ಬೆಂಗಳೂರಿನ 52ನೇ, ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸಂದರ್ಶನ
Recommended Video

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವಣ ವಾಗ್ಯುದ್ದ ಒಂದು ಹಂತದಲ್ಲಿ ಕೈಕೈಮಿಲಾಯಿಸುವ ಹಂತಕ್ಕೆ ಹೋಗಿತ್ತು.
ಆದರೆ, ನಿರೀಕ್ಷೆಯಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಮೇಯರ್ ಸ್ಥಾನ ಕಾಂಗ್ರೆಸ್ಸಿಗೆ ಮತ್ತು ಉಪಮೇಯರ್ ಸ್ಥಾನ ಜೆಡಿಎಸ್ ಪಕ್ಷಕ್ಕೆ ಒಲಿದಿತ್ತು. ಇಲ್ಲಿ, ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡ, ರಾಮಲಿಂಗ ರೆಡ್ಡಿ ತಾನು ಸೂಚಿಸಿದವರನ್ನು ಮೇಯರ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಜಯನಗರ (153) ವಾರ್ಡನ್ನು ಪ್ರತಿನಿಧಿಸುವ ಮತ್ತು ಬೆಂಗಳೂರಿನ 52ನೇ ಮೇಯರ್ ಆಗಿ ಆಯ್ಕೆಯಾಗಿರುವ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ಜೊತೆ 'ಒನ್ ಇಂಡಿಯಾ' ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ, ಇಂತಿದೆ:
ಪ್ರ: ನೂತನ ಮೇಯರ್ ಆಗಿ ಆಯ್ಕೆಯಾಗಿದ್ದೀರಿ, ಬಹಳ ದೊಡ್ಡ ಜವಾಬ್ದಾರಿ, ಹೇಗೆನಿಸುತ್ತಿದೆ?
ಮೇಯರ್: ತುಂಬಾ ಜವಾಬ್ದಾರಿಯಿಂದ ಮತ್ತು ಹುಷಾರಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಮಾಧ್ಯಮಗಳ ಮುಂದೆ ನಾನು ಕೊಡುವ ಭರವಸೆ ಹುಸಿಯಾಗಬಾರದು. ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಎಲ್ಲಾ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಇದೊಂದು ದೊಡ್ಡ ಚಾಲೆಂಜ್, ಖಂಡಿತ ಇದನ್ನು ನಿಭಾಯಿಸುತ್ತೇನೆ ಎನ್ನುವ ವಿಶ್ವಾಸವಿದೆ. ಮುಂದೆ ಓದಿ

ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸಂದರ್ಶನ
ಪ್ರ: ಮೇಯರ್ ಆಗಿ, ಮೊದಲ ಆದ್ಯತೆಯಿಂದ ಮಾಡಬೇಕಾದ ಕೆಲಸಗಳು ಯಾವುದು?
ಮೇಯರ್ : ಈ ಹಿಂದಿನಿಂದಲೂ ನಾನು ಹೇಳುತ್ತಿದ್ದಂತೆ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಪರಿಸರ, ಹೂಳೆತ್ತುವ ಕೆಲಸ, ಬಿಬಿಎಂಪಿ ಆಸ್ತಿಗಳ ಅತಿಕ್ರಮಣ ತಡೆಗಟ್ಟುವುದು, ಕೆರೆಗಳ ಅಭಿವೃದ್ದಿ ಮುಂತಾದ ಕೆಲಸಗಳ ಬಗ್ಗೆ ಗಮನ ಹರಿಸುತ್ತೇನೆ. ಈಗಾಗಲೇ ಸಾಕಷ್ಟು ಕೆಲಸಗಳು ನಡೆದಿವೆ, ಅಭಿವೃದ್ದಿಯ ವೇಗವನ್ನು ಹೆಚ್ಚಿಸುವ ಕೆಲಸವಾಗಬೇಕಾಗಿದೆ.
ಕೆಲವು ಕಡೆ ಒಳಚರಂಡಿ ನೀರು ಕೆರೆಗೆ ಸೇರ್ಪಡೆಯಾಗುತ್ತಿದೆ, ಇದನ್ನು ತಡೆಗಟ್ಟಬೇಕು. BWSSB ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತೇನೆ, ತುಂಬಾ ಹಳೆಯ ಪೈಪ್ ಲೈನ್ ಗಳನ್ನು ಬದಲಾಯಿಸುವ ಕೆಲಸವಾಗಬೇಕಾಗಿದೆ. ಈ ಎಲ್ಲಾ ಕೆಲಸಗಳನ್ನು ಮೊದಲ ಆದ್ಯತೆಯಿಂದ ಮುಗಿಸಬೇಕಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿ
ಪ್ರ: ಮೇಯರ್ ಆಯ್ಕೆಯ ವೇಳೆ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿಯ ಬಗ್ಗೆ?
ಮೇಯರ್ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ವಿದ್ಯಮಾನ ನಡೆಯಬಾರದಾಗಿತ್ತು, ಆ ವಿಚಾರದ ಬಗ್ಗೆ ನನಗೆ ತುಂಬಾ ಬೇಸರ ತಂದಿದೆ.
ಪ್ರ: ರಾಜಕೀಯದಲ್ಲಿ ರಾಮಲಿಂಗ ರೆಡ್ಡಿಯವರ ಪ್ರಭಾವ ಹೇಗಿದೆ?
ಮೇಯರ್: ರಾಜಕೀಯದ ನನ್ನ ಗಾಡ್ ಫಾದರ್ ರಾಮಲಿಂಗ ರೆಡ್ಡಿಯವರು. ರಾಜಕೀಯದಲ್ಲಿ ನಾನು ಈ ಹಂತಕ್ಕೆ ಬರುತ್ತೇನೆ ಅಂದರೆ, ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಅದಕ್ಕೆ ರೆಡ್ಡಿಯವರೇ ಕಾರಣ. ಅವರ ಬೆಂಬಲವಿಲ್ಲದಿದ್ದರೆ, ನಾನು ಮೇಯರ್ ಆಗಿ ಆಯ್ಕೆಯಾಗುತ್ತಿರಲಿಲ್ಲ.

ಮಳೆ ಅಂದರೆ ಬೆಂಗಳೂರಿನ ಜನರಿಗೆ, ನೈಟ್ ಮೇರ್
ಪ್ರ: ಬಿಬಿಎಂಪಿಯ ಆಸ್ತಿಗಳು ಇನ್ನೂ ಅಡಮಾನ ಇಟ್ಟಿರುವಂತದ್ದು ಎಷ್ಟಿದೆ?
ಮೇಯರ್ : ಕಾಂಗ್ರೆಸ್ ಅವಧಿಯಲ್ಲಿ, ಶಿವರಾಜ್ ಅವರು ಟ್ಯಾಕ್ಸ್ ಕಲೆಕ್ಷನ್ ವಿಭಾಗದ ಅಧ್ಯಕ್ಷರಾಗಿದ್ದಾಗ ಸುಮಾರು ಅಡಮಾನ ಇಟ್ಟಂತಹ ಆಸ್ತಿಗಳನ್ನು ಬಿಡಿಸಿಕೊಂಡಿದ್ದಾರೆ. ಹಿಂದಿನ ಅಧಿಕಾರದ ಅವಧಿಯಲ್ಲಿ ಯಾರ್ಯಾರು ಆಸ್ತಿಯನ್ನು ಅಡಮಾನ ಇಟ್ಟಿದ್ದರೋ, ಅದನ್ನೆಲ್ಲಾ ಬಿಡಿಸಿಕೊಳ್ಳುವ ಜವಾಬ್ದಾರಿ ಕೂಡಾ ಇದೆ. ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಾ ಇದೆ, ಮುಂದಕ್ಕೂ ನಡೆಯುತ್ತದೆ.
ಪ್ರ: ಮಳೆ ಅಂದರೆ ಬೆಂಗಳೂರಿನ ಜನರಿಗೆ, ನೈಟ್ ಮೇರ್. ಏನು ಯೋಜನೆಗಳನ್ನು ಹಾಕಿಕೊಂಡಿದ್ದೀರಾ?
ಮೇಯರ್: ಹೆಚ್ಚಿನ ಕಾಲುವೆಗಳಲ್ಲಿ ಹೂಳು ತುಂಬಿ, ನೀರು ಹೊರಗೆ ಹೋಗದಿರುವಂತಹ ಪರಿಸ್ಥಿತಿಯಿದೆ. ಮಳೆನೀರು ತಗ್ಗು ಪ್ರದೇಶಕ್ಕೆ ನುಗ್ಗುತ್ತಿದೆ, ಇದನ್ನು ತಡೆಗಟ್ಟಬೇಕು. ಇವೆರಡನ್ನು ಆದ್ಯತೆಯಿಂದ ಕೈಗೆತ್ತಿಕೊಳ್ಳುತ್ತೇವೆ. ಕೆಲವೊಂದು ಕಡೆ ಅತಿಕ್ರಮಣ ಕೂಡಾ ಮಳೆನೀರಿನ ಆವಾಂತರಕ್ಕೆ ಕಾರಣವಾಗುತ್ತಿದೆ. ಸರ್ವೇ ಇಲಾಖೆಯ ಬಳಿ ಮಾತನಾಡಿದ್ದೇವೆ, ಆ ಇಲಾಖೆಯ ವರದಿಗಳು ನಮಗೆ ಕೆಲವೇ ದಿನಗಳಲ್ಲಿ ತಲುಪಲಿದೆ. ವರದಿ ಬಂದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ.

