ಎಸಿಬಿ ದಾಳಿಯಲ್ಲಿ ಸಿಗಬೇಕಿದ್ದ ನೋಟುಗಳು ಗಾಳಿಯಲ್ಲಿ ಹಾರಾಟ
ಬೆಂಗಳೂರು, ಡಿಸೆಂಬರ್ 11: ಎಸಿಬಿ ಅಧಿಕಾರಿಗಳ ದಾಳಿಯಲ್ಲಿ ಸಿಗಬೇಕಿದ್ದ ಎರಡು ಸಾವಿರ, ಐದು ನೂರು ಮುಖ ಬೆಲೆಯ ನೋಟುಗಳು ಕಿಟಕಿಗಳಿಂದ ಹೊರ ಬಂದು ಗಾಳಿಯಲ್ಲಿ ಹಾರಾಡಿದವು ! ಕೋರಮಂಗಲದಲ್ಲಿ ಹಣದ ಮಳೆ ಸುರುತ್ತಿದ್ದೆಯಾ ಎಂದು ಜನ ಅಚ್ಚರಿಗೊಂಡರು. ಕೈಗೆ ಸಿಕ್ಕಿದಷ್ಟು ಬಾಚಿಕೊಂಡು ಪರಾರಿಯಾದರು. ಇದೇನು ಪವಾಡ ಅಂತ ಅಂದುಕೊಳ್ಳಬೇಡಿ. ಎಸಿಬಿ ದಾಳಿ ನಡೆದಾಗ ಕೋರಮಂಗಲ ಆರ್ಟಿಓ ಕಚೇರಿಯಲ್ಲಿ ನಡೆದ ಅಸಲಿ ಘಟನೆ.
ಕೋರಮಂಗಲ ಆರ್ಟಿಓ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿರುವ ಬಗ್ಗೆ ಎಸಿಬಿಗೆ ದೂರು ಬಂದಿತ್ತು. ಎಸ್ಪಿ ಕುಲದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ ಡಿವೈಎಸ್ಪಿ ಸುಬ್ರಮಣ್ಯ ಮತ್ತು ತಂಡ ಶುಕ್ರವಾರ ಮಧ್ಯಾಹ್ನ ಏಕಾ ಏಕಿ ಆರ್ಟಿಓ ಕಚೇರಿ ಹಾಗು ಏಜೆಂಟರ ಕಚೇರಿಗಳಿಗೆ ಏಕ ಕಾಲಕ್ಕೆ ನುಗ್ಗಿದರು.
ಕೋರಮಂಗಲ ಆರ್ಟಿಓ ಕಚೇರಿ ದೊಡ್ಡದು, ನಿರೀಕ್ಷಿತ ಕಚೇರಿಗಳನ್ನು ಶೋಧ ಮಾಡುವಷ್ಟರಲ್ಲಿ ಜನ ಸಾಮಾನ್ಯರಿಂದ ವಸೂಲಿ ಮಾಡಿದ್ದ ಲಂಚವನ್ನು ಅಧಿಕಾರಿಗಳು ಕಿಟಕಿಗಳಲ್ಲಿ ಬಿಸಾಡಿದ್ದಾರೆ. ದುಡ್ಡು ಕೊಟ್ಟು ಬರುತ್ತಿದ್ದ ಜನರು ಸಿಕ್ಕಿದ್ದೇ ಅವಕಾಶ ಎಂದು ಗಾಳಿಯಲ್ಲಿ ಹಾರಿ ಬಂದ ನೋಟುಗಳನ್ನು ಹಿಡಿದು ಐದೇ ನಿಮಿಷದಲ್ಲಿ ಪರಾರಿಯಾಗಿದ್ದಾರೆ. ಈ ವಿಷಯ ತಿಳಿದ ಎಸಿಬಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

ರೆಕಾರ್ಡ್ ರೂಂನಲ್ಲಿ ಸಿಕ್ಕಿತು ಕಂತೆಗಳು
ಜನರಿಂದ ವಸೂಲಿ ಮಾಡಿದ್ದ ಲಂಚ ಬಿಸಾಡಿ ಕೆಲವರು ಬಚಾವ್ ಆದರೆ, ಇಲ್ಲೊಬ್ಬ ಅಧಿಕಾರಿ ಲಂಚದ ಹಣವನ್ನು ಹಳೇ ಕಡತಗಳಿದ್ದ ರೆಕಾರ್ಡ್ ರೂಮ್ ನಲ್ಲಿ ಬಚ್ಚಿಟ್ಟು ಬುದ್ಧಿವಂತಿಕೆ ಮೆರೆಯಲು ಹೋಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಐದುನೂರು ಹಾಗೂ ಎರಡು ಸಾವಿರ ಮುಖ ಬೆಲೆಯ ನೋಟಿನ ಕಂತುಗಳನ್ನು ಎಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ ಆರ್ಟಿಓ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಅಕ್ರಮ ಹಣ ಪತ್ತೆ
