ನಮ್ಮ ಮೆಟ್ರೊ: ಅವ್ಯವಸ್ಥೆ ವಿರುದ್ಧ ಎಎಪಿ ಆಕ್ರೋಶ
ಬೆಂಗಳೂರು, ಏಪ್ರಿಲ್ 09: 'ನಮ್ಮ ಮೆಟ್ರೊ'ದಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಮೆಟ್ರೊ ರೈಲುಗಳಲ್ಲಿ ಕಿಕ್ಕಿರಿದ ಜನಸಂದಣಿ ಇರುತ್ತದೆ. ಪ್ರಯಾಣಿಕರು ಪ್ರತಿನಿತ್ಯ ಹಿಂಸೆಪಡುವಂತಾಗಿದೆ. ಸದಾ ತುಂಬಿತುಳುಕುವ ಬೋಗಿಗಳಲ್ಲಿ ನಿಲ್ಲಲೂ ಕಷ್ಟಪಡಬೇಕಾದ ಸ್ಥಿತಿ ಇದೆ. ಹೆಚ್ಚುವರಿ ಬೋಗಿಗಳನ್ನು ಅಳವಡಿಸುವುದಾಗಿ ಹೇಳಿದ್ದ ಆಡಳಿತ ಮಂಡಳಿ, ಅದನ್ನು ಇನ್ನೂ ಜಾರಿ ಮಾಡಿಲ್ಲ ಎಂದು ಪಕ್ಷ ದೂರಿದೆ.
''ನಮ್ಮ ಮೆಟ್ರೊ''ದಲ್ಲಿ ಪ್ರತಿನಿತ್ಯ ಅಂದಾಜು 3.5-4 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಬೆಂಗಳೂರು ಮಹಾನಗರದ ಉತ್ತರ -ದಕ್ಷಿಣ, ಪೂರ್ವ-ಪಶ್ಚಿಮದ ಸಂಪರ್ಕವನ್ನು ಸ್ವಲ್ಪಮಟ್ಟಿಗೆ ಮೆಟ್ರೊ ಕಲ್ಪಿಸುತ್ತದೆ. ಒಂದು ಬಾರಿಗೆ 975 ಜನರನ್ನು ಒಯ್ಯಬಲ್ಲ ಮೆಟ್ರೊ ರೈಲಿನಲ್ಲಿ ಪೀಕ್ ಅವರ್ಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಪ್ರಯಾಣಿಕರು ತುಂಬಿರುತ್ತಾರೆ. ಒಬ್ಬರಿಗೊಬ್ಬರು ಅಂಟಿ ನಿಲ್ಲಬೇಕಾದ ಸ್ಥಿತಿ ಇದೆ. ಇದರಿಂದ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಬಹಳ ತೊಂದರೆಪಡುತ್ತಿದ್ದಾರೆ ಎಂದು ಆರೋಪಿಸಿದೆ.

ಅವೈಜ್ಞಾನಿಕ ಶೌಚಾಲಯ:
ಜಯನಗರವೂ ಸೇರಿದಂತೆ ಕೆಲವು ಮೆಟ್ರೊ ನಿಲ್ದಾಣಗಳಲ್ಲಿ ಅವೈಜ್ಞಾನಿಕವಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರಿಂದ ಪ್ರಯಾಣಿಕರು ಮುಜುಗರ ಅನುಭವಿಸುವ ಸ್ಥಿತಿ ಇದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬೇಕಾದ ಮೆಟ್ರೊ ತನ್ನ ಪ್ರಯಾಣಿಕರಿಗೆ ದಟ್ಟಣೆಯ ಸಂಚಾರಕ್ಕಿಂತಲೂ ಕೆಟ್ಟದಾದ ಅನುಭವ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದೆ.
