'ಬೊಂಬಾಟ್ ಬೆಂಗಳೂರು' ಎಎಪಿಯ ಗುರಿ, ಚುನಾವಣೆಗೆ ತಯಾರಿ
ಬೆಂಗಳೂರು, ಜೂನ್ 27: ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ನಡೆಯಲಿದ್ದು ಆಮ್ ಆದ್ಮಿ ಪಕ್ಷವು ಈಗಿನಿಂದಲೇ ತಯಾರಿ ಆರಂಭಿಸಿದೆ. 'ಬೊಂಬಾಟ್ ಬೆಂಗಳೂರು' ನಿರ್ಮಾಣದ ಧ್ಯೇಯವಾಕ್ಯದೊಂದಿಗೆ ಅದು ಚುನಾವಣೆಗೆ ಇಳಿಯುತ್ತಿದೆ.
ಇಂದು ಎಎಪಿ ರಾಜ್ಯ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿಷಯ ಹಂಚಿಕೊಂಡ ಎಎಪಿ ಮುಖಂಡರು, ಬೆಂಗಳೂರಿನ ಸಮಸ್ಯೆಗಳಿಗೆ ಮೂಲ ಪಕ್ಷಗಳ ಕೆಟ್ಟ ರಾಜಕಾರಣ, ಇಲ್ಲಿನ ಸಮಸ್ಯೆ ಬಗೆಹರಿಸಲು ರಾಜಕೀಯ ಶಕ್ತಿಯನ್ನು ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಎಎಪಿಯ ಬೆಂಗಳೂರು ಯೋಜನೆಯ ಮುಖ್ಯಸ್ಥರಾದ ಬಸವರಾಜು ಮುದಿಗೌಡರ್ ಮಾತನಾಡಿ, ಬೆಂಗಳೂರಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕೇವಲ ಕೈಗಾರಿಕಾ, ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಮಾತ್ರವೇ ಒತ್ತು ನೀಡಲಾಗಿದೆ. ಇದು ಬೆಂಗಳೂರಿನ ಆತ್ಮವನ್ನು ಕೆಡಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

'ಬೆಂಗಳೂರಿನ ಸಮಸ್ಯೆಗಳಿಗೆ ನಮ್ಮ ಬಳಿ ಪರಿಹಾರವಿದೆ'
ಎಎಪಿಯು ಮಾಡಿರುವ ಸಮೀಕ್ಷೆಯ ಪ್ರಕಾರ ಬೆಂಗಳೂರಿನ ಜನರಿಗೆ ವಿಶೇಷವಾಗಿ ಸ್ಥಳೀಯ ಚುನಾವಣೆಯಲ್ಲಿ ಪಕ್ಷ, ಜಾತಿ ಗಳು ಮುಖ್ಯವಲ್ಲ ಜನರಿಗೆ ಅವರ ಸ್ಥಳೀಯ ಸಮಸ್ಯೆಗಳನ್ನು ಸರಿಪಡಿಸುವವರು ಬೇಕಾಗಿದ್ದಾರೆ, ಬೆಂಗಳೂರಿಗರ ಸಮಸ್ಯೆಗಳನ್ನು ಸರಿಪಡಿಸಲು ನಾವು ಯೋಜನೆಯೊಂದಿಗೆ ತಯಾರಿದ್ದೇವೆ ಎಂದು ಬಸವರಾಜು ಮುದಿಗೌಡರ್ ಹೇಳಿದರು.

'ಮೂರೂ ಪಕ್ಷಗಳು ಬಿಬಿಎಂಪಿಯನ್ನು ಹಾಳು ಮಾಡಿವೆ'
ಎಎಪಿ ರಾಜ್ಯ ಸಂಚಾಲಕಿ ಶಾಂತಲಾ ದಾಮ್ಲೆ ಮಾತನಾಡಿ, ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಬಿಬಿಎಂಪಿಯನ್ನು ಆಳಿವೆ, ಹಾಗೂ ಹಾಳು ಮಾಡಿವೆ. ರಾಜಕಾರಣವನ್ನು ಹಣ ಸಂಪಾದನೆಯ ಮಾರ್ಗವನ್ನಾಗಿಸಿಕೊಂಡಿರುವ ಈಗಿನ ಕಾರ್ಪೊರೇಟರ್ಗಳಲ್ಲಿ ಹೊಸ ಆಲೋಚನೆಗಳೇ ಇಲ್ಲ. ಎಎಪಿಗೆ ಹೊಸ ಆಲೋಚನೆ ಇದೆ, ಬೆಂಗಳೂರನ್ನು ಬದಲಾಯಿಸುವ ತುಡಿತ ಇದೆ ಎಂದು ಅವರು ಹೇಳಿದರು.

'ಬಿಬಿಎಂಪಿ ಕಟ್, ಕಮಿಷನ್ ಸ್ಥಳವಾಗಿಬಿಟ್ಟಿದೆ'
ಬೆಂಗಳೂರು ಎಎಪಿಯ ಅಧ್ಯಕ್ಷ ಮೋಹನ್ ದಾಸ್ ಪೈ ಮಾತನಾಡಿ, ಬಿಬಿಎಂಪಿ ಎನ್ನುವುದು 'ಕಟ್ ಆಂಡಡ ಕಮಿಷನ್' ಆಗಿದೆ. ಬಿಬಿಎಂಪಿ ಚುನಾವಣೆ ಕಾರ್ಪೊರೇಟರ್ಗಳಿಗೆ ಹಣ ಮಾಡಿಕೊಳ್ಳುವ ದಂಧೆಯಾಗಿದೆ, ಸ್ಥಳೀಯ ಸಮಸ್ಯೆಗಳನ್ನು ಅಡ್ಜಸ್ಟ್ ಮಾಡ್ಕೋಳಿ ಎಂಬುದಕ್ಕೆ ಇನ್ನು ಮುಕ್ತಿ ಸಿಗಲಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ಚುನಾವಣೆ ಅಲ್ಲ ಚಳವಳಿ: ಪೃಥ್ವಿ ರೆಡ್ಡಿ
ಎಎಪಿ ರಾಜ್ಯ ಮುಖಂಡ ಪೃಥ್ವಿ ರೆಡ್ಡಿ ಮಾತನಾಡಿ, ಈ ಬಾರಿಯ ಬಿಬಿಎಂಪಿ ಚುನಾವಣೆಯು ಕೇವಲ ಚುನಾವಣೆ ಅಲ್ಲ, ಇದು ಚಳವಳಿ, ಇಡೀಯ ದೇಶದಲ್ಲಿ ಪ್ರಗತಿಪರ ರಾಜಕಾರಣ ಮಾಡುತ್ತಿರುವ ಎಕೈಕ ಪಕ್ಷ ಎಎಪಿ, ದೆಹಲಿಯ ಮಾದರಿಯನ್ನು ಇಟ್ಟುಕೊಂಡು ಬೆಂಗಳೂರನ್ನು ಅಭಿವೃದ್ಧಿಪಡಿಸಲು ಎಎಪಿ ಬದ್ಧವಾಗಿದೆ ಎಂದು ಅವರು ಹೇಳಿದರು.












Click it and Unblock the Notifications