಕ್ಷಣ ಇಲಾಖೆಯ ಆ ತಾಲೂಕಿನ ಪ್ರಮುಖರಿಗೆ ತಲುಪಿಸಿ ಈ ಶಾಲೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.
"ನಾನು ಕೂಡ ಈ ಮಹಾ ಶಾಲೆಗೆ ಸದ್ಯದಲ್ಲಿಯೇ ಒಮ್ಮೆ ಭೇಟಿ ನೀಡಿ "ಪಾವನ" ನಾಗಲು ಬಯಸಿದ್ದೇನೆ" ಎಂದು ವ್ಯಂಗ್ಯವಾಡಿದ್ದಾರೆ.
ಒಂದರಿಂದ ಒಂಬತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗಬಾರದು ಎಂದು ಕಾನೂನು ಹೇಳುತ್ತದೆ. ಈ ನಿಯಮ ಪಾಲಿಸುವಲ್ಲಿ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದೆ.
ಮತ್ತೊಂದೆಡೆ ಮಗುವಿನ ಫೋಷಕರು ಕೂಡ ಶಾಲೆಗೆ ಭೇಟಿ ನೀಡಿ ಆಕ್ರೋಶ ವ್ತಕ್ತಪಡಿಸಿದ್ದಾರೆ. "ಆರು ವರ್ಷದ ಮಗುವಿನ ಫಲಿತಾಂಶವನ್ನು ಘೋಷಿಸುವುದು ಸರಿಯಲ್ಲ ಮತ್ತು ಅದು ಮಗುವಿಗೆ ಮಾನಸಿಕವಾಗಿ ತೊಂದರೆ ನೀಡುತ್ತದೆ" ಎಂದು ಮಗುವಿನ ತಂದೆ ಮನೋಜ್ ಬಾದಲ್ ಹೇಳಿದ್ದಾರೆ.
ಸಂಸ್ಥೆಯು ಯಾರನ್ನೂ ಅನುತ್ತೀರ್ಣಗೊಳಿಸಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಅಂಕಗಳ ಕಾರ್ಡ್ ಯುನಿಟ್ ಪರೀಕ್ಷೆಗೆ ಸಂಬಂಧಿಸಿದೆ. ಫಲಿತಾಂಶಗಳಿಗಾಗಿ ಶಾಲೆಯು ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸುತ್ತದೆ. ಈ ವಿಷಯವನ್ನು ಪೋಷಕರ ಗಮನಕ್ಕೆ ತರಲಾಗಿದ್ದು, ಇದನ್ನು ಸರಿಪಡಿಸಲು ಸಾಫ್ಟ್ವೇರ್ ಕಂಪನಿಗೆ ತಿಳಿಸಲಾಗಿದೆ ಎಂದಿದೆ.
ಇನ್ನು, ಆನೇಕಲ್ನ ಬ್ಲಾಕ್ ಶಿಕ್ಷಣಾಧಿಕಾರಿ ಜಯಲಕ್ಷ್ಮಿ ಅವರು ಶಾಲೆಗೆ ನೋಟಿಸ್ ಜಾರಿ ಮಾಡಿದ್ದು, ಈ ಕುರಿತು ಸ್ಪಷ್ಟನೆ ಕೇಳಿದ್ದಾರೆ. ಗುರುವಾರದೊಳಗೆ ಲಿಖಿತ ಸ್ಪಷ್ಟನೆ ಸಲ್ಲಿಸುವಂತೆ ಇಲಾಖೆ ಸೂಚಿಸಿದ್ದು, ತಪ್ಪಿದಲ್ಲಿ ಶಾಲೆಗೆ ನೀಡಿರುವ ಅನುಮತಿಯನ್ನು ಹಿಂಪಡೆಯಲಾಗುವುದು ಎಂದು ನೋಟಿಸ್ನಲ್ಲಿ ಎಚ್ಚರಿಸಲಾಗಿದೆ.











Click it and Unblock the Notifications