ಜನಾರ್ದನ ರೆಡ್ಡಿಗೆ ಆಂಬಿಡೆಂಟ್ 20 ಕೋಟಿ ಕೊಟ್ಟಿದ್ದೇಕೆ? ಡೀಟೇಲ್ಸ್ ಇಲ್ಲಿದೆ
ಬೆಂಗಳೂರು, ನವೆಂಬರ್ 7: ಆಂಬಿಡೆಂಟ್ ಮಾರ್ಕೆಟಿಂಗ್ ಅವ್ಯವಹಾರ ಬಯಲಿಗೆ ಬರದಂತೆ ನೋಡಿಕೊಳ್ಳಲು ಮಾಜಿ ಸಚಿವ ಜನಾರ್ದನ ರೆಡ್ಡಿ ಇಡಿ ಅಧಿಕಾರಿಯ ಜೊತೆ ನಡೆಸಿರುವ ಡೀಲ್ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಸಿಸಿಬಿ ಪೊಲೀಸರು ನೀಡಿದ್ದಾರೆ.
ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಬಿಜೆಪಿ ನಾಯಕ ಜನಾರ್ದನ ರೆಡ್ಡಿಗೆ ಸಿಸಿಬಿ ಪೊಲೀಸರಿಂದ ಮತ್ತೆ ಸಂಕಷ್ಟ ಎದುರಾಗಿದೆ. ಆಂಬಿಡೆಂಟ್ ಚಿಟ್ಫಂಡ್ ವಂಚನೆ ಪ್ರಕರಣದಲ್ಲಿ ಈಗ ಜನಾ ರೆಡ್ಡಿಯ ಹೆಸರು ಕೂಡ ತಳುಕು ಹಾಕಿಕೊಂಡಿದ್ದು, ಸಿಸಿಬಿ ಪೊಲೀಸರು ಅವರ ಹುಡುಕಾಟದಲ್ಲಿ ತೊಡಗಿದ್ದಾರೆ.
ಆಂಬಿಡೆಂಟ್ ಹೆಸರಿನ ಚಿಟ್ಫಂಡ್ ಸಂಸ್ಥೆಯಲ್ಲಿ ನೂರಾರು ಕೋಟಿ ಅಕ್ರಮ ನಡೆದಿತ್ತು. ಈ ಸಂಸ್ಥೆಗೆ ಜನಾರ್ದನ ರೆಡ್ಡಿ ಕೂಡ ಬೆಂಬಲ ನೀಡಿದ್ದರು ಎನ್ನಲಾಗಿದೆ. ಚಿಟ್ಫಂಡ್ ಪ್ರಕರಣದಲ್ಲಿ ರೆಡ್ಡಿ ಆಪ್ತ ಸಹಾಯಕ ಅಲಿಖಾನ್ ಪಾತ್ರ ಕೂಡ ಇದೆಯಂತೆ. ಅಲಿಖಾನ್ ಹಣ ವರ್ಗಾವಣೆ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂಬ ವಿವರ ಸಿಸಿಬಿ ಪೊಲೀಸರು ನೀಡಿದ್ದಾರೆ.
ಈ ಕುರಿತು ತನಿಖೆ ನಡೆಸಿದಾಗ ಅಲಿಖಾನ್ ಹಣ ವರ್ಗಾವಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ರೆಡ್ಡಿ ಸೂಚನೆ ಮೇರೆಗೆ ಆತ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪಗಳಿವೆ. ಇನ್ನು ರೆಡ್ಡಿ ಮಗಳ ಮದುವೆಗೆ ಈ ಚಿಟ್ಫಂಡ್ನಿಂದ ಹಣ ವರ್ಗಾವಣೆ ಆಗಿದೆಯಂತೆ ಎಂಬ ವಿವರಗಳೂ ಬಹಿರಂಗವಾಗಿವೆ.
ಎಂಇಪಿಯ ನೌಹೀರಾ ಶೇಖ್ರಿಂದ ಕೋಟ್ಯಂತರ ಹಣ ಪಡೆದಿದ್ದ ರೆಡ್ಡಿ
ಅಷ್ಟೇ ಅಲ್ಲ, ಅಲಿಖಾನ್ ಮೂಲಕ 57 ಕೆ.ಜಿ. ಚಿನ್ನದ ಗಟ್ಟಿ ವರ್ಗಾವಣೆ ಆಗಿದೆ. ಈ ಪ್ರಕರಣದ ತನಿಖೆಗೆ ಚುರುಕು ಮುಟ್ಟಿಸಿರುವ ಅಧಿಕಾರಿಗಳು ರೆಡ್ಡಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೋಟಿ ಕೋಟಿ ವಂಚನೆಯ ಈ ಪ್ರಕರಣದ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ...
