BBMP: ರಸ್ತೆಗುಂಡಿ ಅಪಘಾತ ಸ್ಥಳದಲ್ಲಿ ಗಾಯಾಳು ಧರಣಿ: ವಿಡಿಯೋ ವೈರಲ್
ಬೆಂಗಳೂರು, ನವೆಂಬರ್ 14: ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಅವಾಂತರ ನಿತ್ಯ ಒಂದಲ್ಲಾ ಒಂದು ಕಡೆ ಸೃಷ್ಟಿಯಾಗುತ್ತಿದೆ. ಇದೀಗ ರಸ್ತೆಗುಂಡಿಯಿಂದ ಅಪಘಾತಕ್ಕೀಡಾದ ವ್ಯಕ್ತಿಯೊಬ್ಬರು ಕುಳಿತು ಪ್ರತಿಭಟನೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ರಸ್ತೆಗುಂಡಿಯಿಂದ ಅಪಘಾತಕ್ಕೆ ಒಳಗಾದ ನಂತರ ವ್ಯಕ್ತಿಯೊಬ್ಬ ರಸ್ತೆ ಅವ್ಯವಸ್ಥೆಗಳು ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾನಿರತ ವ್ಯಕ್ತಿ ಸಮಸ್ಯೆಗೆ ಪರಿಹಾರ ಕುರಿತು ಸ್ಥಳಿಯ ನಾಗರಿಕ ಮಂಡಳಿಯ ಅಧಿಕಾರಿಗಳಿಂದ ಪ್ರತಿಕ್ರಿಯೆ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೊಂಡಗಳಿಂದ ಕೂಡಿರುವ ಬೆಂಗಳೂರಿನ ರಸ್ತೆಗಳಿಂದ ಅನೇಕಗಳಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದೇ ರೀತಿ ರಸ್ತೆಗುಂಡಿಯಿಂದ ಕಳೆದ ಶುಕ್ರವಾರ ತೊಂದರೆಗೀಡಾದ ವ್ಯಕ್ತಿಯೊಬ್ಬರು ರಸ್ತೆಗಳ ದುರವಸ್ಥೆ ವಿರುದ್ಧ ಧರಣಿ ನಡೆಸಿದ್ದಾರೆ. ಅವರು ಹಳೆ ಮದ್ರಾಸ್ ರಸ್ತೆಯ ಆದರ್ಶ ಥಿಯೇಟರ್ ಬಳಿ ದ್ವಿಚಕ್ರವಾಹನದಲ್ಲಿ ತೆರಳುವಾಗ ರಸ್ತೆಗುಂಡಿಯಿಂದ ಅಪಘಾತಕ್ಕೆ ತುತ್ತಾಗಿದ್ದರು.

ನಾಗರಿಕರಿಗಾಗಿ ಸೃಷ್ಟಿಯಾಗಿರುವ ಟ್ವಿಟ್ಟರ್ನಲ್ಲಿ 'ಮಾತಾಡ್ ಮಾತಾಡ್ ಬೆಂಗಳೂರು' ಪೇಜಿನಲ್ಲಿ ಪ್ರತಿಭಟನೆಯ ವಿಡಿಯೋ ಹಂಚಿಕೊಳ್ಳಲಾಗಿದೆ. ಅದೇ ರೀತಿ ರಸ್ತೆಗುಂಡಿ ಸಮಸ್ಯೆಗಳ ಕುರಿತ ಸಾಕಷ್ಟು ಫೋಟೊ, ವಿಡಿಯೋ ಈ ಪೇಜಿನಿಂದ ಹಂಚಿಕೊಳ್ಳಲಾಗಿದೆ.
ರಸ್ತೆಗುಂಡಿಯಿಂದ ಅಪಘಾತವಾಗಿದೆ. ಈ ಬಗ್ಗೆ ಯಾವುದೇ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ. ಬೆಂಗಳೂರಿನ ನಿವಾಸಿಗಳ ನಿತ್ಯ ತಮ್ಮ ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ಇಂಥ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳು ಹಾಗೂ ಸಿವಿ ರಾಮನ್ ನಗರ ಶಾಸಕ ರಘು ಅವರಿಗೆ ಧನ್ಯವಾದಗಳು ಎಂದು ಅಪಘಾತಕ್ಕೊಳಗಾದ ವ್ಯಕ್ತಿ ಹೇಳಿದ್ದಾರೆ.

3 ಕಾರಣಗಳಿಗೆ ಮಾತ್ರ ರಸ್ತೆ ದುರಸ್ತಿ, ಆಕ್ರೋಶ
ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಈ ಮಾತಾಡ್ ಮಾತಾಡ್ ಟ್ವಿಟ್ಟರ್ ಪೇಜ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿಯು ಮೂರು ಸಮಯದಲ್ಲಿ ಮಾತ್ರ ರಸ್ತೆಗುಂಡಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತದೆ. ಒಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದಾಗ, ಮತ್ತೊಂದು ಗುಂಡಿಗಳಿಂದ ಯಾರಾದರೂ ಪ್ರಾಣ ಬಿಟ್ಟಾಗ ಹಾಗೂ ರಸ್ತೆ ಗುಂಡಿ ಸ್ಥಳದಲ್ಲಿ ಗಾಯಗೊಂಡವರು ಪ್ರತಿಭಟನೆ ಮಾಡಿದಾಗ ಎಂದು ಆಕ್ರೋಶ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಹೋದ ಬೆನ್ನಲ್ಲೆ ಇಂಥದ್ದೊಂದು ರಸ್ತೆ ಮೂಲಸೌಕರ್ಯ ಸಮಸ್ಯೆ, ದುರವ್ಯವಸ್ಥೆ ಹೊರ ಬಿದ್ದಿರುವುದು ಇಲ್ಲಿನ ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿದಂತಾಗಿದೆ. ಇತ್ತೀಚೆಗಷ್ಟೇ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಕಿಡಿ ಕಾರಿದ್ದ ಆಮ್ ಆದ್ಮಿ ಪಕ್ಷವು, ಪ್ರಧಾನಿ ಆಗಮಿಸುವಾಗಷ್ಟೇ ಬೆಂಗಳೂರಿನ ರಸ್ತೆ ದುರಸ್ತಿ ಕಾಣುತ್ತವೆ. ಶಾಸಕರು ಎಚ್ಚರದಿಂದ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ 'ತಿಂಗಳಿಗೊಮ್ಮೆ ಮೋದಿ ಬರಲಿ' ಎಂಬ ಅಭಿಯಾನ ಆರಂಭಿಸಿದ್ದರು.












Click it and Unblock the Notifications