ಮಹಿಳೆ ಆರ್ಥಿಕವಾಗಿ ಸದೃಢವಾಗಬೇಕು
ಪ್ರ: ಮಹಿಳಾ ಸುರಕ್ಷಿತೆಯ ಬಗ್ಗೆ ಏನು ಯೋಜನೆ ಹಾಕಿಕೊಂಡಿದ್ದೀರಾ?
ಮೇಯರ್: ಮಹಿಳೆ ಆರ್ಥಿಕವಾಗಿ ಸದೃಢವಾದರೆ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಬಿಬಿಎಂಪಿ ಅನೇಕ ಸ್ಕೀಂಗಳು ಮಹಿಳೆಯರಿಗಾಗಿದೆ. ಬ್ಯೂಟಿ ಪಾರ್ಲರ್ ಟ್ರೈನಿಂಗ್ ಕೋರ್ಸು, ಹೊಲಿಗೆಯಂತ್ರ ಈ ರೀತಿಯ ಹಲವಾರು ಯೋಜನೆಗಳು ಮಹಿಳೆಯರಿಗಾಗಿ ಇದೆ. ಇನ್ನೇನು ಹೊಸ ಕಾರ್ಯಕ್ರಮಗಳನ್ನು ನಾವು ಮಾಡಬಹುದು ಎನ್ನುವುದರ ಬಗ್ಗೆ ಚಿಂತನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ.

