ನೈಲ್ ನದಿ ಹಂಚಿಕೊಂಡಿರುವಾಗ ಕಾವೇರಿ ಹಂಚಿಕೊಳ್ಳಲು ಏಕೆ ಸಾಧ್ಯವಿಲ್ಲ?
ಬೆಂಗಳೂರು, ಏಪ್ರಿಲ್ 20: ಎರಡು ದೇಶಗಳು ನೈಲ್ ನದಿಯನ್ನು ಹಂಚಿಕೆ ಮಾಡಿಕೊಂಡಿರುವಾಗ ಕಾವೇರಿ ನದಿ ನೀರನ್ನು ಎರಡು ರಾಜ್ಯಗಳು ಹಂಚಿಕೊಳ್ಳಲು ಏಕೆ ಸಾಧ್ಯವಿಲ್ಲ ಎಂದು ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಕಾವೇರಿ ವಿವಾದದ ಕುರಿತು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿಲ್ಲ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಪ್ರಜಾಪ್ರಭುತ್ವವನ್ನು ಕೊಲ್ಲುವ ಪ್ರಯತ್ನ
ಒಂದು ನಿರ್ದಿಷ್ಟ ಪಕ್ಷ ಪ್ರಜಾಭುತ್ವವನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದೆ. ಪ್ರಶ್ನೆ ಮಾಡುವವರನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದೆ. ವಿರೋಧ ಪಕ್ಷ ಇದ್ದರೇನೇ ಅದು ಪ್ರಜಾಪ್ರಭುತ್ವ. ಆದರೆ ವಿರೋಧಪಕ್ಷವೇ ಇಲ್ಲದಂತೆ ಮಾಡುವ ಹವಣಿಕೆ ಆಳುವ ಸರ್ಕಾರದ್ದು. ವಿರೋಧಪಕ್ಷ ಇಲ್ಲದೆ ಹೋದರೆ ಸರ್ವಾಧಿಕಾರ ಆಡಳಿತ ಬರುತ್ತದೆ. ಚರ್ಚೆ ಮೂಲಕವೇ ಎಲ್ಲವನ್ನೂ ಇತ್ಯರ್ಥ ಮಾಡಬೇಕು.

ಈ ಸರ್ವಾಧಿಕಾರಿ ಧೋರಣೆಯನ್ನು ನಾನು ಪ್ರಶ್ನಿಸಿ ಮಾತನಾಡಿದಾಗ ಸುಮ್ಮನಿದ್ದವರು, ಈಗ ತಾವೂ ಪ್ರಶ್ನೆ ಕೇಳಲು ಆರಂಭಿಸಿದ್ದಾರೆ. ನಮಗೆ ಪ್ರಶ್ನೆ ಕೇಳುವ ಹಕ್ಕು ಇದೆ ಎಂಬ ಧೈರ್ಯ ಬರುತ್ತಿದೆ. ಆಳುವವರ ವಿರುದ್ಧ ನಮ್ಮ ಪ್ರಶ್ನೆ ಇರಬೇಕು. ಅವರು ಅದಕ್ಕೆ ಉತ್ತರ ನೀಡಬೇಕು. ಜನರಲ್ಲಿ ರಾಜಕೀಯ ಪ್ರಜ್ಞೆ ಹೇಗೆ ಬೆಳೆಸುವುದು? ಯಾವುದಾದರೂ ಪಕ್ಷ ಸೇರಿ ಅದನ್ನು ಮೂಡಿಸಲು ಸಾಧ್ಯವಿಲ್ಲ. ಅದಕ್ಕೆ ಈ ಪ್ರಶ್ನಿಸುವ ಮಾರ್ಗವನ್ನು ಆಯ್ದುಕೊಂಡೆ ಎಂದು ರೈ ಹೇಳಿದರು.
'ಜಸ್ಟ್ ಆಸ್ಕಿಂಗ್' ಎನ್ನುವುದು ರಾಜಕೀಯಕ್ಕೆ ಮಾತ್ರ ಸೀಮಿತ ಅಲ್ಲ. ಜಸ್ಟ್ ಆಸ್ಕಿಂಗ್ ಮೂಲಕ ಯಾರೂ ರಾಜಕೀಯಕ್ಕೆ ಬರುವುದಿಲ್ಲ. ಅದು ಸರ್ಕಾರದ ಧೋರಣೆಯ ವಿರುದ್ಧ ಧ್ವನಿ ಎತ್ತಲಿರುವ ಸಂಸ್ಥೆಯಷ್ಟೇ. ನಾನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೊಡ್ಡ ಅಭಿಮಾನಿ. ಆದರೆ ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಏಕೆಂದರೆ ಅದು ದೇಶಕ್ಕೆ ಬಹಳ ಅಪಾಯಕಾರಿ. ನಾನು ಬಿಜೆಪಿಯ ವಿರುದ್ಧ ಮಾತ್ರವಿಲ್ಲ. ಎಲ್ಲ ಕೋಮುವಿರೋಧಿಗಳ ವಿರುದ್ಧವೂ ಮಾತನಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ಜತೆ ಕೆಲವು ಪಕ್ಷಗಳು ಕೈಜೋಡಿಸಿವೆ. ಆದರೆ, ಜೆಡಿಎಸ್ ಪಕ್ಷ ಕೋಮುವಾದಿಗಳ ಜೊತೆ ಹೋಗಲ್ಲ ಎಂಬ ಉತ್ತರ ದೇವೇಗೌಡರಿಂದ ಬಂದಿದೆ.

ಇಂದು ಎಲ್ಲವನ್ನೂ ಸೈದ್ಧಾಂತಿಕ ದೃಷ್ಟಿಕೋನದಿಂದ ವಿಂಗಡಿಸಿ ನೋಡಲಾಗುತ್ತಿದೆ. ಕಲಾವಿದರು, ಪತ್ರಕರ್ತರನ್ನು ಸಹ ಎಡ ಮತ್ತು ಬಲ ಎಂದು ಪ್ರತ್ಯೇಕಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಂದು ಕೆಲಸಕ್ಕೂ ಸದಾ ಕೇಂದ್ರದ ಮುಂದೆ ರಾಜ್ಯಗಳು ಕೈಕಟ್ಟಿ ಏಕೆ ನಿಲ್ಲಬೇಕು? ರಾಜ್ಯಗಳಲ್ಲಿರುವ ಪಕ್ಷವೇ ಕೇಂದ್ರದಲ್ಲೂ ಅಧಿಕಾರ ನಡೆಸಬೇಕು ಎಂಬ ಬಯಕೆ ನನ್ನದು.
ಸರ್ಕಾರವನ್ನು ಪ್ರಶ್ನಿಸುವ ಕಾರಣಕ್ಕೆ ಚುನಾವಣಾ ಆಯೋಗದಿಂದ ನನಗೆ ತೊಂದರೆ ಉಂಟಾಗಿದೆ. ನಾನು ಯಾವ ಪಕ್ಷಕ್ಕೆ ಸೇರಿದವನಲ್ಲದಿದ್ದರೂ ನನ್ನ ಮೇಲೆ ನೀತಿ ಸಂಹಿತೆ ಹೇರುತ್ತಿದ್ದಾರೆ ಎಂದರು.
ಕಲಬುರ್ಗಿಯಲ್ಲಿ ನನ್ನ ಮೇಲೆ ನಡೆದ ದಾಳಿ ಅನಾಗರಿಕವಾದದ್ದು. ಭದ್ರತೆ ಇಲ್ಲದ ವೇಳೆ ನೋಡಿಕೊಂಡು ಕಾರು ಅಡ್ಡಗಟ್ಟಿ ದಾಂದಲೆ ನಡೆಸಿದರು. ಕೈಯಲ್ಲಿ ಕಲ್ಲುಗಳನ್ನು ಸಹ ಹಿಡಿದಿದ್ದರು. ಪ್ರಶ್ನಿಸುವುದನ್ನು ಕೆಲವು ಮನಸ್ಸುಗಳು ಸಹಿಸುವುದಿಲ್ಲ ಎಂದು ಹೇಳಿದರು.
ಪ್ರಸ್ತುತ 12 ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಅಕಸ್ಮಾತ್ ನನಗೆ ಸಿನಿಮಾ ಕಮ್ಮಿಯಾದರೂ ಚಿಂತೆ ಮಾಡುವುದಿಲ್ಲ ಎಂದು ರೈ ತಿಳಿಸಿದರು.












Click it and Unblock the Notifications