ಬೆಂಗಳೂರು: ಶೀಘ್ರವೇ ಮತದಾರರ ಪಟ್ಟಿಯಲ್ಲಿ ತೃತೀಯ ಲಿಂಗಿಗಳ ಸೇರ್ಪಡೆ
ಬೆಂಗಳೂರು, ಡಿಸೆಂಬರ್ 20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ವಿಕಲಚೇತನರನ್ನು ಗುರುತಿಸಿ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಿ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದರು. ಬಿಬಿಎಂಪಿ ಚುನಾವಣೆಗೂ ಮುನ್ನ 18 ವರ್ಷ ತುಂಬಿದ ತೃತೀಯ ಲಿಂಗಿಗಳು ಮತ್ತು ವಿಶೇಷಚೇತನರು ಸೇರ್ಪಡೆಯಾಗುವ ಸಾಧ್ಯತೆ ಇದೆ.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ತುಷಾರ್ ಗಿರಿನಾಥ್, ಬೆಂಗಳೂರಿನಲ್ಲಿ ಪ್ರಸ್ತುತ 9,182 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಈಗಾಗಲೇ 9,085 ಮಂದಿಗೆ ಎಪಿಕ್ ಕಾರ್ಡ್ ಹೊಂದಿದ್ದು, ಉಳಿದವರ ಪೈಕಿ 15 ಮಂದಿ ಎಪಿಕ್ ಕಾರ್ಡ್ ಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಮಿಕ್ಕುಳಿದವರ ಸಂಪರ್ಕ ಸಾಧ್ಯವಾಗಿಲ್ಲ. ಈ ಸಂಬಂಧ ಲಿಂಗತ್ವ ಅಲ್ಪ ಸಂಖ್ಯಾತ ಸಂಘಟನೆಯ ಸಹಕಾರ ಪಡೆದು ನೊಂದಣಿಗೆ ಬಾಕಿ ಇರುವವರ ಪಟ್ಟಿ ಪಡೆದು ಅಗತ್ಯ ಕ್ರಮವಹಿಸವುಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಬೆಂಗಳೂರು: ನಗರದ ಸ್ವಚ್ಚತೆಗಾಗಿ ಪೌರಕಾರ್ಮಿಕರಿಗೆ 815 ಕ್ಲಿನಿಂಗ್ ಯಂತ್ರ ನೀಡಲಿರುವ ಬಿಬಿಎಂಪಿ
ಲಿಂಗತ್ವ ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕಾದರೆ ವಾಸಸ್ಥಳ, ಜನ್ಮದಿನಾಂಕ ಸೇರಿದಂತೆ ಅಗತ್ಯ ದಾಖಲೆಗಳು ಲಭ್ಯವಿದ್ದರಿಂದ ತಾಂತ್ರಿಕ ದೋಷಗಳು ಕಂಡು ಬರುತ್ತಿವೆ. ಈ ಪೈಕಿ ಆಯಾ ವಲಯದ ಜಂಟಿ ಆಯುಕ್ತರು ಸಮನ್ವಯ ಸಾಧಿಸಿ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಕ್ರಮಕೈಗೊಳ್ಳಬೇಕು ಎಂದರು.
ಸೇರ್ಪಡೆಗಾಗಿ ಜಾಗೃತಿ ಮೂಡಿಸಿ
ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ವಿಕಲಚೇತನರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಪರಿಣಾಮಕಾರಿಯಾಗಿ ಕ್ರಮವಹಿಸಬೇಕು. ಹೀಗೆಂದು ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃಧ್ಧಿ ನಿಗಮ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಖ್ಯಸ್ಥರಿಗೆ ತಿಳಿಸಿದರು.
ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣದ ಇಲಾಖೆ ನಿರ್ದೇಶಕಿ ಲತಾ ಅವರು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಕಲಚೇತನರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ 28 ವಿಧಾನಸಭಾ ಕ್ಷೇತ್ರದಲ್ಲಿ 18 ವರ್ಷಕ್ಕೂ ಮೇಲ್ಪಟ್ಟವರ ನೊಂದಣಿ ಹಾಗೂ ಮತದಾರರ ಜಾಗೃತಿಗೆ ಎಲ್ಲ ವಾರ್ಡ್ ಗಳಲ್ಲಿ 2 ವಾರ್ಡ್ ಗಳಿಗೆ ಒಬ್ಬ ಅಧಿಕಾರಿಯನ್ನು ಸಮನ್ವಯ ಸಾಧಿಸಲು ನೇಮಿಸಲಾಗಿದೆ ಎಂದು ಹೇಳಿದರು.
ಎಲ್ಲ ವಲಯ ಆಯುಕ್ತರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರು, ವಲಯ ಜಂಟಿ ಆಯುಕ್ತರು, ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಉಪ ಆಯುಕ್ತರಾದ ಮುರಳೀಧರ್, ಸಹಾಯಕ ಆಯುಕ್ತರಾದ ಉಮೇಶ್, ತೃತೀಯ ಲಿಂಗಿಗಳ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.