ಇದ್ದ ಹಣ ಕಿಟಕಿಗಳಲ್ಲಿ ಬಿಸಾಡಿದರೂ ಎಸಿಬಿ ಅಧಿಕಾರಿಗಳಿಗೆ 5.96 ಲಕ್ಷ ರೂಪಾಯಿ ನಗದು ಹಣ ಸಿಕ್ಕಿದೆ. ಆರ್ಟಿಓ ಕಚೇರಿಯ ರೆಕಾರ್ಡ್ ರೂಂ ಅಲ್ಲದೇ ಇಬ್ಬರು ಅಧಿಕಾರಿಗಳ ಟೇಬಲ್ ಅಡಿಯೂ ಸಿಕ್ಕಿದೆ. ಮಿಗಿಲಾಗಿ ಆರ್ಟಿಓ ಏಜೆಂಟರಿಗೆ ಸಂಬಂಧಿಸಿದ ನೂರಾರು ಕಡತಗಳು ಪತ್ತೆಯಾಗಿದ್ದು ಅವನ್ನು ಡಿವೈಎಸ್ಪಿ ಸುಬ್ರಮಣ್ಯ ನೇತೃತ್ವದ ತಂಡ ಜಪ್ತಿ ಮಾಡಿ ತಪಾಸಣೆ ಕಾರ್ಯ ಕೈಗೊಂಡಿದೆ. ತಡ ರಾತ್ರಿ ವರೆಗೂ ದಾಳಿ ಮುಂದುವರೆದಿದೆ.
ದೇವರೇ ರಕ್ಷಿಸಲಿಲ್ಲ ಲಂಚ
ಕೋರಮಂಗಲ ಆರ್ಟಿಓ ಕಚೇರಿಗೆ ಹೊಂದಿಕೊಂಡಂತೆ ಇರುವ ಏಜೆಂಟ್ ಕಚೇರಿಯಲ್ಲಿ ಶೋಧ ನಡೆಸಿದಾಗ ದೇವರ ಪಟದ ಹಿಂದೆ ಬಾಕ್ಸ ನಲ್ಲಿ ಅಡಗಿಸಿಟ್ಟಿದ್ದ ನೋಟಿನ ಕಂತೆಗಳು ಪತ್ತೆಯಾಗಿವೆ. ಅಷ್ಟೂ ಹಣವನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆರ್ಟಿಓ ಅಧಿಕಾರಿಗಳು ಗ್ರಾಹಕರ ಮನೆಗೆ ಕಳುಹಿಸಿಕೊಡಬೇಕಿದ್ದ ನೂರಾರು ಡ್ರೈವಿಂಗ್ ಲೈಸೆನ್ಸ್ , ಆರ್ಸಿ ಸ್ಮಾರ್ಟ್ ಕಾರ್ಡ್ ಗಳು ಏಜೆಂಟನ ಮನೆಯಲ್ಲಿ ಸಿಕ್ಕಿವೆ. ದೇವರ ಪಕ್ಕದಲ್ಲಿಟ್ಟಿದ್ದ ಹಣ ಮತ್ತು ಸ್ಮಾರ್ಟ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದು ಏಜೆಂಟ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಎಸಿಬಿ ದಾಳಿಯ ಭಯದ ಕಾರಣಕ್ಕೆ ಆರ್ಟಿಓ ಅಧಿಕಾರಿಗಳು ತಮಗೆ ಬೇಕಾದ ಏಜೆಂಟರನ್ನು ಇಟ್ಟುಕೊಂಡಿರುತ್ತಾರೆ. ತ್ವರಿತವಾಗಿ ಆರ್ಸಿ ಹಾಗೂ ಡ್ರೈವಿಂಗ್ ಲೈಸನ್ಸ್ ಮಾಡಿಕೊಡುವ ಸೋಗಿನಲ್ಲಿ 400 ರೂಪಾಯಿ ಯಲ್ಲಿ ಆಗಬೇಕಿರುವ ಕೆಲಸಕ್ಕೆ ಸಾವಿರ ಗಟ್ಟಲೇ ಪಡೆಯುತ್ತಾರೆ. ಹೀಗೆ ತ್ವರಿತ ಸೇವೆ ಹೆಸರಿನಲ್ಲಿ ಪಡೆದ ಲಂಚದ ಹಣವನ್ನು ಸಂಬಂಧಿಸಿದ ಅಧಿಕಾರಿಗೆ ಮನೆಗೆ ಹೋಗುವ ವೇಳೆ ಕೊಟ್ಟು ಕಳಿಸುವ ಪರಿಪಾಠ ಮೊದಲಿನಿಂದಲೂ ಇದೆ. ಹೀಗಾಗಿ ಈ ಬಾರಿ ಎಸಿಬಿ ಅಧಿಕಾರಿಗಳು ಮೊದಲೇ ಏಜೆಂಟರ ಕಚೇರಿಗಳಿಗೆ ನುಗ್ಗಿದ್ದು, ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ. ಇನ್ನು ಎಸಿಬಿ ದಾಳಿ ಗೊತ್ತಾಗಿದ್ದೇ ಕೆಲವು ಅಧಿಕಾರಿಗಳು ಮತ್ತು ಏಜೆಂಟರು ಪರಾರಿಯಾಗಿದ್ದಾರೆ.

