ಬಿಬಿಎಂಪಿ ಬಜೆಟ್ ಅವಾಸ್ತವಿಕ, ಕಾಲ್ಪನಿಕ: ಪೃಥ್ವಿರೆಡ್ಡಿ ವಿಶ್ಲೇಷಣೆ
ಬೆಂಗಳೂರು, ಮಾರ್ಚ್ 2 : ಸಂಪನ್ಮೂಲ ಸಂಗ್ರಹದ ಸಾಮರ್ಥ್ಯ ಇಲ್ಲದಿದ್ದರೂ ಕೇವಲ ಕಾಲ್ಪನಿಕ ಮುಂಗಡ ಪತ್ರವನ್ನು ಬಿಬಿಎಂಪಿ ಮಂಡಿಸಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಪೃಥ್ವಿರೆಡ್ಡಿ ಆರೋಪಿಸಿದ್ದಾರೆ.
ಬಿಬಿಎಂಪಿ ಬಜೆಟ್ ಕುರಿತು ಒನ್ ಇಂಡಿಯಾ ಬಳಿ ನೀಡಿದ ಸಂದರ್ಶನದಲ್ಲಿ ಈ ಕುರಿತು ವಿವರಿಸಿದ ಅವರು, ಸುಳ್ಳು ಹೇಳಿ ದಾರಿ ತಪ್ಪಿಸುವ ಬಜೆಟ್ ನ್ನು ಬಿಬಿಎಂಪಿಯು ಮಂಡನೆ ಮಾಡಿದೆ. ಚುನಾವಣೆ ಸನ್ನಿಹಿತವಾಗುತ್ತಿದೆ ಎಂದೇ ಬಿಬಿಎಂಪಿಯು ಜನಪರವಾದ ಬಜೆಟ್ ಮಂಡನೆ ಮಾಡಿದೆ ಎಂದು ಮೇಯರ್ ಸಂಪತ್ ರಾಜ್ ನೇರವಾಗಿಯೇ ನುಡಿದಿದ್ದಾರೆ ಆದರೆ ಅಭಿವೃದ್ಧಿ ಕಾರ್ಯಗಳು ಎಷ್ಟಾಗಿವೆ ಎಂದು ಪೃಥ್ವಿರೆಡ್ಡಿ ಪ್ರಶ್ನಿಸಿದ್ದಾರೆ.
ಅವರು ಕೈಯಲ್ಲಿ ಹಣವಿಟ್ಟಿಕೊಂಡು ಮಂಡಿಸುವುದು ಬಜೆಟ್, ಆದರೆ ಐದು ವರ್ಷಗಳಿಂದ ನಮ್ಮ ಬಳಿ ಇಲ್ಲದ ಹಣವನ್ನು ಖರ್ಚು ಮಾಡುತ್ತೇವೆ ಎಂದು ಹೇಳಿ ಬಜೆಟ್ ಮಂಡಿಸಿದ್ದಾರೆ. ಕಳೆದ ಬಾರಿ 10 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡಿಸಲಾದರೂ ಅವರ ಬಳಿ ಇದ್ದಿದ್ದು 7500 ಕೋಟಿ ಮಾತ್ರ ಎಂದು ವಿವರಿಸಿದರು.
ಚುನಾವಣೆಗೂ ಮುನ್ನ ಬಿಬಿಎಂಪಿಯು ಬಜೆಟ್ ನಲ್ಲಿ ಘೋಷಿಸಿದ ಹಣವನ್ನು ಯಾವ ಯಾವ ಇಲಾಖೆ ಮೇಲೆ ಎಷ್ಟೆಷ್ಟು ವೆಚ್ಚ ಮಾಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ, ಜನರ ಮುಂದೆ ಮತ ಕೇಳಲು ಬಂದ ನಿಮ್ಮ ಜನನಾಯಕರ ಬಳಿಯಲ್ಲಿ ನೀವೂ ಕೂಡ ಈ ಪ್ರಶ್ನೆಯನ್ನು ಕೇಳಿ ಎಂದು ಮತದಾರರಿಗೆ ಕಿವಿಮಾತು ಹೇಳಿದ್ದಾರೆ.
ಆದರೆ ಶೇ.14ರಷ್ಟಿದ್ದ ಅರಣ್ಯ ಪ್ರದೇಶ ಇದೀಗ ಶೇ.6 ಬಂದು ನಿಂತಿದೆ. ಇನ್ನು ಕೆರೆಯನ್ನು ತೆಗೆದುಕೊಳ್ಳುವುದಾದರೆ ಸುಮಾರು ಸಾವಿರ ಕೆರೆಗಳಿದ್ದು ಸಮರ್ಪಕ ನಿರ್ವಹಣೆ ಇಲ್ಲದೆ 200 ಕೆರೆಗಳಿಗೆ ಬಂದು ನಿಂತಿದೆ.
ಅದರೊಂದಿಗೆ ಕೆರೆಯಲ್ಲಿ ಸಂಪೂರ್ಣ ಕೊಳೆ ತುಂಬಿಕೊಂಡಿದ್ದು ಆಗಾಗ ಬೆಂಕಿಯೂ ಕೂಡ ಬೀಳುತ್ತಿರುವುದು ಜನತೆಯನ್ನು ಆತಂಕಕ್ಕೀಡುಮಾಡಿದೆ ಎಂದರು.
ಆದರೆ ಖರ್ಚನ್ನು ಮಾತ್ರ ಹೆಚ್ಚು ಮಾಡಿಕೊಂಡು ಹೋಗುತ್ತಿದ್ದಾರೆ, ಅಭಿವೃದ್ಧಿ ಮಾತ್ರ ಸಾಧ್ಯವಾಗಿಲ್ಲ. ಮೊದಲು ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಲಂಚಕೋರತನವನ್ನು ಬಿಡಬೇಕು ಎಂದು ಆಗ್ರಹಿಸಿದರು.