ಮತ್ತೆ ಗುಂಡಿ ಮುಚ್ಚುವ ಕೆಲಸವನ್ನು ಮಾಡಲು ಸೂಚಿಸಿದ್ದೇವೆ
ಪ್ರ: ಗುಂಡಿ, ಪ್ಲೆಕ್ಸ್ ತೆರವುಗೊಳಿಸಲು ಹೈಕೋರ್ಟ್ ಸೂಚನೆಯ ಬಗ್ಗೆ?
ಮೇಯರ್ : ಕೋರ್ಟ್ ಸೂಚನೆಯಿದೆ, ಅಧಿಕಾರಿಗಳು ಕೆಲಸಗಳನ್ನು ಮಾಡಿಕೊಂಡು ಬರ್ತಾ ಇದ್ದಾರೆ. ಗುಣಮಟ್ಟದ ಕಾಮಗಾರಿ ಎಲ್ಲೆಲ್ಲಿ ನಡೆಯುತ್ತಿಲ್ಲ, ಅಲ್ಲಿ ಮತ್ತೆ ಗುಂಡಿ ಮುಚ್ಚುವ ಕೆಲಸವನ್ನು ಮಾಡಲು ಸೂಚಿಸಿದ್ದೇವೆ. ಗುಂಡಿ ಮುಚ್ಚಿದ ಕಡೆ, ಮತ್ತೆ ಗುಂಡಿ ಬೀಳಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಮಳೆ ಬರುತ್ತಿರುವುದರಿಂದ, ಒಂದು ಕಡೆ ಗುಂಡಿ ಮುಚ್ಚಿದರೆ, ಇನ್ನೊಂದು ಕಡೆ ಗುಂಡಿ ಬೀಳುತ್ತಿದೆ. ಗುಂಡಿಯಾಗಲು ಹಲವಾರು ಕಾರಣಗಳಿವೆ. BWSSB ಪೈಪ್ ಲೈನ್ ಎಲ್ಲೆಲ್ಲಿ ಹೋಗಿದೆಯೋ ಅಲ್ಲೆಲ್ಲಾ ಗುಂಡಿಗಳು ಬಿದ್ದಿವೆ. ನಮ್ಮ ಲೆವೆಲ್ ನಲ್ಲಿ ಆಗುವ ಕೆಲಸ ಕೋರ್ಟ್ ಮಟ್ಟಕ್ಕೆ ಹೋಗಬಾರದೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಇಂಜಿನಿಯರುಗಳು ಗಾರೆ ಕೆಲಸದವರಿಗಿಂತ ಕಡೆ ಎನ್ನುವ ಹೇಳಿಕೆ
ಪ್ರ: ಬಿಬಿಎಂಪಿ ಇಂಜಿನಿಯರುಗಳು ಗಾರೆ ಕೆಲಸದವರಿಗಿಂತ ಕಡೆ ಎನ್ನುವ ಹೇಳಿಕೆಯನ್ನು ನೀಡಿದ್ದೀರಿ?
ಮೇಯರ್: ಗಾರೆ ಕೆಲಸದವರಿಗಿಂತ ಉತ್ತಮವಾಗಿ ಕೆಲಸ ಮಾಡಲಿ ಎನ್ನುವುದು ನನ್ನ ಉದ್ದೇಶ. ಕೆಲವು ಅಧಿಕಾರಿಗಳು ಮಾತ್ರ ಆರೀತಿ ಎಂದಿದ್ದೆ, ಎಲ್ಲಾ ಅಧಿಕಾರಿಗಳು ಹಾಗಂತ ಖಂಡಿತ ಹೇಳಿಲ್ಲ. ಕೆಲವರ ಕಳಪೆ ಕೆಲಸದಿಂದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ವಾರ್ಡ್ ಇಂಜಿನಿಯರ್ ಏನು ಕೆಲಸ ಮಾಡುತ್ತಿದ್ದಾರೆ, ಅದರ ಮೇಲ್ವಿಚಾರಣೆಯನ್ನು ಅಧಿಕಾರಿಗಳು ನೋಡಿಕೊಳ್ಳಬೇಕು.
ವೈಜ್ಞಾನಿಕವಾಗಿ ಹಳ್ಳ ಮುಚ್ಚುವ ಕೆಲಸವನ್ನು ಮಾಡುತ್ತಿಲ್ಲ. ನನ್ನ ವಾರ್ಡಿನಲ್ಲೇ ನನಗೆ ಇದರ ಅನುಭವಾಗಿದೆ. ನಾನೇ ಗಾರೆ ಕೆಲಸದವರನ್ನು ಕರೆಸಿ, ಸಿಮೆಂಟ್ ಕಾಂಕ್ರೀಟ್ ಹಾಕಿಸಿದೆ. ಆ ಒಂದು ಉದಾಹರಣೆಯನ್ನು ತೆಗೆದುಕೊಂಡು ಆ ಮಾತನ್ನು ಹೇಳಿದ್ದೇನೆ. ಒಳ್ಳೆ ಅಧಿಕಾರಿಗಳು ಬಿಬಿಎಂಪಿಯಲ್ಲಿ ತುಂಬಾ ಜನರಿದ್ದಾರೆ.

ಬೆಂಗಳೂರಿನ ಜನತೆಗೆ ಮೇಯರ್ ಆಗಿ ಏನು ಭರವಸೆ ಕೊಡ್ತೀರಾ
ಪ್ರ; ಬೆಂಗಳೂರಿನ ಜನತೆಗೆ ಮೇಯರ್ ಆಗಿ ಏನು ಭರವಸೆ ಕೊಡ್ತೀರಾ?
ಮೇಯರ್: ಸದಾ ನಿಮ್ಮ ಸೇವೆಗೆ ನಾನು ಸಿದ್ದನಾಗಿದ್ದೇನೆ, ಸಾರ್ವಜನಿಕರ ಯಾವುದೇ ತೊಂದರೆಗಳು ಇರಬಹುದು, ಅದನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿದರೆ ಅಥವಾ ಕರೆ ಮಾಡಿದರೆ ನಾವು ಅದಕ್ಕೆ ಸ್ಪಂದಿಸುತ್ತೇವೆ. ಒಂದೊಂದು ವಿಭಾಗದಲ್ಲೂ ವೆಲ್ ಫೇರ್ ಅಶೋಶಿಯೇಷನ್ ಗಳಿವೆ. ಅವರನ್ನೂ ಮೀಟಿಂಗ್ ಮಾಡಿದಾಗ ಆಹ್ವಾನಿಸುತ್ತೇನೆ.
ಒಂದು ವೇಳೆ, ಫೋನ್ ಸ್ವೀಕರಿಸಲು ಆಗದೇ ಇದ್ದಲ್ಲಿ, ಮೆಸೇಜ್ ಮಾಡಿ. ಬಿಬಿಎಂಪಿ ನಿಮ್ಮ ಸೇವೆಗೆ ಸದಾಸಿದ್ದ.












Click it and Unblock the Notifications