ಜ.19 ಪ್ರಧಾನಿ ಮೋದಿ ಕರ್ನಾಟಕ ಭೇಟಿ: ಸರ್ವಪಕ್ಷ ಸಭೆ ನಡೆಸಲು ಪ್ರಧಾನಿಗೆ ಎಎಪಿ ಪತ್ರ
ಬೆಂಗಳೂರು, ಜನವರಿ 13: ಕರ್ನಾಟಕ ಪ್ರವಾಸವನ್ನು ಕೇವಲ ಚುನಾವಣಾ ಪ್ರಚಾರಕ್ಕೆ ಸೀಮಿತಗೊಳಿಸದೇ, ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷಗಳ ಸಭೆ ಆಯೋಜಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಜನವರಿ 12ರಂದು ಪ್ರಧಾನಮಂತ್ರಿಗಳು ಹುಬ್ಬಳ್ಳಿಗೆ ಆಗಮಿಸಿದ್ದರು. ಜನವರಿ 19ರಂದು ಪುನಃ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಸಂಬಂಧ ಪ್ರಧಾನಿಗಳಿಗೆ ಆಮ್ ಆದ್ಮಿ ಪಕ್ಷ (AAP) ಪತ್ರ ಬರೆದಿದೆ.
Karnataka Assembly Election 2023: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ಪತ್ರದಲ್ಲಿ ಪೃಥ್ವಿ ರೆಡ್ಡಿ ಅವರು, ಕೇಂದ್ರ ಸರ್ಕಾರವು ಕನ್ನಡಕ್ಕೆ ತೋರುತ್ತಿರುವ ಮಲತಾಯಿ ಧೋರಣೆ ಬಗ್ಗೆಯೂ ನಾವು ಅಸಮಾಧಾನ ಹೊಂದಿದ್ದೇವೆ. ಕರ್ನಾಟಕಕ್ಕೆ 2017-18ರಲ್ಲಿ 1 ಕೋಟಿ ರೂಪಾಯಿ, 2018-19ರಲ್ಲಿ 99 ಲಕ್ಷ ಹಾಗೂ 2019-20ರಲ್ಲಿ 1.07 ಕೋಟಿ ರೂಪಾಯಿ ನೀಡಲಾಗಿದೆ. ಇದು ತಮಿಳುನಾಡಿಗೆ ಹೋಲಿಕೆ ಮಾಡಿದರೆ ತೀರಾ ಕಡಿಮೆ. ತಮಿಳುನಾಡಿಗೆ ಕ್ರಮವಾಗಿ ವರ್ಷಗಳ್ಲಲಿ 10.59 ಕೋಟಿ ರೂಪಾಯಿ, 4.65 ಕೋಟಿ ರೂ, ಹಾಗೂ 7.7 ಕೋಟಿ ರೂಪಾಯಿ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಬಿಎಂಪಿಯಲ್ಲೂ ಬಿಜೆಪಿಗೆ ಅಧಿಕಾರ: ಸಮಸ್ಯೆ ಬಗೆಹರಿಸಿ
ಬೆಂಗಳೂರು ರಸ್ತೆಗುಂಡಿ ಸಮಸ್ಯೆ ತಾಂಡವವಾಡುತ್ತಿದೆ. ಇದುವರೆಗೆ ಸುಮಾರು 40 ಜನರ ಸಾವಿಗೆ ಕಾರಣವಾದ ರಸ್ತೆಗುಂಡಿ ಸಮಸ್ಯೆ, ಇನ್ನೂ ಹಲವು ವಿಷಯಗಳ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ನಾಗರಿಕರು ಪ್ರಯತ್ನಿಸಿದ್ದರು. ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತರಲು ನೀವು ಪ್ರಚಾರ ಮಾಡಿದ್ದಿರಿ ಎಂಬುದನ್ನು ನೀವು ನೆನಪಿಸಿಕೊಳ್ಳಬೇಕು. ಬೆಂಗಳೂರಿನ ನಾಗರಿಕರು ಬಿಬಿಎಂಪಿಯಲ್ಲೂ ಅಧಿಕಾರ ನೀಡುವ ಮೂಲಕ ನಿಮಗೆ ಮೂರನೇ ಎಂಜಿನ್ನನ್ನು ಕೂಡ ನೀಡಿದ್ದಾರೆ. ಆದರೆ ನೀವು ಇಲ್ಲಿನ ನಾಗರಿಕರನ್ನು ಕೆಟ್ಟದಾಗಿ ನೋಡಿಕೊಳ್ಳುತ್ತಿದ್ದೀರಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹೆಚ್ಚುವರಿ ನೀರಿನ ಬಳಕೆಗೆ ತಮಿಳುನಾಡಲ್ಲಿ ವ್ಯವಸ್ಥೆ ಇಲ್ಲ
