ಶ್ರುತಿ ಅವಕಾಶವಾದಿಯಲ್ಲ, ಅರ್ಜುನ್ ಅಪರಾಧಿ ಎನ್ನಲಾರೆ: ಪ್ರಕಾಶ್ ರಾಜ್
ಬೆಂಗಳೂರು, ಅಕ್ಟೋಬರ್ 25: ರಾಷ್ಟ್ರಪ್ರಶಸ್ತಿ ವಿಜೇತ ನಟ ಪ್ರಕಾಶ್ ರಾಜ್ ಅವರು ಮೀಟೂ ಅಭಿಯಾನವು ಹಳಿ ತಪ್ಪುವಂತೆ ಮಾಡುತ್ತಿರುವವರ ಬಗ್ಗೆ ಎಚ್ಚರಿಸಿ ಟ್ವೀಟ್ ಮಾಡಿದ್ದಾರೆ. ಮೀಟೂ ಅಭಿಯಾನವನ್ನು ಬೆಂಬಲಿಸಿದ್ದೇಕೆ? ಎಂಬುದನ್ನು ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆಚಾರ..ವಿಚಾರಗಳಿಲ್ಲದ ನಾಲಿಗೆಗಳು..ತಮ್ಮ ನೀಚ ಬುದ್ದಿಯಿಂದ ತಮ್ಮ ತಮ್ಮ ಹಿತಾಸಕ್ತಿಗಳ ಬೇಳೆ ಬೇಯಿಸಿಕೊಳ್ಳುತ್ತಾ #ಮೀಟೂ ಅಭಿಯಾನವನ್ನು ದಾರಿ ತಪ್ಪಿಸುವ ಮುನ್ನ #justasking ಎಂದು ಇಂದು ಟ್ವೀಟ್ ಮಾಡಿದ್ದಾರೆ.
ನಟಿ ಶ್ರುತಿ ಹರಿಹರನ್ ಅವರು ಹಿರಿಯ ನಟ ಅರ್ಜುನ್ ಸರ್ಜಾ ಅವರ ವಿರುದ್ಧ #metoo ಅಭಿಯಾನದಡಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಶ್ರುತಿ ಪರ ಟ್ವೀಟ್ ಮಾಡಿದ್ದರು. ಆದರೆ, ನಂತರ ಸ್ಪಷ್ಟನೆ ನೀಡಿದ್ದು, ಶ್ರುತಿ ಅವಕಾಶವಾದಿಯಲ್ಲ, ಅರ್ಜುನ್ ಈ ಪ್ರಕರಣದಲ್ಲಿ ಅಪರಾಧಿ ಎನ್ನಲಾರೆ ಎಂದಿದ್ದಾರೆ. ಅರ್ಜುನ್ ಅವರು ಈ ಪ್ರಕರಣದಲ್ಲಿ ಕ್ಷಮೆಯಾಚಿಸಿದರೆ ತಪ್ಪೇನಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ನಾನು ಅರ್ಜುನ್ ನನ್ನು ಬಹಳ ವರ್ಷಗಳಿಂದ ಬಲ್ಲೆ. ನಾನು ಆತನ ವಿರುದ್ಧ ಅರೋಪ ಮಾಡಿಲ್ಲ. ಅರ್ಥವಿಲ್ಲದ ಆರೋಪ, ಮಾತುಕತೆ ಮಾಡುವ ಪೈಕಿ ನಾನಲ್ಲ ಎಂದಿದ್ದಾರೆ.
ಹೆಣ್ಣುಮಗಳ ನೋವಿಗೆ ಸ್ಪಂದಿಸಬೇಕಿದೆ
ಒಬ್ಬ ಹೆಣ್ಣುಮಗಳು ತನಗಾದ ನೋವನ್ನು ತೋಡಿಕೊಂಡ ತಕ್ಷಣ, ನಿನ್ನ ಬಳಿ ಸಾಕ್ಷಿ ಇದೆಯೇ, ಯಾಕೆ ನೀನಿದನ್ನು ಹೇಳುತ್ತಿರುವೆ? ನಿನಗೆ ಇದನ್ನು ಹೇಳಿಕೊಟ್ಟವರು ಯಾರು? ಯಾವ ರಾಜಕೀಯ ಪಕ್ಷದ ಬೆಂಬಲ ಇದೆ? ಈ ಆರೋಪದಲ್ಲಿ ರಾಜಕೀಯ ಪ್ರೇರಣೆ ಇದೆಯೇ? ಎಂದೆಲ್ಲ ಪ್ರಶ್ನಿಸಿ ಅವಮಾನಿಸಬಾರದು.
