Don't Speak in Kannada: ಕನ್ನಡ ಮಾತನಾಡಿದ್ದಕ್ಕಾಗಿ ಕೆಲಸದಿಂದ ವಜಾ- ಇದು ನಡೆದಿದ್ದು ಬೆಂಗಳೂರಿನಲ್ಲಿ
ಕನ್ನಡ ಮಾತನಾಡುವವರಿಗೆ ಕರ್ನಾಟಕದಲ್ಲಿ ಬೆಲೆ ಇಲ್ಲದಂತಾಗಿದೆ. ಕನ್ನಡ ನಮ್ಮ ಮಾತೃ ಭಾಷೆ. ಕರ್ನಾಟಕದಲ್ಲಿ ಪ್ರತಿಯೊಬ್ಬರು ನಮ್ಮ ಮಾತೃ ಭಾಷೆಗೆ ಗೌರವ ಕೊಡಬೇಕು ಅಂದರೆ ಕನ್ನಡದಲ್ಲಿ ಮಾತನಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತನಾಡುವವರನ್ನು ಕೀಳಾಗಿ ಕಾಣುತ್ತಿರುವ ಘಟನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕಾಗಿ ಕೆಲಸದಿಂದ ವಜಾ ಮಾಡಲಾಗಿದೆ.
ಹೌದು... ಮೊನ್ನೆಯಷ್ಟೇ ಯುವತಿಯೊಬ್ಬಳು ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯಾದರೆ ಮಂಗಳೂರು ಉಡುಪಿಯಲ್ಲಿ ತುಳು ಮಾತೃ ಭಾಷೆ ಎಂದು ದುರಹಂಕಾರದ ಮಾತುಗಳನ್ನು ಆಡಿದ್ದಳು. ಈ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ತುಳು ಬಗ್ಗೆ ಪಾಠ ಕೇಳಲು ಬಂದ ಯುವತಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು.

ಆದರೆ ಇಲ್ಲೊಬ್ಬ ವ್ಯಕ್ತಿ ಕನ್ನಡ ಮಾತನಾಡುವವರಿಗೆ ಮರೆಯಾದೆ ಇಲ್ಲವೆಂಬಂತೆ ನಡೆದುಕೊಂಡಿದ್ದಾನೆ. ಅಷ್ಟೇ ಅಲ್ಲ ಕನ್ನಡ ಮಾತನಾಡಿದ್ದಕ್ಕಾಗಿ ಕೆಲಸದಿಂದ ವಜಾ ಕೂಡ ಮಾಡಿದ್ದಾನೆ. ಆತ ಮಾಡಿದ ಸಂದೇಶ ಕನ್ನಡಿಗರನ್ನು ಕೆಣಕಿಸಿದೆ. ಅನುರಾಗ್ ಜೈಸಿಂಗ್ ಎಂಬ ವ್ಯಕ್ತಿ ಖಾತೆಯಲ್ಲಿ ''ನನ್ನ ತಂಡದಲ್ಲಿರುವ ಯಾವುದೇ ಕನ್ನಡದವನು ಹಿಂದಿಯಲ್ಲಿ ಮಾತನಾಡಬೇಕು. ಇಲ್ಲದಿದ್ದರೆ ಅವನಿಗೆ/ಆಕೆಗೆ ಹೊರಹೋಗಲು ಬಾಗಿಲು ತೋರಿಸಲಾಗುತ್ತದೆ'' ಎಂದು ಬರೆಯಲಾಗಿದೆ.
ಇದಕ್ಕೂ ಮುನ್ನ ಗಣೇಶ ಚೇತನ್ ಎಂಬ ವ್ಯಕ್ತಿ ''ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ ಅದನ್ನು ಮಾಡಿ. ನೀವು ಅದನ್ನು ಹೇಗೆ ಮಾಡ್ತೀರಾ ಎಂದು ನಾನು ನೋಡುತ್ತೇನೆ'' ಎಂದು ಬರೆದಿದ್ದಾರೆ. ಇದಕ್ಕೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಗಣೇಶ ಚೇತನ್ ಹಾಗೂ ಅನುರಾಗ್ ಜೈಸಿಂಗ್ ಎಂಬುವವರ ನಡುವಿನ ಮೆಸೇಜ್ ಸ್ಕ್ರೀನ್ ಶಾಟ್ ಅನ್ನು ಫೇಸ್ ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ.

ಈ ರೀತಿಯ ಆದೇಶ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡದೆ ಇನ್ಯಾವ ಭಾಷೆ ಮಾತನಾಡುತ್ತಾರೆ. ಇದು ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯ. ಇಂಥಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸ ಮಾಡುವ ಸ್ಥಳಗಳಲ್ಲಿ ಪ್ರಾಶಸ್ತ್ಯ ನೀಡಲಾಗುತ್ತಿಲ್ಲ. ಬೇರೆ ರಾಜ್ಯದಿಂದ ಬಂದವರಿಗೆ ಆದ್ಯತೆ ನೀಡಿ ಕನ್ನಡ ಮಾತನಾಡುವವರನ್ನು ಕಡೆಗಣಿಸಲಾಗುತ್ತಿದೆ. ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಮಾತನಾಡುವಂತೆ ಒತ್ತಡ ಹೇರಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಕನ್ನಡ ಮಾತನಾಡುವವರನ್ನು ಕಡೆಗಣಿಸಿ ಅವಮಾನ ಮಾಡುವಂತಹ ಘಟನೆಗಳು ಹೆಚ್ಚಾಗಿವೆ. ಹೀಗಾಗಿ ಇಂತಹ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಒತ್ತಾಯ ಹೆಚ್ಚಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಕನ್ನಡ ಬೋರ್ಡ್ ಕಡ್ಡಾಯಗೊಳಿಸಲಾಗಿದೆ. ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ನಾಮಫಲಕಗಳನ್ನು ಹಾಕುವುದಕ್ಕೆ ಕಡಿವಾಣ ಹೇರಲಾಗಿದೆ. ಆದರೆ ಕನ್ನಡಕ್ಕೆ ಮೊದಲು ಆದ್ಯತೆ ನೀಡುವಂತೆ ಕನ್ನಡ ನೆಲದಲ್ಲಿ ಒತ್ತಾಯ ಮಾಡುತ್ತಿರುವುದು ನಮ್ಮ ದೌರ್ಬಾಗ್ಯವೇ ಸರಿ.
ಆದರೆ ಕನ್ನಡಿಗರಾದ ನಾವು ನಮ್ಮ ಭಾಷೆ, ನೆಲ, ಜಲಕ್ಕೆ ಗೌರವ ಕೊಡಬೇಕು. ಕನ್ನಡ ನೆಲದ ನೀರು ಕುಡಿದು, ಕನ್ನಡ ನೆಲದ ಅನ್ನ ತಿಂದು, ಕನ್ನಡ ಭಾಷೆಗೆ ನಾವು ಗೌರವ ಕೊಡದೇ ಹೋದರೆ ನಮ್ಮ ತಾಯಿಗೆ ನಾವು ಗೌರವ ಕೊಡದಂತಾಗುತ್ತದೆ. ಇದರ ಅರಿವು ಇದ್ದರೆ ಇಂತಹ ತಪ್ಪು ಮರುಕಳಿಸುವುದಿಲ್ಲ.












Click it and Unblock the Notifications