ಜಿಐಎಸ್ ಮ್ಯಾಪಿಂಗ್ ಮೂಲಕ ಕುಳಿತಲ್ಲಿಂದಲೇ ತೆರಿಗೆ ಸಂಗ್ರಹ ಸಾಧ್ಯ
ಬಿಬಿಎಂಪಿಯು ಕೇವಲ ಹಳೆಯ ಕಟ್ಟಡಗಳಿಂದ ಮಾತ್ರ ತೆರಿಗೆ ಸಂಗ್ರಹಿಸುತ್ತಿದ್ದು, ಹೊಸ ಕಟ್ಟಡಗಳ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ತೆರಿಗೆ ಸಂಗ್ರಹ ಮಾಡಿ ಎಂದರೆ ಲಂಚವನ್ನು ತೆಗೆದುಕೊಂಡು ಅಧಿಕಾರಿಗಳು ಹಿಂದಿರುಗುತ್ತಿದ್ದಾರೆ ಲಂಚ ಪಡೆಯದೆ ಕೆಲಸ ಮಾಡಿ ತೋರಿಸಲಿ ಎಂದಿದ್ದಾರೆ. ಜಿಐಎಸ್ ಮ್ಯಾಪಿಂಗ್ ಮೂಲಕ ಯಾವ ಕಟ್ಟಡ ಯಾವ ಗಾತ್ರದಲ್ಲಿದೆ ಅದಕ್ಕೆ ಎಷ್ಟು ಬಾಡಿಗೆ ಸಂಗ್ರಹಿಸಬೇಕು ಎಂದು ಕುಳಿದಲ್ಲಿಂದಲೇ ನೋಟಿಸ್ ಕಳುಹಿಸಬಹುದಾಗಿದೆ.

ವಾಣಿಜ್ಯ ಕಟ್ಟಡಗಳಿಂದ ಕಡಿಮೆ ಬಾಡಿಗೆ ಸಂಗ್ರಹ
ಶಾಂತಿನಗರದಲ್ಲಿರುವ ಗರುಡಾ ಮಾಲ್ ನಲ್ಲಿ ಒಂದು ಸ್ಕ್ವೇರ್ ಫೂಟ್ ಗೆ ಕೇವಲ 25 ರೂ ಸಂಗ್ರಹಿಸಲಾಗುತ್ತಿದೆ. ಆದರೆ ಅಲ್ಲಿ ಸುತ್ತಮುತ್ತಲಿರುವ ಯಾವ ಕಟ್ಟಡದಲ್ಲೂ 250 ರೂ ಕಡಿಮೆ ಸಂಗ್ರಹಿಸುವುದಿಲ್ಲ, ಸರ್ಕಾರು ರಿಯಲ್ ಎಸ್ಟೇಟ್ ಕಂಪನಿಯ ಜತೆಗೆ ಒಪ್ಪಂದ ಮಾಡಿಕೊಂಡು ಕಡಿಮೆ ಬೆಲೆಯಲ್ಲಿ ಬಾಡಿಗೆ ನೀಡಲಾಗುತ್ತಿದೆ ಅದನ್ನು ಮೊದಲು ನಿಲ್ಲಿಸಬೇಕು.

