ರಾಜೀನಾಮೆ ನೀಡದಿದ್ದರೆ ಭಾಸ್ಕರ್ ರಾವ್ ಘೇರಾವ್
ಬೆಂಗಳೂರು, ಜೂ. 26 : ಭ್ರಷ್ಟಾಚಾರವನ್ನು ನಿಗ್ರಹಿಸಬೇಕಾದ ಸಂಸ್ಥೆ ಲೋಕಾಯುಕ್ತದಲ್ಲೇ ಕೋಟಿ ರು. ಡೀಲ್ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಬೇಕು ಮತ್ತು ಇದರ ನೈತಿಕ ಹೊಣೆ ಹೊತ್ತು ಲೋಕಾಯುಕ್ತ ಭಾಸ್ಕರ್ ರಾವ್ ಕೂಡಲೆ ರಾಜೀನಾಮೆ ನೀಡಬೇಕೆಂದು ಕರ್ನಾಟಕ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ, ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕದ ಕಾರ್ಯನಿರತ ಸದಸ್ಯ ರವಿಕೃಷ್ಣಾ ರೆಡ್ಡಿ ಅವರು, ಕೂಡಲೆ ಕ್ರಮ ತೆಗೆದುಕೊಳ್ಳದೆ ಹೋದರೆ ಲೋಕಾಯುಕ್ತ ಕಚೇರಿ ಎದುರು ಮತ್ತು ಭಾಸ್ಕರ್ ರಾವ್ ಅವರ ನಿವಾಸದ ಎದುರು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಲೋಕಾಯುಕ್ತದಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅನೈತಿಕ ಕೃತ್ಯಗಳ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ತೀರಾ ಕಳವಳಕಾರಿ ಮತ್ತು ದುರದೃಷ್ಟಕರ ಆಗಿದೆ. ಭಾಸ್ಕರ ರಾವ್ ಅವರ ಅಧಿಕೃತ ನಿವಾಸಕ್ಕೆ ಸರ್ಕಾರಿ ಅಧಿಕಾರಿಗಳನ್ನು ಕರೆಸಿಕೊಂಡು, ಹೆದರಿಸಿ ಬೆದರಿಸಿ ಲೋಕಾಯುಕ್ತರ ಮನೆಯವರೇ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಸಾಕ್ಷ್ಯಾಧಾರದ ಸಮೇತ ಕೇಳಿಬರುತ್ತಿದೆ ಎಂದು ರೆಡ್ಡಿ ಕಳವಳ ವ್ಯಕ್ತಪಡಿಸಿದರು. [ಲೋಕಾಯುಕ್ತದಲ್ಲಿ ಕೋಟಿ ಡೀಲ್, ಸಿಸಿಬಿ ತನಿಖೆ]

ಈ ನಿಟ್ಟಿನಲ್ಲಿ, ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಶ್ವಿನ್ ರಾವ್ ಮತ್ತು ಕೃಷ್ಣರಾವ್ ರನ್ನು ಈ ಕೂಡಲೆ ಬಂಧಿಸಬೇಕೆಂದು ಆಮ್ ಅದ್ಮಿ ಪಕ್ಷ ಒತ್ತಾಯಿಸುತ್ತದೆ. ಹಾಗೆಯೇ ಲೋಕಾಯುಕ್ತ ವೈ ಭಾಸ್ಕರ್ ರಾವ್ ಈ ಕೂಡಲೆ ರಾಜಿನಾಮೆ ನೀಡಬೇಕು ಮತ್ತು ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಡಬೇಕು ಎಂದು ರವಿಕೃಷ್ಣಾ ರೆಡ್ಡಿ ಆಗ್ರಹಿಸಿದರು.
ಇಲ್ಲದೇ ಹೋದಲ್ಲಿ ಆಮ್ ಅದ್ಮಿ ಪಕ್ಷವು ಲೋಕಾಯುಕ್ತರ ಕಛೇರಿ ಮತ್ತು ಅವರ ಅಧಿಕೃತ ನಿವಾಸದ ಮುಂದೆ ಧರಣಿ ಪ್ರತಿಭಟನೆಗಳಿಗೆ ಮುಂದಾಗಲಿದೆ. ಮತ್ತು ಲೋಕಾಯುಕ್ತರನ್ನು ಘೇರಾವ್ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ ಎಂದು ಅವರು ಮುನ್ನೆಚ್ಚರಿಕೆ ನೀಡಿದರು.
ಇದೇ ಸಮಯದಲ್ಲಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆಯವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಇಡೀ ಪ್ರಕರಣದ ಬಗ್ಗೆ ತನಿಖೆ ಮಾಡಿಸುವುದರ ಜೊತೆಗೆ ಲೋಕಾಯುಕ್ತದಲ್ಲಿಯ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ವರದಿ ನೀಡುವಂತೆ ಕೋರಬೇಕೆಂದು ಪಕ್ಷ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.












Click it and Unblock the Notifications