ನಾಲ್ವರ ವಿರುದ್ಧ ಪ್ರಕರಣ
ಕೋರಮಂಗಲ ಆರ್ಟಿಓ ಕಚೇರಿ ಹಾಗೂ ಏಜೆಂಟರ ಕಚೇರಿಗಳಲ್ಲಿ ಸಿಕ್ಕಿರುವ ಅಕ್ರಮ ಹಣ ಸಂಬಂಧ ಸದ್ಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಎಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಅಧಿಕಾರಿಗಳು ಹಾಗೂ ಇಬ್ಬರು ಏಜೆಂಟರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ದಾಳಿಯಲ್ಲಿ ಸಿಕ್ಕಿರುವ ಹಣಕ್ಕೆ ದಾಖಲೆ ನೀಡದಿದ್ದ ಪಕ್ಷದಲ್ಲಿ ಅವರನ್ನು ಆರೋಪಿಗಳನ್ನಾಗಿ ಮಾಡಿ ತನಿಖೆ ನಡೆಸಲಾಗುವುದು. ಅಗತ್ಯ ಬಿದ್ದಲ್ಲಿ ಅಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆಯಾದಲ್ಲಿ ಅವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗುವುದು ಎಂದು ಎಸಿಬಿಯ ಹಿರಿಯ ಅಧಿಕಾರಿ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಸ್ಮಾರ್ಟ್ ಕಾರ್ಡ್ ಸ್ಕೀಮ್ ಎಲ್ಲಿ ?
ಆರ್ಟಿಓ ಕಚೇರಿಯಲ್ಲಿ ಜನ ಸಾಮಾನ್ಯರಿಗೆ ಸಿಗುವ ಪ್ರತಿಯೊಂದು ಸೇವೆಯನ್ನು ಆನ್ಲೈನ್ ಮಾಡಲಾಗಿದೆ. ಚಾಲನಾ ಪರವಾನಗಿ, ವಾಹನ ನೋಂದಣಿ ಎಲ್ಲವನ್ನೂ ಸಹ ಜನ ಸಾಮಾನ್ಯರು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದಾಖಲೆಗಳನ್ನು ಅಂಚೆ ಮೂಲಕವೇ ಕಳಿಸಲಾಗುತ್ತದೆ. ಏಜೆಂಟರ ಹಾವಳಿ ತಪ್ಪಿಸಲೆಂದೇ ಸರ್ಕಾರ ಈ ಸೌಲಭ್ಯ ಕಲ್ಪಿಸಿತ್ತು. ವಿಪರ್ಯಾಸವೆಂದರೆ ಆನ್ಲೈನ್ ಸೇವೆ ನೀಡಿದ ಬಳಿಕವೂ ಏಜೆಂಟರ ಹಾವಳಿ ಹೆಚ್ಚಾಗಿದೆ. ಜತೆಗೆ ಆದಾಯವೂ ಹೆಚ್ಚಾಗಿದೆ. ಇನ್ನು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಐದಾರು ಬಾರಿ ಆರ್ ಟಿಓ ಕಚೇರಿಗೆ ಹೋಗಿ ಬಂದು ಆಗುವ ವೆಚ್ಚಕ್ಕೆ ಹೋಲಿಸಿದರೆ ಲಂಚ ಕೊಟ್ಟು ಬೇಗ ಮಾಡಿಸಿಕೊಳ್ಳುವುದೇ ಒಳಿತು ಎನ್ನುವ ಮಟ್ಟಿಗೆ ಪರ್ಯಾಯ ವ್ಯವಸ್ಥೆಯನ್ನೇ ಸೃಷ್ಟಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications