ಲಂಚ ಪ್ರಕರಣದಲ್ಲಿ 'ಜನ ಸೇವಾ' ಇನ್ಸ್ಪೆಕ್ಟರ್ ರಾಘವೇಂದ್ರ ಜಾಮೀನು ಅರ್ಜಿ ವಜಾ!
ಬೆಂಗಳೂರು, ಸೆ. 18: ಪಾವಗಡ ತಾಲೂಕಿನ ಜನತೆಗಾಗಿ ಟ್ರಸ್ಟ್ ಸ್ಥಾಪಿಸಿ ಸೇವೆ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಮಿಂಚುತ್ತಿದ್ದ ಚಿಕ್ಕಜಾಲ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ರಾಘವೇಂದ್ರ ಅವರಿಗೆ ಜಾಮೀನು ನೀಡಲು ಎಸಿಬಿ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಸೆ. 18 ರಂದು ಬಂಧನಕ್ಕೆ ಒಳಗಾಗಿರುವ ರಾಘವೇಂದ್ರ ಜಾಮೀನು ಕೋರಿ ಇದೀಗ ಹೈಕೋರ್ಟ್ ಮೊರೆ ಹೋಗಲಿದ್ದಾರೆ.
ಜಮೀನು ವಿವಾದ ಪ್ರಕರಣದಲ್ಲಿ ಹತ್ತು ಲಕ್ಷ ರೂ. ಲಂಚ ಸ್ವೀಕರಿಸಿ ಚಿಕ್ಕಜಾಲ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ರಾಘವೇಂದ್ರ ವಿಚಿತ್ರವೆಂದರೆ ಇದೇ ಭೂ ವಿವಾದ ಪ್ರಕರಣದಲ್ಲಿ ಲಂಚ ಸ್ವೀಕರಿಸಿ ಜೈಲು ಸೇರಿದ್ದರು. ಅದೇ ಪ್ರಕರಣದಲ್ಲಿ ಎಂಟು ಲಕ್ಷ ರೂ. ಲಂಚ ಸ್ವೀಕರಿಸಿ ಬಾಕಿ ಲಂಚದ ಮೊತ್ತ ಎರಡು ಲಕ್ಷ ರೂ. ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರಿಗೆ ಸೆ. 18 ರಂದು ಸಿಕ್ಕಿಬಿದ್ದಿದ್ದರು. ಲಂಚದ ಹಣ ಸಮೇತ ಬಂಧಿಸಿದ್ದ ಎಸಿಬಿ ಪೊಲೀಸರು ಇನ್ಸ್ಪೆಕ್ಟರ್ ರಾಘವೇಂದ್ರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಲಂಚ ಪ್ರಕರಣ ಸಂಬಂಧ ಜಾಮೀನು ಕೋರಿ ಸಲ್ಲಿಸಿದ್ದ ರಾಘವೇಂದ್ರ ಅವರ ಅರ್ಜಿಯನ್ನು ಎಸಿಬಿ ವಿಶೇಷ ನ್ಯಾಯಾಲಯ ವಜಾ ಮಾಡಿದೆ. ಪ್ರಕರಣದ ಗಂಭೀರತೆಯನ್ನು ಅರೆತು, ಜಮೀನು ವಿವಾದದಲ್ಲಿ ದೊಡ್ಡ ಮೊತ್ತದ ಲಂಚ ಸ್ವೀಕರಿಸಿರುವುದನ್ನು ಪರಿಗಣಿಸಿ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಜಾಮೀನು ಕೋರಿ ರಾಘವೇಂದ್ರ ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆ ಹೀರೇಮಗಳೂರು ಕಡೆಯವರಾದ ರಾಘವೇಂದ್ರ ಪಾವಗಡ ಜನರ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದರು. ಪಾವಘಡ ತಾಲೂಕು ಸಮಗ್ರ ಅಭಿವೃದ್ಧಿ ಟ್ರಸ್ಟ್ ರಚನೆ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಸುದ್ದಿಯಾಗಿದ್ದರು.
ಇವರ ಸೇವೆಯ ಕುರಿತು ಅಪಾರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಿಪರ್ಯಾಸವೆಂದರೆ ಜನ ಸಾಮಾನ್ಯರಿಗೆ ಬೇಕಾಗುವ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ಕೊಡುವ ಡಿಜಿಟಲ್ ಪಾವಗಡ ವಾಹನಕ್ಕೆ ಇನ್ಸ್ಪೆಕ್ಟರ್ ರಾಘವೇಂದ್ರ ಚಾಲನೆ ನೀಡಿದ್ದರು. ಚಾಲನೆ ನೀಡಿದ ಒಂದೇ ದಿನದಲ್ಲಿ ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.
ಏನಿದು ಪ್ರಕರಣ: ಜಮೀನು ವಿವಾದ ವಿಚಾರವಾಗಿ ಎಫ್ಐಆರ್ ದಾಖಲಿಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಖಾಸಗಿ ವ್ಯಕ್ತಿ ಮೂಲಕ 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಆರ್. ರಾಘವೇಂದ್ರ ಅವರನ್ನು ಬೆಂಗಳೂರು ನಗರ ಘಟಕದ ಎಸಿಬಿ ಪೊಲೀಸರು ಬಂಧಿಸಿದ್ದರು.
