ಡಿ.ಕೆ.ಶಿವಕುಮಾರ್ ಮನೆಯಲ್ಲಿ ಐಟಿ ಪರಿಶೀಲನೆ ಅಂತ್ಯ
ಡಿ.ಕೆ.ಶಿವಕುಮಾರ್ ಮನೆಯಲ್ಲಿ 4ನೇ ದಿನವೂ ಐಟಿ ಅಧಿಕಾರಿಗಳ ಪರಿಶೀಲನೆ ಡಿ.ಕೆ.ಶಿವಕುಮಾರ್ ಮಾವ ತಿಮ್ಮಯ್ಯ ಮನೆಯಲ್ಲಿಯೂ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ.
ಬೆಂಗಳೂರು, ಆ. 5 : ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಐಟಿ ಅಧಿಕಾರಿಗಳ ಕಾರ್ಯಾಚರಣೆ ಶನಿವಾರ ಬೆಳಗ್ಗೆ ಅಂತ್ಯಗೊಂಡಿದೆ. ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಕನಕಪುರ ಬಳಿಕ ಸಾತನೂರಿನಲ್ಲಿರುವ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಲು ತೆರಳಿದ್ದಾರೆ.
ಹಿಂದಿನ ಸುದ್ದಿ : ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲಿ 4ನೇ ದಿನವೂ ಐಟಿ ಅಧಿಕಾರಿಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ. ಬುಧವಾರ ಮುಂಜಾನೆಯಿಂದ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ವಾಸ್ತವ್ಯ ಹೂಡಿದ್ದಾರೆ.
ಶನಿವಾರ ಡಿ.ಕೆ.ಶಿವಕುಮಾರ್ ಕುಟುಂಬದವರಿಗೂ ಹೊರಗಡೆಯಿಂದ ಉಪಹಾರ ತರಿಸಿ ನೀಡಲಾಗಿದೆ. ಹಾಲು ಮಾರುವವನನ್ನು ಮನೆಯೊಳಗೆ ಬಿಡದೇ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಅತ್ತ ಮೈಸೂರಿನಲ್ಲಿರುವ ಡಿ.ಕೆ.ಶಿವಕುಮಾರ್ ಮಾವ ತಿಮ್ಮಯ್ಯ ಮನೆಯಲ್ಲಿಯೂ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ. ತಿಮ್ಮಯ್ಯ ಆಪ್ತ ಎಡ್ವಿನ್ ರನ್ನು ಮನೆಗೆ ಕರೆಸಿಕೊಂಡು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಆಪ್ತರಾದ ವಿನಯ್ ಕಾರ್ತಿಕ್ ಮತ್ತು ಆಂಜನೇಯ ವಿಚಾರಣೆ ವೇಳೆ ನೀಡಿರುವ ಮಾಹಿತಿ ಅನ್ವಯ ಐಟಿ ಅಧಿಕಾರಿಗಳು ಸಚಿವರ ವಿಚಾರಣೆ ನಡೆಸಲಿದ್ದಾರೆ. ಡಿಕೆಶಿ ಅವರ ಮತ್ತಷ್ಟು ಆಪ್ತರ ಮನೆ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ.
ಬುಧವಾರ ಬೆಳಗ್ಗೆ ಐಟಿ ಅಧಿಕಾರಿಗಳು ಬೆಂಗಳೂರಿನ ಸದಾಶಿವ ನಗರ ನಿವಾಸ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದರು. ನಾಲ್ಕು ದಿನದಿಂದ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಲೇ ಇದೆ. ಡಿ.ಕೆ.ಶಿವಕುಮಾರ್ ನಿವಾಸ ಮತ್ತು ಮಾವ ತಿಮ್ಮಯ್ಯ ನಿವಾಸದಲ್ಲಿ ಅಧಿಕಾರಿಗಳು ವಾಸ್ತವ್ಯ ಹೂಡಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ.
ಮೈಸೂರು, ದೆಹಲಿ, ಹಾಸನ ಮುಂತಾದ ಕಡೆ ದಾಳಿ ನಡೆಸಿದಾಗ ಸಿಕ್ಕ ದಾಖಲೆಗಳನ್ನು ಅಧಿಕಾರಿಗಳು ಸದಾಶಿವನಗರದ ನಿವಾಸಕ್ಕೆ ತೆಗೆದುಕೊಂಡು ಬಂದಿದ್ದು, ಡಿ.ಕೆ.ಶಿವಕುಮಾರ್ ಅವರ ಬಳಿ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ದೆಹಲಿಯ ಎರಡು ನಿವಾಸ ಮತ್ತು ಸಚಿವರ ಆಪ್ತ ಆಂಜನೇಯ ನಿವಾಸದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ.
ಡಿ.ಕೆ.ಶಿವಕುಮಾರ್ ಆಪ್ತ ಜ್ಯೋತಿಷಿ ದ್ವಾರಕಾನಾಥ್ ಮನೆ ಮೇಲೆಯೂ ದಾಳಿ ನಡೆಸಲಾಗಿತ್ತು. ಎರಡು ದಿನ ಅಲ್ಲಿ ಮಾಹಿತಿ ಸಂಗ್ರಹಣೆ ಮಾಡಿದ್ದ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.












Click it and Unblock the Notifications