ಜಿಲ್ಲಾಧಿಕಾರಿ, ಎಸ್ಪಿಗಳ ವರದಿ ಬಳಿಕ ಗಣೇಶೋತ್ಸವಕ್ಕೆ ಅವಕಾಶ: ಸಚಿವ ಆರ್. ಅಶೋಕ್
ಬೆಂಗಳೂರು, ಆಗಸ್ಟ್ 30: "ಗಣೇಶ ಹಬ್ಬ ಆಚರಣೆಗೆ ಅವಕಾಶ ವಿಚಾರವಾಗಿ ಇಂದು (ಆಗಸ್ಟ್ 30) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಸಿದ ಸಭೆಯಲ್ಲಿ ಚರ್ಚಿಸಲಾಗಿದೆ. ಗಣೇಶ ಆಚರಣೆ ಬಗ್ಗೆ ಮತ್ತೊಮ್ಮೆ ಸಭೆ ಕರೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ," ಎಂದು ಸಚಿವ ಆರ್. ಅಶೋಕ್ ಹೇಳಿದರು.
"ಪ್ರತಿ ತಾಲ್ಲೂಕಿನಲ್ಲಿ ಹಬ್ಬ ಆಚರಣೆ ಬಗ್ಗೆ ಮಾಹಿತಿ ಪಡೆದು ಸಭೆ ನಡೆಸಲಾಗುವುದು. ಸೆಪ್ಟೆಂಬರ್ 5 ರಂದು ಆ ಬಗ್ಗೆ ಅಂತಿಮ ಸಭೆ ಮಾಡಲಾಗುವುದು. ಸಭೆ ಬಳಿಕ ಗಣೇಶ ಉತ್ಸವ ಆಚರಣೆ ಬಗ್ಗೆ ನಿರ್ಧಾರ ಮಾಡಲಾಗುವುದು," ಎಂದು ಕಂದಾಯ ಆರ್. ಅಶೋಕ್ ತಿಳಿಸಿದರು.
"ಕೋವಿಡ್ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಎಚ್ಚರದಿಂದ ಇರಬೇಕಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಗಣೇಶೋತ್ಸವ ಆಚರಣೆ ಮಾಡಲಾಗುತ್ತದೆ. ಹೀಗಾಗಿ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿಗಳ ಜತೆ ಮಾತುಕತೆ ನಡೆಸಿದ್ದೇವೆ. ಗಣೇಶೋತ್ಸವ ಆಚರಣೆ ಸಂಬಂಧ ಆಯೋಜಕರ ಜತೆ ಚರ್ಚೆ ಮಾಡಬೇಕಿದೆ," ಎಂದರು.
"ಹಿಂದಿನ ವರ್ಷಗಳಲ್ಲಿ ಅದ್ಧೂರಿಯಾಗಿ ಆಚರಿಸಿದ್ದವರ ಜತೆ ಸಭೆ ಮಾಡುತ್ತೇವೆ. ಜಿಲ್ಲಾಧಿಕಾರಿ, ಎಸ್ಪಿಗಳು ಕರೆದು ಚರ್ಚೆ ನಡೆಸಿ ವರದಿ ನೀಡುತ್ತಾರೆ. ಆ ಬಳಿಕ, ಸೆಪ್ಟೆಂಬರ್ 5 ರಂದು ಸಿಎಂ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದೇವೆ. ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಗಣೇಶೋತ್ಸವ ಆಚರಣೆಗೆ ಅನುಮತಿ ಸಿಗುವ ಎಲ್ಲಾ ಸಾಧ್ಯತೆ ಇದೆ. ನಮ್ಮ ಸರ್ಕಾರ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಲಿದೆ," ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಸೆಪ್ಟೆಂಬರ್ 5ರ ಭಾನುವಾರ ಗಣೇಶೋತ್ಸವ ಮಾರ್ಗಸೂಚಿಗಳ ಸಂಬಂಧ ಸಭೆ ಇದ್ದು, ಗಣೇಶೋತ್ಸವ ಆಚರಣೆ ಸಂಬಂಧ ನಿರ್ಧಾರ ಸದ್ಯಕ್ಕೆ ಇಲ್ಲ. ಜಿಲ್ಲಾವಾರು ಆಯೋಜಕರ ಅಭಿಪ್ರಾಯ ಪಡೆದು ನಿರ್ಧಾರ ತಿಳಿಸಲಾಗುವುದು ಎಂದು ಹೇಳಲಾಗಿದೆ.
ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಅವಕಾಶ ವಿಚಾರವಾಗಿ ತಾಂತ್ರಿಕ ಸಲಹಾ ಸಮಿತಿ ಸಭೆಗೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಜತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿತ್ತು. ಸಭೆಯಲ್ಲಿ ಚರ್ಚಿಸುವ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಮಾಹಿತಿ ಪಡೆದಿದ್ದರು.
ಆರೋಗ್ಯ ಇಲಾಖೆಯಿಂದ ಸಿದ್ಧತೆ ಬಗ್ಗೆ ವರದಿ ಪಡೆದಿದ್ದರು. ಈ ವೇಳೆ, 1 ರಿಂದ 8ನೇ ತರಗತಿ ಆರಂಭಕ್ಕೆ ಸಿದ್ಧತೆ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಶಿಕ್ಷಣ ಇಲಾಖೆ ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಮಾಹಿತಿ ಲಭ್ಯವಾಗಿತ್ತು.
ಸಿಎಂ ಬಸವರಾಜ ಬೊಮ್ಮಾಯಿ ಗೃಹಕಚೇರಿ ಕೃಷ್ಣಾದಲ್ಲಿ ತಜ್ಞರ ಜತೆ ಸಭೆ ನಡೆಸಲಾಗಿದೆ. ಸಚಿವರಾದ ಕೆ. ಸುಧಾಕರ್, ಬಿ.ಸಿ. ನಾಗೇಶ್, ಆರ್. ಅಶೋಕ್, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಡಿಜಿ & ಐಜಿಪಿ ಪ್ರವೀಣ್ ಸೂದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸಭೆಯಲ್ಲಿ ಭಾಗಿ ಆಗಿದ್ದಾರೆ.
ಸಿಎಂ ನೇತೃತ್ವದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಪ್ರಾಥಮಿಕ ಶಾಲೆಗಳ ಭೌತಿಕ ತರಗತಿ ಆರಂಭ ವಿಚಾರ, 9- 12ನೇ ತರಗತಿಗಳ ಪ್ರತಿಕ್ರಿಯೆ ಪಡೆಯುವುದು, ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕಾ, ನೀಡಬಾರದಾ ಎಂಬ ಬಗ್ಗೆಯೂ ಮಾತುಕತೆ ನಡೆಸಲಾಗಿದೆ.
Recommended Video
ಇದೇ ವೇಳೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಲಾಗಿದೆ. ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳ ಪರಿಸ್ಥಿತಿ ಪರಿಶೀಲನೆ. ಜಿಲ್ಲಾವಾರು ಕೊವಿಡ್ ಸ್ಥಿತಿಗತಿಯ ಬಗ್ಗೆ ಸಭೆಯಲ್ಲಿ ಚರ್ಚೆ, ಕೊರೊನಾ ಸೋಂಕಿನ 3ನೇ ಅಲೆ ತಡೆಗೆ ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿದೆ. ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಬಗ್ಗೆ ಸಭೆಯಲ್ಲಿ ವಿಮರ್ಶಿಸಲಾಗಿದೆ ಎಮದು ತಿಳಿದುಬಂದಿದೆ.