ಆಧಾರ್ ಇದ್ದರೆ ಮಾತ್ರ ರೇಷನ್ ಕಾರ್ಡ್ ಸಿಗುತ್ತೆ

ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, ಹೊಸ ಪಡಿತರ ಚೀಟಿಗಳನ್ನು ವಿತರಿಸುವಾಗ ಆಧಾರ್ ಸಂಖ್ಯೆ ಪಡೆಯಲಾಗುವುದು. ಈಗಾಗಲೇ ಕಾರ್ಡ್ ಹೊಂದಿದ್ದರೆ ನವೀಕರಣ ಸಂದರ್ಭದಲ್ಲಿ ಆಧಾರ್ ಸಂಖ್ಯೆ ನೀಡಬೇಕು ಎಂದು ಹೇಳಿದರು.
ಪಡಿತರ ಚೀಟಿಯೊಡನೆ ಆಧಾರ್ ಗೆ ಸಂಪರ್ಕ ಕಲ್ಪಿಸುವುದರಿಂದ ನಕಲಿ ಪಡಿತರ ಚೀಟಿಗಳಿಗೆ ಕಡಿವಾಣ ಹಾಕಬಹುದು. ಆಗ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಮೈಸೂರು, ತುಮಕೂರು, ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಆಧಾರ್ ನೋಂದಣಿ ಕಾರ್ಯ ಪೂರ್ಣವಾಗಿದೆ. ಆ ಜಿಲ್ಲೆಗಳ ಗ್ರಾಹಕರಿಗೆ ಸೀಮೆಎಣ್ಣೆಗೆ ನೀಡುವ 16.20 ರೂ. ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಪಡಿತರ ಚೀಟಿ ಮೂಲಕ ಮಾರುಕಟ್ಟೆ ದರದ ಬೆಲೆ ನೀಡಿ ಸೀಮೆಎಣ್ಣೆ ಖರೀದಿಸಬೇಕು. ಅದಕ್ಕೆ ನೀಡಲಾಗುವ ಸಬ್ಸಿಡಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಎಲ್ ಪಿಜಿಯಂತೆ ಸೀಮೆಎಣ್ಣೆ ಸಬ್ಸಿಡಿಯು ನೇರವಾಗಿ ಬ್ಯಾಂಕ್ ಖಾತೆಗೆ ತಲುಪಲಿದೆ ಎಂದರು.
ಎಲ್ಲಾ ಜಿಲ್ಲೆಗಳಲ್ಲೂ ಜನರು ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ ಸಚಿವರು, ಹೊಸ ರೇಷನ್ ಕಾರ್ಡ್ ನೀಡುವಾಗ ಕಡ್ಡಾಯವಾಗಿ ಆಧಾರ್ ನಂ ಪಡೆದುಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.
ಮೌಲ್ಯ ಮಾಪನ ಮಾಡಲಿ ಬಿಡಿ : ಕೆಪಿಸಿಸಿವತಿಯಿಂದ ಎಲ್ಲಾ ಸಚಿವರ ಕಾರ್ಯವೈಖರಿ ಮೌಲ್ಯಮಾಪನ ಮಾಡುವುದಕ್ಕೆ ದಿನೇಶ್ ಗುಂಡೂರಾವ್ ಒಪ್ಪಿಗೆ ನೀಡಿದ್ದಾರೆ. ಪಕ್ಷದ ವತಿಯಿಂದ ಈ ಮೌಲ್ಯಮಾಪನ ನಡೆಲಾಗುತ್ತದೆ ಇದಕ್ಕೆ ಸಹಕಾರ ನೀಡುವುದಾಗಿ ಸಚಿವರು ಸ್ಪಷ್ಟಪಡಿಸಿದರು. (ಸಚಿವರ ಟೆಸ್ಟ್ : ಸಿದ್ದು, ಪರಮೇಶ್ವರ್ ನಡುವೆ ಭಿನ್ನಮತ)












Click it and Unblock the Notifications