ಬೆಂಗಳೂರು : ಪೊಲೀಸ್ ವ್ಯವಸ್ಥೆಗೆ ಆಮ್ ಆದ್ಮಿ ಸಲಹೆ
ಬೆಂಗಳೂರು, ನ. 21 : ಮಂಗಳವಾರ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಅವರ ಮೇಲೆ ದುಷ್ಕರ್ಮಿಯಿಂದ ನಡೆದ ಹಲ್ಲೆಯನ್ನು ಆಮ್ ಆದ್ಮಿ ಘಟಕ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಸರ್ಕಾರ ಘಟನೆಯಿಂದ ಎಚ್ಚೆತ್ತುಕೊಂಡು ಸಾರ್ವಜನಿಕರು ರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಕ್ಷ ಒತ್ತಾಯಿಸಿದೆ.
ಘಟನೆ ಕುರಿತು ಆತಂಕ ವ್ಯಕಪಡಿಸಿರುವ ಆಮ್ ಆದ್ಮಿ ಪಕ್ಷದ ಕರ್ನಾಟಕದ ಘಟಕ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜ್ಯೋತಿ ಉದಯ್ ಅವರು ಶೀಘ್ರವಾಗಿ ಗುಣಮುಖವಾಗಲಿ ಎಂದು ಹಾರೈಸಿದೆ. ಪೊಲೀಸ್ ಇಲಾಖೆ ಹಲ್ಲೆ ಪ್ರಕರಣದ ಆರೋಪಿಯನ್ನು ಶೀಘ್ರವೇ ಬಂಧಿಸಲಿದೆ ಎಂದು ಪಕ್ಷ ಭರವಸೆ ವ್ಯಕ್ತಪಡಿಸಿದೆ. ಸರ್ಕಾರ ಎಟಿಎಂಗಳ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಕ್ಷ ಸಲಹೆ ನೀಡಿದೆ.

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ. ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಗೆ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡಿದೆ. (ಎಟಿಎಂ ಹಲ್ಲೆ ಪ್ರಕರಣ : ಆಂಧ್ರದಲ್ಲಿ ಆರೋಪಿ ಸುಳಿವು)
ಆಮ್ ಆದ್ಮಿ ಪಕ್ಷದ ಸಲಹೆಗಳು
1) ಬೆಂಗಳೂರಿನಲ್ಲಿ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರ ಸಂಖ್ಯೆ ಹೆಚ್ಚಾಗುತ್ತಿಲ್ಲ. ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಬೆಂಗಳೂರಿನಲ್ಲಿ ಪೊಲೀಸರ ಸಂಖ್ಯೆ ಹೆಚ್ಚಿಸಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು.
2) ಬೆಂಗಳೂರಿನಲ್ಲಿ ಲಭ್ಯವಿರುವ ಪೊಲೀಸರಲ್ಲಿ ಹೆಚ್ಚಿನವರು ರಾಜಕಾರಣಿಗಳ ಮತ್ತು ಗಣ್ಯ ವ್ಯಕ್ತಿಗಳ ಭದ್ರತಗೆ ನಿಯೋಜನೆಗೊಂಡಿದ್ದಾರೆ. ಗಣ್ಯ ವ್ಯಕ್ತಿಗಳ ಭದ್ರತೆಗೆ ಇರುವ ಪೊಲೀಸರನ್ನು ಕಡಿತಗೊಳಿಸಿ, ಸಾರ್ವಜನಿಕರ ರಕ್ಷಣೆಗಾಗಿ ನೇಮಿಸಬೇಕಾಗಿದೆ.
3) ಪೊಲೀಸ್ ಇಲಾಖೆಯ ಕಾರ್ಯಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ಸಾರ್ವಜನಿಕರು ರಕ್ಷಣೆಗಾಗಿ ಇಲಾಖೆ ಕಾನೂನು ಬದ್ಧವಾಗಿ ಕೈಗೊಳ್ಳುವ ಎಲ್ಲಾ ಕಾರ್ಯಗಳಿಗೆ ಸರ್ಕಾರ ಸಹಾಯ ಮಾಡಬೇಕು.
4) ಪೊಲೀಸ್ ಕಾಯ್ದೆಯಲ್ಲಿ ಕಾಲಕ್ಕೆ ತಕ್ಕಂತೆ ಸುಧಾರಣೆ ತರಬೇಕು. 1861ರ ಪೊಲೀಸ್ ಕಾಯ್ದೆ ಬ್ರಿಟಿಷರು ರಚಿಸಿದ್ದು, ಇದು ಜನರನ್ನು ಅವರ ಇಷ್ಟಕ್ಕೆ ತಕ್ಕಂತೆ ನಿಯಂತ್ರಿಸುವ ನಿಯಮಗಳನ್ನು ತಂದಿದೆ. ಈ ನೀತಿಗಳು ಸಾಮಾನ್ಯ ಜನರನ್ನು ರಕ್ಷಿಸುತ್ತಿಲ್ಲ.
5) ಸುಪ್ರೀಂಕೋರ್ಟ್ 2006ರಲ್ಲಿ ನೀಡಿದ ಆದೇಶದಂತೆ ಪೊಲೀಸ್ ದೂರುಗಳ ಪ್ರಾಧಿಕಾರ ರಚನೆ ಮಾಡಬೇಕು.ಇದರಿಂದ ಪೊಲೀಸರ ಕಾರ್ಯವೈಖರಿಯನ್ನು ತಿಳಿಯಲು ಸಹಾಯಕವಾಗುತ್ತದೆ.
ಎಟಿಎಂ ಹಲ್ಲೆ ಪ್ರಕರಣ ಆಂಧ್ರದಲ್ಲಿ ಆರೋಪಿ ಸುಳಿವು












Click it and Unblock the Notifications