ಆಂಬಿಡೆಂಡ್ ಸಂಸ್ಥೆಯ ವಂಚನೆ
ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೈಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಡಿ.ಜಿ. ಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ನಂ-9/ಎ, 1 ನೇ ಮಹಡಿ, ಕೆ.ಹೆಚ್.ಬಿ ಮುಖ್ಯರಸ್ತೆ, ಕನಕನಗರದಲ್ಲಿದೆ. ಈ ಕಂಪನಿಯನ್ನು ಸೈಯದ್ ಅಹಮದ್ ಫರೀದ್ ನಡೆಸುತ್ತಿದ್ದ, ಈತ ಸಾರ್ವಜನಿಕರಿಗೆ 4 ತಿಂಗಳ ಅವಧಿಗೆ ಶೇ. 40 ನಿಂದ ಶೇ. 50 ಬಡ್ಡಿ ಹಣವನ್ನು ನೀಡುವುದಾಗಿ ನಂಬಿಸಿ 600 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುತ್ತಾನೆ.
ಈತನಿಂದ ವಂಚನೆಗೊಳಗಾದವರ ಪೈಕಿ ಸರ್ಫರಾಜ್ ಆಲಂ ತಬರೇಜ್ ರವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಮೊ.ಸಂ. 137/2018 ಕಲಂ 420, ಐಪಿಸಿ. ಕಲಂ 4, 5, 6, ಪ್ರೈಜ್ ಚಿಟ್ & ಮನಿ ಸರ್ಕೂಲೇಷನ್ ಸ್ಕೀಮ್ ಬ್ಯಾನಿಂಗ್ ಆಕ್ಟ್ 1978. ಪ್ರಕಾರ 2018ರ ಮೇ ತಿಂಗಳಲ್ಲಿ ಪ್ರಕರಣಗಳು ದಾಖಲಾಗಿದೆ.
ಬಂಧನ ಭೀತಿ: ಹೈದರಾಬಾದ್ನಲ್ಲಿ ಜಾಮೀನಿಗೆ ಮೊರೆ ಹೋದ ರೆಡ್ಡಿ
ತನಿಖೆ ಸಿಸಿಬಿಗೆ ವರ್ಗಾವಣೆ
ಈ ವಂಚನೆಯಲ್ಲಿ ವಂಚನೆಗೆ ಒಳಗಾಗಿರುವ ಸಾರ್ವಜನಿಕರು ನೀಡಿದ ಮನವಿ ಮೇರೆಗೆ ಈ ಸಂಬಂಧ ವರದಿಯಾಗಿರುವ ಎಲ್ಲಾ ಪ್ರಕರಣಗಳ ಮುಂದಿನ ತನಿಖೆಯನ್ನು ಬೆಂಗಳೂರು ನಗರದ ಸಿಸಿಬಿ ಘಟಕಕ್ಕೆ ಮಾನ್ಯ ಪೊಲೀಸ್ ಆಯುಕ್ತರು ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆಗೊಂಡ ಪ್ರಕರಣಗಳ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿ ಚುರುಕುಗೊಳಿಸಿದ ಸಿಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡಗಳು ಆರೋಪಿ ಸೈಯದ್ ಅಹಮದ್ ಫರೀದ್ ಈತನನ್ನು ದಸ್ತಗಿರಿಪಡಿಸಿ ವಿಚಾರಣೆಗೊಳಪಡಿಸಿದಾಗ ಈತ ಸಾರ್ವಜನಿಕರಿಂದ ಕೋಟ್ಯಂತರ ಹಣವನ್ನು ಸಂಗ್ರಹಿಸಿ ಹಲವಾರು ಜನರ ಬಳಿ ಹೂಡಿಕೆ ಮಾಡಿರುವುದಾಗಿ ಮತ್ತು ಅಕ್ರಮ ಹಣಕಾಸಿನ ವ್ಯವಹಾರದಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ಈತನ ಕಛೇರಿ ಮತ್ತು ಮನೆಗಳ ಮೇಲೆ ಇ.ಡಿ. ಇಲಾಖೆಯಿಂದ ದಾಳಿ ನಡೆದು ಈತನ ಬ್ಯಾಂಕ್ನ ಹಣಕಾಸಿನ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿದೆ.