ಹೆಣ್ಣನ್ನು ಹೆಣ್ಣೇ ನಂಬದಂಥ ಪರಿಸ್ಥಿತಿ ಇದೆ
ಇಂಥದ್ದನ್ನು ನಾನು ನೋಡುತ್ತಲೇ ಬಂದಿದ್ದೇನೆ. ಹೀಗಾಗಿ, ಇದನ್ನೆಲ್ಲ ಕೇಳಿದಾಗ ನನಗೆ ಅಷ್ಟೇನೂ ಆಶ್ಚರ್ಯ ಆಗುವುದಿಲ್ಲ. ಇಂಥದ್ದನ್ನು ನಾನು ಸಾಕಷ್ಟು ನೋಡಿಕೊಂಡೇ ಬಂದಿದ್ದೇನೆ. ಹೆಣ್ಣು ತನಗೆ ಅನ್ಯಾಯವಾಗಿದೆ ಎಂದರೆ ಗಂಡು ಬಿಡಿ, ಹೆಣ್ಣು ಕೂಡಾ ಅದನ್ನು ಎಷ್ಟೊ ಸಲ ನಂಬುವುದಿಲ್ಲ. ನನ್ನ ಜೊತೆ ಎಷ್ಟು ಸಂಭಾವಿತರಾಗಿ ನಡೆದುಕೊಂಡಿದ್ದಾರೆ ಎಂದು ಮತ್ತೊಬ್ಬ ಹೆಣ್ಣುಮಗಳು ಅದನ್ನು ವಿರೋಧಿಸುತ್ತಾಳೆ. ಕೊನೆಗೆ ಆ ಹೆಣ್ಣು ಖಳನಾಯಕಿಯಂತೆ ಕಾಣಿಸುತ್ತಾಳೆ.
ದ್ರೌಪದಿಗೆ ಆದ ಸ್ಥಿತಿ ಈಗಿನ ಸಂತ್ರಸ್ತರಿಗೆ ಬಂದಿದೆ
ದ್ರೌಪದಿಗೆ ಆದ ಸ್ಥಿತಿ ಈಗಿನ ಸಂತ್ರಸ್ತರಿಗೆ ಬಂದಿದೆ. ಶ್ರುತಿ ಹರಿಹರನ್ ಪ್ರಸಂಗ ಎಬ್ಬಿಸಿರುವ ಅಲೆಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಎಡಪಂಥೀಯರ ಪಿತೂರಿ ಅಂತ ಯಾರೋ ಕರೆದರಂತೆ. ಎಲ್ಲವನ್ನು ರಾಜಕೀಯಕ್ಕೆ ತಗುಲಿ ಹಾಕಿ ಬಿಡುತ್ತಾರೆ. ರಾಜಕೀಯ ಅಂದುಬಿಟ್ಟರೆ ಲೈಂಗಿಕ ದೌರ್ಜನ್ಯ ಕೂಡಾ ತಪ್ಪೇನಲ್ಲ ಇವರ ಪಾಲಿಗೆ.
ಅರ್ಜುನ್ ಸರ್ಜಾರನ್ನು ಸಮರ್ಥಿಸಿಕೊಳ್ಳಲು ಇವರೆಲ್ಲ ಎದ್ದು ಕೂತಿದ್ದಾರೆ ಎಂದು ನನಗೆ ಅನಿಸಿಲ್ಲ. ಹೆಣ್ನು ಮಾತನಾಡುವುದನ್ನು ತಡೆಯುವುದು ಇವರ ಉದ್ದೇಶ. ನ್ಯಾಯ ಕೇಳಲು ನಿಂತ ದ್ರೌಪದಿಯ ಕತೆಗೂ ಇಲ್ಲಿ ನಡೆಯುತ್ತಿರುವುದಕ್ಕೂ ವ್ಯತ್ಯಾಸವೇ ಇಲ್ಲವಲ್ಲ.
ಅರ್ಜುನ್ ಕ್ಷಮೆ ಕೇಳಲಿ ಎಂದರೆ ನನ್ನ ವಿರುದ್ಧ ನಿಂತರು
ಅರ್ಜುನ್ ಸರ್ಜಾ ಕ್ಷಮೆ ಕೇಳಬಹುದಾಗಿತ್ತು. ಅಂತ ನಾನು ಹೇಳಿದಾಗ ಜಗತ್ತು ನನ್ನ ಮೇಲೆ ತಿರುಗಿಬಿದ್ದಿತು. ಅರ್ಜುನ್ ಸರ್ಜಾ ತಪ್ಪು ಮಾಡಿದ್ದಾರೆ ಅಂತ ನಾನೆಂದೂ ಹೇಳಿರಲಿಲ್ಲ. ನಾನು ತಪ್ಪಾಗಿ ನಡೆದುಕೊಂಡಿದ್ದೇನೆ ಎಂಬ ಭಾವವನ್ನು ನಿನ್ನಲ್ಲಿ ಹುಟ್ಟಿಸಿದ್ದರೆ ಕ್ಷಮಿಸಿ ಅಂತ ಒಂದು ಕ್ಷಮಾಪಣೆಯನ್ನು ಮುಂದಿಡುವುದು ಅರೋಗ್ಯವಂಥ ಜೀವದ ಮೊದಲ ಲಕ್ಷಣ.
ಒಂದು ಕೆಟ್ಟ ಸ್ಪರ್ಶ, ಉದ್ದೇಶಪೂರ್ವಕವಾಗಿರಲಿಲ್ಲ ಎಂದುಬಿಡುವುದಕ್ಕೆ ಅಹಂಕಾರ ಯಾಕೆ ಅಡ್ಡಿಬರಬೇಕು?