ವಾಣಿಜ್ಯ ಕಟ್ಟಡಗಳ ಕುರಿತು ಆರ್ ಟಿ ಐ ನಲ್ಲಿ ಅರ್ಜಿ
ಸರ್ವಜ್ಞ ನಗರದ ಒಂದು ವಾರ್ಡ್ ನಲ್ಲಿ 200 ಕಟ್ಟಡಗಳಿವೆ ಎಂದು ಮಾಹಿತಿ ದೊರೆತಿದೆ. ಆದರೆ ಅಲ್ಲಿನ ಒಂದು ರಸ್ತೆಯಲ್ಲಿಯೇ 200 ಕ್ಕೂ ಹೆಚ್ಚು ಕಟ್ಟಡಗಳನ್ನು ಕಾಣಬಹುದು ಎಂದಿದ್ದಾರೆ.

ಹೋರ್ಡಿಂಗ್ಸ್: 1 ಸಾವಿರ ಕೋಟಿ ಬದಲು 50 ಕೋಟಿ ರೂ ಮಾತ್ರ ವಸೂಲಿ
ಹೋರ್ಡಿಂಗ್ಸ್ ನಿಂದ ಬರುವ ಹಣವು ಬಿಬಿಎಂಪಿಯ ಶೇ 1 ರಷ್ಟಿದೆ. ಆದರೆ ಸರಿಯಾಗಿ ಸಂಗ್ರಹಿಸದೆ ಲಂಚ ಸ್ವೀಕರಿಸುವ ಮೂಲಕ ತಮ್ಮ ಆದಾಯವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಹೋರ್ಡಿಂಗ್ಸ್ ನಿಂದ 1 ಸಾವಿರ ಕೋಟಿ ಹಣವನ್ನು ಸಂಗ್ರಹಿಸಬಹುದು ಆದರೆ ಕೇವಲ 50 ಕೋಟಿ ಮಾತ್ರ ಸಂಗ್ರಹಿಸಲಾಗುತ್ತಿದೆ ಎಂದು ದೂರಿದರು.

ತ್ಯಾಜ್ಯ ನಿರ್ವಹಣೆಗೆ ಸಮರ್ಪಕವಾಗಿ ಹಣ ಬಳಕೆಯಾಗುತ್ತಿಲ್ಲ
ತ್ಯಾಜ್ಯ ನಿರ್ವಹಣೆಗಾಗಿ 1066 ಕೋಟಿ ವೆಚ್ಚಮಾಡಲಾಗುತ್ತಿದೆ. ಬೆಂಗಳೂರು ದೆಹಲಿ ಮತ್ತು ಮುಂಬೈಗಿಂದ ಅರ್ಧದಷ್ಟಿದೆ ಆದರೆ ಎರಡು ಪಟ್ಟು ಅಧಿಕ ಹಣವನ್ನು ವೆಚ್ಚಮಾಡಲಾಗುತ್ತಿದೆ. ಇಲ್ಲಿ ಒಂದುವಾರ್ಡ್ ಗೆ 40 ಕೋಟಿ ವೆಚ್ಚಮಾಡಲಾಗುತ್ತಿದೆ. ಒಂದು ಕ್ಷೇತ್ರಕ್ಕೆ ಕನಿಷ್ಠ 5.40 ಕೋಟಿ ಕೊಟ್ಟರೆ ವಾರ್ಡ್ ನ್ನು ಹೊಳೆಯುವ ರೀತಿಯಲ್ಲಿ ಅಭಿವೃದ್ಧಿ ಮಾಡಬಹುದು.












Click it and Unblock the Notifications