ಲಾಭಕೋರ ಸಂಸ್ಥೆ:
ಎಂದೋ ಶುರುವಾಗಬೇಕಿದ್ದ ಮೆಟ್ರೊ, ಆಮೆಗತಿಯ ಕಾಮಗಾರಿಯಿಂದಾಗಿ ಕೊನೆಗೂ ಒಂದು ಹಂತ ಪೂರೈಸಿದೆ. ಜನಸ್ನೇಹಿಯಾಗಬೇಕಿದ್ದ ಇದು, ಲಾಭಕೋರ ಸಂಸ್ಥೆಯಾಗಿ ಮಾರ್ಪಟ್ಟಿದೆ. ಕಾರ್ಮಿಕರಿಗೆ ದುಡಿಮೆ ತಕ್ಕ ಸಂಬಳ ನೀಡದೇ ವಂಚಿಸುತ್ತಿದ್ದರೆ, ಇತ್ತ ದುಬಾರಿ ದರ ವಿಧಿಸಿ ಪ್ರಯಾಣಿಕರಿಗೂ ತಕ್ಕ ಸೇವೆ ಒದಗಿಸದೆ ವಂಚಿಸುತ್ತಿದೆ.

ಪತ್ರಿಕೆಗಳಲ್ಲಿ ಬಂದ ವರದಿಗಳ ಪ್ರಕಾರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅದ್ಧೂರಿ ಸಮಾರಂಭ ನಡೆಸಿ ಆರು ಬೋಗಿಗಳ ಸಂಚಾರ ಆರಂಭಿಸಲು ಆಡಳಿತ ಮಂಡಳಿ ಯೋಜಿಸುತ್ತಿದೆ. ಸ್ವಾಯತ್ತವಾಗಿ, ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕಾದ ಆಡಳಿತ ಮಂಡಳಿ ರಾಜಕಾರಣಿಗಳನ್ನು ಮೆಚ್ಚಿಸಲು ಹೊರಟಿರುವುದು ಅಕ್ಷಮ್ಯ ಎಂದು ಎಎಪಿ ಖಂಡನೆ ವ್ಯಕ್ತಪಡಿಸಿದೆ.
ಅಸಮರ್ಥ ಸಚಿವ:
ಐಎಎಸ್ ಡಿ ಕೆ ರವಿ ಮತ್ತು ಡಿವೈಎಸ್ಪಿ ಗಣಪತಿ ಅವರ ಸಾವಿನ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿದ್ದ, ಭ್ರಷ್ಟಾಚಾರದ ಅನೇಕ ಆರೋಪಗಳನ್ನು ಹೊತ್ತಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ ಜಾರ್ಜ್ ತಮ್ಮ ಅಸಮರ್ಥ ಆಡಳಿತದಿಂದ ಬೆಂಗಳೂರನ್ನು ಅವ್ಯವಸ್ಥೆಯ ಆಗರವನ್ನಾಗಿಸಿದ್ದಾರೆ. ಗುಂಡಿಗಳಿಂದ ತುಂಬಿರುವ ರಸ್ತೆಗಳು, ನೊರೆ ತುಂಬಿ ನಾರುತ್ತಿರುವ ಮತ್ತು ಹೊತ್ತಿ ಉರಿದ ಕೆರೆಗಳು, ಭೂ ಮಾಫಿಯಾ ಪಾಲಾದ ಸರ್ಕಾರಿ ಜಮೀನುಗಳು ಅವರ ಸಾಧನೆಗಳಾಗಿವೆ ಎಂದು ಆರೋಪಿಸಿದೆ.
ಈ ಕೂಡಲೇ ಮೆಟ್ರೊ ಆಡಳಿತ ಮಂಡಳಿ ಹೊಸ ಹಾಗೂ ಹೆಚ್ಚುವರಿ ಬೋಗಿಗಳನ್ನು ಎರಡೂ ಮಾರ್ಗಗಳಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು. ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನೀಗಿಸಲು ಮುಂದಾಗಬೇಕು ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದ್ದಾರೆ.
ಇಲ್ಲವಾದಲ್ಲಿ ಜನವಿರೋಧಿ, ಕಾರ್ಮಿಕ ವಿರೋಧಿ ಮೆಟ್ರೊ ಆಡಳಿತ ಮಂಡಳಿಯ ವಿರುದ್ಧ ಜನಾಂದೋಲನವನ್ನು ರೂಪಿಸುವುದರ ಜೊತೆಗೆ ಕಾನೂನು ಕ್ರಮಕ್ಕೂ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications