SSLC Paper Leak: ವಿದ್ಯಾರ್ಥಿಗಳ ಭವಿಷ್ಯಕ್ಕೆ ಚಪ್ಪಡಿ ಎಳೆಯುತ್ತಿದೆ ಸರ್ಕಾರ: ರಾಜೀವ್ ಹೆಗಡೆ ಬರಹ
ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗಳು ಸೋಮವಾರದಿಂದ ಆರಂಭವಾಗಿವೆ. ಶಿಕ್ಷಣ ಇಲಾಖೆಯು ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುತ್ತದೆ. ಅದನ್ನು ಶಾಲೆ ಮುಖ್ಯೋಪಾಧ್ಯಾಯರಿಗೆ ಕಳುಹಿಸುವ ಲಾಗಿನ್ ವಿವರ, ಓಟಿಪಿ ಹಾಕಿ ಡೌನ್ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಮಾಡಿಸಿಕೊಂಡು ಪರೀಕ್ಷೆ ನಡೆಸುವ ವ್ಯವಸ್ಥೆ ಪರಿಚಯಿಸಿದೆ. ಇದೀಗ ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಇದನ್ನು ಖಂಡಿಸಿ ಸರ್ಕಾರದ ನಿರ್ಲಕ್ಷ್ಯ ಬಗ್ಗೆ ಪತ್ರಕರ್ತ, ಗ್ಲಾನ್ಸ್ ಸಹಾಯಕ ಸಂಪಾದಕ 'ರಾಜೀವ್ ಹೆಗ್ಡೆ' ಅವರ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದು, ಅವರ ಬರಹ ಮುಂದಿದೆ.
''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತದ ಗಂಧಗಾಳಿ ಕೂಡ ಮಾಯವಾಗಿರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಡ. ಅಂದ್ಹಾಗೆ ಇದು ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ. ಕಳೆದೊಂದು ವಾರದಿಂದ ಪ್ರತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ. ಇದರಲ್ಲಿ ಭಾಗಿಯಾದವರು ಸೋರಿಕೆ ಆಗಿರುವುದನ್ನು ಹೆಮ್ಮೆಯ ವಿಚಾರದಂತೆ ಹಂಚಿಕೊಳ್ಳುತ್ತಿದ್ದಾರೆ. ಇದಲ್ಲದೇ ಪ್ರಶ್ನೆ ಪತ್ರಿಕೆಗಳ ಬಹಿರಂಗ ಹರಾಜು ಹಾಕಿ ಒಂದು ದಿನದ ಬಳಿಕವೂ ದುಷ್ಟರ ಸಾಮಾಜಿಕ ಜಾಲತಾಣಗಳ ಖಾತೆ ಸಕ್ರಿಯವಾಗಿದೆ. ಆದರೆ ಇಂತಹ ಚಟುವಟಿಕೆಗಳು ಶಿಕ್ಷಣ ಹಾಗೂ ಪೊಲೀಸ್ ಇಲಾಖೆಯಲ್ಲಿ ಯಾರ ಕಣ್ಣಿಗೂ ಬೀಳದಿರುವುದು ಅಚ್ಚರಿ ಮೂಡಿಸುತ್ತದೆ.

ಈ ಸೋರಿಕೆ ಟ್ರೇಲರ್ ಆಗಿರಬಹುದು
ಇದು ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೆಂದು ನಿರ್ಲಕ್ಷಿಸಬಾರದು. ಏಕೆಂದರೆ ಮುಖ್ಯ ಪರೀಕ್ಷೆಗೆ ಈ ಸೋರಿಕೆ ಟ್ರೇಲರ್ ಆಗಿರಬಹುದು. ನಮ್ಮ ಘನತೆವೆತ್ತ ಶಿಕ್ಷಣ ಇಲಾಖೆ ಹಾಗೂ ದುರಹಂಕಾರಿ ಸಚಿವರ ಸೊಕ್ಕನ್ನು ಈ ನೀಚರು ಪರೀಕ್ಷಿಸುತ್ತಿರಬಹುದು. ಒಂದು ವಾರದಿಂದ ಪ್ರತಿದಿನ ಇಂತಹ ಕುಚೋದ್ಯ ಮಾಡುತ್ತಿದ್ದರೂ ಸರ್ಕಾರ ಸುಮ್ಮನಿದೆ ಎಂದಾದರೆ ಸಚಿವರು ಹಾಗೂ ಅಧಿಕಾರಿಗಳು ಆ ಕುರ್ಚಿಯಲ್ಲಿ ಕೂರುವ ಯಾವುದೇ ನೈತಿಕತೆ ಹೊಂದಿಲ್ಲ. ಇಷ್ಟು ಬಹಿರಂಗವಾಗಿ ಪ್ರಶ್ನೆ ಪತ್ರಿಕೆ ಹಂಚಿಕೆ ಮಾಡುತ್ತಿದ್ದರೂ ಭಯ ಹುಟ್ಟಿಸುವ ಕೆಲಸ ಮಾಡುವುದಿಲ್ಲವೆಂದಾದರೆ ಆ ಇಲಾಖೆಗೆ ಒಬ್ಬ ಸಚಿವ, ನೂರಾರು ಅಧಿಕಾರಿಗಳು ಹಾಗೂ ಪ್ರತ್ಯೇಕ ಮಂಡಳಿ ಏಕೆ?
ಪೂರ್ವಸಿದ್ಧತಾ ಪರೀಕ್ಷೆಯ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಯಾವುದಾದರೂ ಬೇಜವಾಬ್ದಾರಿ ಸಚಿವ ಹಾಗೂ ಅಧಿಕಾರಿ ಬೋಧನೆ ಮಾಡಲು ಶುರು ಮಾಡಬಹುದು. ಹಾಗಿದ್ದರೆ ಪರೀಕ್ಷೆ ಮಾಡುವ ಉದ್ದೇಶ ಏನು? ನಮ್ಮ ಕರ್ನಾಟಕದ ಇತಿಹಾಸದಲ್ಲಿ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಇಷ್ಟೊಂದು ಹೀನಾಯ ಸ್ಥಿತಿಗೆ ಎಂದೂ ಬಂದಿರಲಿಲ್ಲ.
ಅಧಿಕಾರ ಹಂಚಿಕೆಯೊಳಗೆ ಕಳೆದು ಹೋಗಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಇದನ್ನು ಸಮರ್ಥಿಸಿಕೊಂಡು, ಸೋರಿಕೆ ಮೂಲಕ ಬಡವರ ಮಕ್ಕಳು ಹೆಚ್ಚಿನ ಅಂಕ ಗಳಿಸಲಿ ಬಿಡಿ ಎಂದು ಹೇಳಿದರೂ ಅಚ್ಚರಿಯಿಲ್ಲ...ಥೂ... ನಾಚಿಕೆಗೇಡು...ಇದು ಒಂದು ಸರ್ಕಾರ..'' ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.












Click it and Unblock the Notifications