ಜನಾರ್ದನ ರೆಡ್ಡಿ ಪಾಪಕ್ಕೆ ಮಕ್ಕಳಿಗೆ ಶಿಕ್ಷೆ ಆಗದಿರಲಿ: ಸಿದ್ದರಾಮಯ್ಯ ಟ್ವೀಟ್
ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಭೇಟಿ
ಸೈಯದ್ ಅಹಮದ್ ಫರೀದ್, ಈತನ ವಿರುದ್ದ ಇ.ಡಿ. ಯಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಸಹಾಯಕ ಕೋರಿ ಜನಾರ್ದನರೆಡ್ಡಿ ಹಾಗೂ ಆತನ ಆಪ್ತ ಆಲಿಖಾನ್ ರವರೊಂದಿಗೆ ಸಭೆ ನಡೆಸಿ, ಇದಕ್ಕಾಗಿ 20 ಕೋಟಿ ರೂ ಹಣವನ್ನು ನೀಡುವುದಾಗಿ ಮಾತುಕತೆ ನಡೆಸಿದ್ದಾರೆ. ಇದೇ ಸಮಯದಲ್ಲಿ ಒಪ್ಪಂದ ಪ್ರಕಾರ 20 ಕೋಟಿ ರೂ ಹಣವನ್ನು ಚಿನ್ನದ ರೂಪದಲ್ಲಿ ನೀಡುವಂತೆ ಜನಾರ್ದನರೆಡ್ಡಿಯು ಷರತ್ತು ವಿಧಿಸಿದ್ದು, ಅದರಂತೆ ಸೈಯದ್ ಅಹಮ್ಮದ್ ಫರೀದನು ಜನಾರ್ಧನರೆಡ್ಡಿಯ ಆಪ್ತ ಅಲಿಖಾನ್ಗೆ ಪರಿಚಯ ವಿರುವ ಬಳ್ಳಾರಿಯ ರಾಜಮಹಲ್ ಪ್ಯಾನ್ಸಿ ಜುವೆಲ್ಲರ್ಸ್ನ ರಮೇಶ್ ಎಂಬುವವರ ಮೂಲಕ ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾರ್ಪೋರೇಷನ್ನ ರಮೇಶ್ ಕೊಠಾರಿ ರವರ ಬಳಿ 18 ಕೋಟಿ ಮೊತ್ತದ 57 ಕೆ.ಜಿ ಚಿನ್ನವನ್ನು ಖರೀದಿ ಮಾಡಿ ಅದನ್ನು ಜನಾರ್ಧನರೆಡ್ಡಿ ರವರಿಗೆ ತಲುಪಿಸಿರುವ ಅಂಶ ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ
ರಾಜಮಹಲ್ ಪ್ಯಾಲೇಸ್ನಿಂದ ದಾಖಲೆಗಳ ವಶ
ಈ ಮಾಹಿತಿ ಆಧಾರದ ಮೇಲೆ ಬಳ್ಳಾರಿಯ ರಾಜ್ಮಹಲ್ ಪ್ಯಾನ್ಸಿ ಜುವೆಲರ್ಸ್ನ ರಮೇಶ್ನನ್ನು ದಸ್ತಗಿರಿ ಮಾಡಿರುವ ಸಿಸಿಬಿ ಪೊಲೀಸರು ಹಲವು ಮಹತ್ವದ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವ ಜನಾರ್ಧನರೆಡ್ಡಿ ಹಾಗೂ ಆಲಿಖಾನ್ ರವರ ಪತ್ತೆ ಕಾರ್ಯ ಮುಂದುವರೆದಿದ್ದು, ಇದಕ್ಕಾಗಿ ಸಿಸಿಬಿ ಘಟಕದ ಎಸಿಪಿ ರವರುಗಳಾದ ಪಿ.ಟಿ. ಸುಬ್ರಮಣ್ಯ, ಮರಿಯಪ್ಪ, ಮೋಹನ್ ಕುಮಾರ್, ಮಂಜುನಾಥ ಚೌಧರಿ ರವರುಗಳ ನೇತೃತ್ವದ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಮಾನ್ಯ ಪೊಲೀಸ್ ಆಯುಕ್ತರವರಾದ ಟಿ.ಸುನೀಲ್ ಕುಮಾರ್, ಐಪಿಎಸ್ ರವರ ನಿರ್ದೇಶನದ ಮೇರೆಗೆ, ಅಪರ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ರವರಾದ ಆಲೋಕ್ ಕುಮಾರ್, ಐಪಿಎಸ್ ಮತ್ತು ಉಪ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ ರವರಾದ ಗಿರೀಶ್.ಎಸ್, ಐಪಿಎಸ್ ರವರ ನೇರ ಮಾರ್ಗದರ್ಶನದಲ್ಲಿ ಡಾ: ಹೆಚ್.ಎನ್. ವೆಂಕಟೇಶ ಪ್ರಸನ್ನ ನೇತೃತ್ವದ ತಂಡವು ತನಿಖೆ ಕೈಗೊಂಡಿದೆ.