ಏರೋ ಇಂಡಿಯಾ ದುರ್ಘಟನೆ : ವಿಂಗ್ ಕಮಾಂಡರ್ ಸಾಹಿಲ್ ಸಾವು
ಬೆಂಗಳೂರು, ಫೆಬ್ರವರಿ 19 : ಏರೋ ಇಂಡಿಯಾ ವಿಮಾನ ಪ್ರದರ್ಶನ ನಡೆಯುವ ಮುನ್ನಾದಿನ ನಡೆದ ದುರ್ಘಟನೆಯಲ್ಲಿ ಸೂರ್ಯ ಕಿರಣ್ 7 ಜೆಟ್ ವಿಮಾನ ಚಲಾಯಿಸುತ್ತಿದ್ದ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅವರು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ದುರ್ಘಟನೆಯಲ್ಲಿ ಮತ್ತಿಬ್ಬರು ಪೈಲಟ್ ಗಳಾದ 21ಸಿ ತಂಡದ ವಿಂಗ್ ಕಮಾಂಡರ್ ವಿಜಯ್ ಶೆಲ್ಕೆ ಮತ್ತು ಸ್ಕ್ವಾಡ್ರನ್ ಲೀಡರ್ ತೇಜೇಶ್ವರ್ ಸಿಂಗ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಎಚ್ಎಎಲ್ ಬಳಿಯಿರುವ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏರೋ ಇಂಡಿಯಾ 2019 ಶೋ ಫೆಬ್ರವರಿ 20ರಿಂದ ಆರಂಭವಾಗಲಿದ್ದು 24ರವರೆಗೆ ನಡೆಯಲಿದೆ. ಮಂಗಳವಾರ 11.50 ಸುಮಾರಿಗೆ ರಿಹರ್ಸಲ್ ಮಾಡುತ್ತಿದ್ದಾಗ ಎರಡು ಸೂರ್ಯ ಕಿರಣ್ ಜೆಟ್ ವಿಮಾನಗಳು ಡಿಕ್ಕಿಯಾಗಿ ಯಲಹಂಕದ ಬಳಿ ಹಳ್ಳಿಯೊಂದರಲ್ಲಿ ಮನೆಯೊಂದರ ಮೇಲೆ ಬಿದ್ದಿವೆ.
ಏರೋ ಇಂಡಿಯಾ 2019 : ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಶಕ್ತಿ ಪ್ರದರ್ಶನ

ಒಂದು ಜೆಟ್ ವಿಮಾನದಲ್ಲಿ ಒಬ್ಬರು ಮತ್ತೊಂದರಲ್ಲಿ ಇಬ್ಬರು ಇದ್ದರು. ಮೂವರಲ್ಲಿ ಇಬ್ಬರು ವಿಮಾನ ನೆಲಕ್ಕೆ ಅಪ್ಪಳಿಸುವ ಮೊದಲೇ ಜಿಗಿದು ಪಾರಾಗಿದ್ದರೆ, ಒಬ್ಬರು ಪಾರಾಗಲು ಸಾಧ್ಯವಾಗಿಲ್ಲ. ಈ ಘಟನೆಯಲ್ಲಿ ಓರ್ವ ನಾಗರಿಕರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಜೆಟ್ ವಿಮಾನಗಳು ಶೆಡ್ ಮೇಲೆ ಬಿದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ.
ಈ ಮೂವರಲ್ಲಿ ಮೃತರಾಗಿರುವ ಸಾಹಿಲ್ ಗಾಂಧಿ ಅನುಭವಿ ಪೈಲಟ್ ಆಗಿದ್ದು, ಸೂರ್ಯ ಕಿರಣ್ ತಂಡದೊಡನೆ ಮೊದಲಿನಿಂದಲೂ ಕೆಲಸ ಮಾಡುತ್ತಿದ್ದರು. ಅವರಲ್ಲಿ ಮಾಧ್ಯಮದವರಿಗೆ ಹೇಳಲು ಏನಾದರೊಂದು ರೋಚಕ ಕಥೆ ಇದ್ದೇ ಇರುತ್ತಿತ್ತು ಎಂದು ಅವರನ್ನು ಬಲ್ಲ ಅಂಗದ್ ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications