ಆಸಿಡ್ ದಾಳಿ: ಕರಪತ್ರ ನೋಡಿ ಕ್ಲೂ ಕೊಟ್ಟ ಸಾರ್ವಜನಿಕರಿಗೆ ಕಮೀಷನರ್ ಅಭಿನಂದನೆ
ಬೆಂಗಳೂರು, ಮೇ. 14: ಪ್ರೀತಿ ನಿಕಾರಕರಿಸಿದಳು ಎಂಬ ಕಾರಣಕ್ಕೆ ಆಸಿಡ್ ದಾಳಿ ಮಾಡಿ ಪರಾರಿಯಾಗಿದ್ದ ಅರೋಪಿಯನ್ನು ಬಂಧಿಸಿದ ಪೊಲೀಸರ ಕಾರ್ಯಶೈಲಿಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಕೊಂಡಾಡಿ ಬಹುಮಾನ ಘೋಷಣೆ ಮಾಡಿದ್ದಾರೆ. ಅಲ್ಲದೇ ಕರ ಪತ್ರ ನೋಡಿ ಆರೋಪಿ ಬಗ್ಗೆ ಸುಳಿವು ನೀಡಿದವರನ್ನು ಸ್ಮರಿಸಿ ಪ್ರಶಂಸೆ ಮಾಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, "ಎ. 28 ರಂದು ನಡೆದ ಆಸಿಡ್ ದಾಳಿ ಪ್ರಕರಣವನ್ನು ಪಶ್ಚಿಮ ವಿಭಾಗದ ಪೊಲೀಸರು ಮುತುವರ್ಜಿ ವಹಿಸಿ ಪ್ರಕರಣ ಪತ್ತೆ ಮಾಡಿದ್ದಾರೆ. ಯಾವುದೇ ಸುಳಿವು ಸಿಗದಂತೆ ಆರೋಪಿ ಎಸ್ಕೇಪ್ ಆಗಿದ್ದ. ತಮಿಳುನಾಡಿನ ತಿರುವಣ್ಣಾಮಲೈನ ಆಶ್ರಮದಲ್ಲಿ ಸೆರಿದ್ದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ," ಎಂದು ಹೇಳಿದರು.
"ಏಳು ವರ್ಷದಿಂದಲೂ ಯುವತಿ ಮತ್ತು ಆರೋಪಿ ಒಂದೇ ಬಿಲ್ಡಿಂಗ್ ನಲ್ಲಿ ವಾಸವಾಗಿದ್ದರು. ಯುವತಿಯನ್ನ ಪ್ರೀತಿಸುವುದಾಗಿ ನಾಗೇಶ್ ಮನವಿ ಮಾಡಿಕೊಂಡಿದ್ದ. ಆಕೆ ನಿರಾಕರಿಸಿದ್ದಳು. ಯುವತಿ ಮನೆಯ ಪಕ್ಕದಲ್ಲಿದ್ದ ಸ್ನೇಹಿತನಿಂದ ಅರೋಪಿ ಕೆಲವು ಮಾಹಿತ ಪಡೆಯುತ್ತಿದ್ದ. ಆಕೆ ಕೆಲಸ ಮಾಡುವ ವಿಳಾಸ ಪಡೆದು ಹಿಂಬಾಲಿಸಿದ್ದ," ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕರಪತ್ರವನ್ನು ನೋಡಿ ಆಶ್ರಮದಲ್ಲಿದ್ದವರು ಮಾಹಿತಿ ನೀಡಿದ್ದಾರೆ. ತಮಿಳುನಾಡಿನಲ್ಲಿಯೇ ಇದ್ದ ಪೊಲೀಸ್ ತಂಡ ಖಚಿತ ಪಡಿಸಿಕೊಂಡು ಭೇಟಿ ನಾಡಿದಾಗ ಆರೋಪಿಯನ್ನು ಬಂಧಿಸಲಾಗಿದೆ. ಅರೋಪಿಯನ್ನು ಬಂಧಿಸಲು ಸಹಕರಿಸಿದ ಸಾರ್ವಜನಿಕರಿಗೆ, ನೆರೆ ರಾಜ್ಯದ ಪೊಲೀಸರಿಗೆ ಹಾಗೂ ಪ್ರಕರಣ ಪತ್ತೆ ಮಾಡಿದ ಪಶ್ಚಿಮ ವಿಭಾಗದ ಪೊಲೀಸರನ್ನು ಪ್ರಸಂಸೆ ಮಾಡಿದರು.
ನಾಗನನ್ನು ಬಂದಿಸಿದ ಪೊಲೀಸರಿಗೆ 5 ಲಕ್ಷ ಬಹುಮಾನ
ಯುವತಿಯ ಆಸಿಡ್ ಎರಚಿ ಪರಾರಿಯಾಗಿದ್ದ ನಾಗೇಶ್ ಒಂದೂ ಸಾಕ್ಷಿ ಬಿಟ್ಟುಕೊಡದೇ 16 ದಿನಗಳ ಕಾಲ ಪೊಲೀಸರನ್ನು ಸತಾಯಿಸಿದ್ದ. ಈತನ ಪತ್ತೆಗಾಗಿ ಪೊಲೀಸರು ಲುಕ್ಔಟ್ ನೋಟೀಸ್ ಜಾರಿ ಮಾಡಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಆರೋಪಿ ರಮಣರ್ ಆಶ್ರಮದಲ್ಲಿ ಇರುವುದಾಗಿ ಮಾಹಿತಿ ನೀಡಿದ ಮೇಲೆ ಪೊಲೀಸರು ಮಾರುವೇಷದಲ್ಲಿ ಹೋಗಿ ಧ್ಯಾನಕ್ಕೆ ಕುಳಿದಿದ್ದ ನಾಗನನ್ನು ಬಂಧಿಸಿದ್ದರು. ಪೊಲೀಸರ ಕಾರ್ಯಕ್ಷಮತೆಯನ್ನು ಮೆಚ್ಚಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡಗಳಿಗೆ ಒಟ್ಟು 5 ಲಕ್ಷ ರೂ.ಗಳನ್ನು ಬಹುಮಾನ ನೀಡುವುದಾಗಿ ಕಮಲ್ ಪಂತ್ ತಿಳಿಸಿದ್ದಾರೆ.