ಬಂಧಿತರಿಂದ ಎರಡು ಲಕ್ಷ ರೂ. ಲಂಚದ ಹಣ ವಶಪಡಿಸಿಕೊಂಡಿದ್ದರು. ಕಳೆದ ಒಂದು ತಿಂಗಳಿನಿಂದ ಈಚೆಗೆ ಎಂಟು ಲಕ್ಷ ರೂ. ಹಣವನ್ನು ರಾಘವೇಂದ್ರ ಪಡೆದುಕೊಂಡಿರುವುದಕ್ಕೆ ವಿಡಿಯೋ ಹಾಗೂ ಅಡಿಯೋ ಸಾಕ್ಷಾಧಾರಗಳನ್ನು ಮಾಡಿಕೊಂಡಿದ್ದ ದೂರುದಾರ ಬೆಂಗಳೂರು ನಗರ ಘಟಕದ ಎಸ್ಪಿ ಯತೀಶ್ ಚಂದ್ರ ಅವರಿಗೆ ದೂರು ನೀಡಿದ್ದರು.
ಶೆಟ್ಟಿಹಳ್ಳಿ ಸರ್ವೆ ನಂಬರ್ 29 ರಲ್ಲಿ ಐದು ಎಕರೆ ಜಮೀನು ಇದ್ದು, ಈ ಜಮೀನು ಒಡೆತನ ವಿಚಾರವಾಗಿ ದೂರುದಾರ ಶಿವಶಂಕರ್ ಮತ್ತು ದಿನೇಶ್ ಎಂಬುವರ ನಡುವೆ ವಿವಾದ ಉಂಟಾಗಿತ್ತು. ತನಗೆ ಸೇರಿದ್ದು ಎಂದು ಶಿವಶಂಕರ್ ಜಮೀನಿಗೆ ಕಾಂಪೌಂಡ್ ಹಾಕಿ ಸೆಕ್ಯುರಿಟಿ ಗಾರ್ಡ್ ಇಟ್ಟಿದ್ದರು. ಈ ಸ್ವತ್ತು ತನಗೆ ಸೇರಿದ್ದು ಎಂದು ಬೋರ್ಡ್ ಸಹ ಹಾಕಿದ್ದರು.
ಕೆಲ ದಿನಗಳ ಹಿಂದೆ ಅಪರಿಚಿತರು ಶಿವಶಂಕರ್ ಗೆ ಸೇರಿದೆ ಎನ್ನಲಾದ ಜಾಗಕ್ಕೆ ತೆರಳಿ ಬೋರ್ಡ್ ನ್ನು ಕಿತ್ತುಕೊಂಡು ಹೋಗಿದ್ದರು. ಬೋರ್ಡ್ ಕಿತ್ತುಕೊಂಡು ಹೋಗಿರುವ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು.
ಅಕ್ರಮವಾಗಿ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಬೋರ್ಡ್ ಕಿತ್ತು ಹಾಕಿದವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಜರುಗಿಸಲು ದೂರು ನೀಡಿದ ಶಿವಶಂಕರ್ ಗೆ ಹತ್ತು ಲಕ್ಷ ರೂ. ಹಣ ನೀಡುವಂತೆ ಚಿಕ್ಕಜಾಲ ಠಾಣೆ ಇನ್ಸ್ಪೆಕ್ಟರ್ ಎಸ್.ಆರ್. ರಾಘವೇಂದ್ರ ಬೇಡಿಕೆ ಇಟ್ಟಿದ್ದರು ಎಂಬುದು ಅವರ ಮೇಲಿನ ಆರೋಪ. ಮೊದಲ ಕಂತಿನಲ್ಲಿ ನಾಲ್ಕು ಲಕ್ಷ ರೂ. ಪಡೆದಿದ್ದು, ಆನಂತರ ಎರಡನೇ ಕಂತಿನಲ್ಲಿ ನಾಲ್ಕು ಲಕ್ಷ ರೂ. ಪಡೆದಿದ್ದಾರೆ ಎನ್ನಲಾಗಿದೆ. ಮೂರನೇ ಕಂತಿನಲ್ಲಿ ರಾಘವೇಂದ್ರ ಹೆಸರಿನ ಖಾಸಗಿ ವ್ಯಕ್ತಿ ಮೂಲಕ ದೂರುದಾರ ಶಿವಶಂಕರ್ ನಿಂದ ಎರಡು ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಎಸಿಬಿ ಬೆಂಗಳೂರು ನಗರ ಘಟಕದ ಡಿವೈಎಸ್ವಿ ರವಿಶಂಕರ್ ಕೆ. ಮತ್ತು ತಂಡ ದಾಳಿ ನಡೆಸಿ ಬಂಧಿಸಿತ್ತು.
ಇದೇ ಜಮೀನು ವಿವಾದದಲ್ಲಿ ಟ್ರ್ಯಾಪ್ ಆಗಿದ್ದ ಇನ್ಸ್ಪೆಕ್ಟರ್ : ಕಳೆದ ಡಿಸೆಂಬರ್ ನಲ್ಲಿ ಇದೇ ಜಮೀನು ವಿಚಾರವಾಗಿ ದಿನೇಶ್ ಮತ್ತು ಶಿವಶಂಕರ್ ನಡುವೆ ವಿವಾದ ಉಂಟಾಗಿತ್ತು.
ಚಿಕ್ಕಜಾಲ ಇನ್ಸ್ಪೆಕ್ಟರ್ ಅಗಿದ್ದ ಯಶವಂತ್ ಅವರು ಲಂಚ ಸ್ವೀಕರಿಸಿ ಬೆಂಗಳೂರು ನಗರ ಘಟಕದ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಯಶವಂತ್ ಎಸಿಬಿ ಬಲೆಗೆ ಬಿದ್ದು ತೆರವಾದ ಜಾಗಕ್ಕೆ ಎಸ್. ಅರ್. ರಾಘವೇಂದ್ರ ಬಂದಿದ್ದರು. ಕಾಕತಳೀಯ ಎಂಬಂತೆ ರಾಘವೇಂದ್ರ ಕೂಡ ಅದೇ ಪ್ರಕರಣದಲ್ಲಿ ಲಂಚ ಸ್ವೀಕರಿಸಿ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.