ಕಾವೇರಿ ನದಿ ವಿವಾದ ನ್ಯಾಯಮಂಡಳಿ (ಸಿಡಬ್ಲ್ಯೂಡಿಟಿ) ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕವು ತಮಿಳುನಾಡಿಗೆ 174.25 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಾಗಿದೆ. ತಮಿಳುನಾಡಿನ ಮೂಲಕ 400 ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತದೆ. ಇದರ ತಡೆಗೆ ಅಥವಾ ಬಳಸಿಕೊಳ್ಳಲು ತಮಿಳುನಾಡಿನ ಬಳಿ ವ್ಯವಸ್ಥೆ ಇಲ್ಲ. ದೊಡ್ಡ ಪ್ರಮಾಣದ ನೀರು ಸಮುದ್ರದ ಪಾಲಾಗುತ್ತಿದ್ದರೂ, 67 ಟಿಎಂಸಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸುವ ಮೇಕೆದಾಟು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸುವ ನಿರ್ಣಯಕ್ಕೆ ತಮಿಳುನಾಡು ಸರ್ಕಾರವು ಅಲ್ಲಿನ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದೆ.
ಈ ವಿಚಾರ ಸಂಬಂಧ ತಾವು (ಪ್ರಧಾನಿ) ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕರ್ನಾಟಕದ ಜನತೆ ಬಯಸುತ್ತಿದ್ದಾರೆ. ಆದರೆ ನೀವು ಕರ್ನಾಟಕದ ಸರ್ವ ಪಕ್ಷಗಳ ನಿಯೋಗದ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರಾಕರಿಸಿದ್ದೀರಿ. ಹಿಂದಿನ ಎಲ್ಲ ಪ್ರಧಾನಿಗಳು ಆಗಾಗ ಸರ್ವ ಪಕ್ಷಗಳ ನಿಯೋಗದೊಂದಿಗೆ ಚರ್ಚಿಸುತ್ತಿದ್ದರು ಎಂದು ಅವರು ವಿವರಿಸಿದರು.
ಯೋಜನೆಗೆ ಒಪ್ಪಿಗೆ ನೀಡದೇ ಅಮಾನತಿನಲ್ಲಿಟ್ಟ ಕೇಂದ್ರ
ಮಹದಾಯಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ದಿನಾಂಕವಿಲ್ಲದ ಅನುಮತಿ ಪತ್ರವೊಂದನ್ನು (ಸಂಖ್ಯೆ T-28027/2/2022-PA (S)DTE) 2022ರ ಡಿಸೆಂಬರ್ 29 ಟ್ವೀಟ್ ಮಾಡಿದ್ದರು. ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಬಗ್ಗೆ ಕೇಂದ್ರ ಜಲ ನಿಗಮದ (CWC) ಅನುಮತಿ ಪತ್ರದಂತೆ ಕಂಡು ಬರುತ್ತಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ ಏಪ್ರಿಲ್ 30, 2002ರಂದು ಗೋವಾ ವ್ಯಕ್ತಪಡಿಸಿದ್ದ ಆತಂಕವನ್ನು ಪರಿಗಣಿಸಿದ ನಂತರವೂ ಕೇಂದ್ರ ಸರ್ಕಾರವು ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತ್ತು ಎನ್ನುವುದನ್ನು ಮರೆಯಬಾರದು. ಆಗ ಕೂಡ ಅಧಿಕಾರದಲ್ಲಿದ್ದ ಇದೇ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಕೇವಲ ಐದು ತಿಂಗಳ ನಂತರ (2002 ಸೆಪ್ಟೆಂಬರ್ 19) ತಾತ್ವಿಕ ಒಪ್ಪಿಗೆ ನೀಡದೇ ಅಮಾನತಿನಲ್ಲಿ ಇಟ್ಟಿತು ಎಂದು ಹೇಳಿದರು.
ಇನ್ನು ಕೃಷ್ಣ ನದಿ ನೀರು ವಿವಾದ ನ್ಯಾಯಮಂಡಳಿಯು ಕರ್ನಾಟಕಕ್ಕೆ 900 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಪ್ರಸ್ತುತ ಕರ್ನಾಟಕವು 600 ಟಿಎಂಸಿಗಿಂತ ತುಸು ಹೆಚ್ಚು ನೀರನ್ನು ಬಳಸಿಕೊಳ್ಳುತ್ತಿದೆ. ಈಗ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಐಎಸ್ಡಬ್ಲ್ಯೂಆರ್ಡಿ ಕಾಯಿದೆ ಸೆಕ್ಷನ್ 6ರ ಅಡಿಯಲ್ಲಿ ಗೆಜೆಟ್ ಹೊರಡಿಸಬೇಕು. ಎಂಟು ವರ್ಷಗಳಿಂದ ಅಧಿಕಾರದಲ್ಲಿರುವ ಸರ್ಕಾರವು ಈ ಸರಳ ಕೆಲಸವನ್ನೂ ಮಾಡಿಲ್ಲ ಎಂದು ದೂರಿದರು.
ರಾಜ್ಯಗಳ ಮಧ್ಯೆ ಬಿರುಕು: ಶಾಂತಿಗಾಗಿ ಮಧ್ಯಪ್ರವೇಶಿಸಿ
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ, ಸಂವಿಧಾನದ 2 ರಿಂದ 4ರ ತನಕದ ಆರ್ಟಿಕಲ್ಗಳು ರಾಜ್ಯಗಳಿಗೆ ಪುನರ್ ವಿಂಗಡಣೆ ಕಾನೂನು ರೂಪಿಸುವ ಹಕ್ಕನ್ನು ಸಂಸತ್ತಿಗೆ ನೀಡಿದೆ. ಇದರಲ್ಲಿ ರಾಜ್ಯವೊಂದರ ಅಸ್ತಿತ್ವವನ್ನು ಅಂತ್ಯಗೊಳಿಸುವ ಹಕ್ಕನ್ನು ಕೂಡ ಒಳಗೊಂಡಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಬಾಕಿ ಉಳಿಸಿಕೊಂಡಿರುವ ರಾಜ್ಯಗಳ ನಡುವೆ ಶಾಂತಿ, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮಧ್ಯ ಪ್ರವೇಶಿಸುವ ಹಾಗೂ ನಿರ್ದೇಶನ ಅಧಿಕಾರ ಕೇಂದ್ರ ಸರ್ಕಾರ ಬಳಕೆಯಾಗಲಿ. ಆದರೆ ಕೇಂದ್ರ ಸರ್ಕಾರವು ರಾಜ್ಯಗಳು ಪರಸ್ಪರ ದ್ವೇಷ ಕಾರಲು ಹಾಗೂ ಪ್ರಮುಖ ರಾಜಕೀಯ ನಾಯಕರುಗಳೇ ಇದನ್ನು ಭಾರತ-ಚೀನಾದಂತಹ ಜಟಿಲ ವಿವಾದದಂತೆ ಬಿಂಬಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದರು.
ಕರ್ನಾಟಕದ ಪ್ರವಾಸದ ವೇಳೆ ಈ ಎಲ್ಲ ವಿಷಯಗಳ ಚರ್ಚೆಗೆ ಎಎಪಿ ಒಳಗೊಂಡ ಸರ್ವಪಕ್ಷ ಸಭೆ ನಡೆಸುವ ನಿರೀಕ್ಷಿಸಬಹುದೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆಲ್ಲ ಸಮಯ ಸಿಗದಿದ್ದರೆ ಪ್ರಧಾನಿ ಕಚೇರಿಯನ್ನು ವಿಂಗಡಿಸಿ. ಅದರಲ್ಲಿ ಒಬ್ಬರು ಕೆಲಸ ಮಾಡುವ ಪ್ರಧಾನಿ, ಇನ್ನೊಬ್ಬರು ಚುನಾವಣಾ ಪ್ರಚಾರದ ಪ್ರಧಾನಿಯಾಗಿ ಕೆಲಸ ಮಾಡಲಿ. ಹೀಗಾದರೂ ರಾಜ್ಯಗಳ ಸಮಸ್ಯೆ ಪರಿಹಾರ ಸಿಗಲಿ ಎಂದು ಪತ್ರದಲ್ಲಿ ಪೃಥ್ವಿ ರೆಡ್ಡಿ ಹೇಳಿದರು.