ಬಾಂಬ್ ಬೆದರಿಕೆ ಬಂದಿದ್ದು ಬೆಂಗಳೂರಿನ 48 ಶಾಲೆಗಳಿಗೆ!
ಬೆಂಗಳೂರು, ಡಿಸೆಂಬರ್ 01; ಶುಕ್ರವಾರ ಬೆಂಗಳೂರು ನಗರದ ಖಾಸಗಿ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿದೆ. ಪೊಲೀಸರು, ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಇದುವರೆಗಿನ ಮಾಹಿತಿಯಂತೆ ಇದು ಹುಸಿ ಬೆದರಿಕೆಯಾಗಿದೆ.
ಬಸವೇಶ್ವರ ನಗರ, ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ 15 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ ಎಂದು ಮೊದಲು ಅಂದಾಜಿಸಲಾಗಿತ್ತು. ಬಳಿಕ ಆನೇಕಲ್ ವ್ಯಾಪ್ತಿಯ 5 ಶಾಲೆಗಳಿಗೆ ಸಹ ಇದೇ ಮಾದರಿ ಇ-ಮೇಲ್ ಬಂದಿತ್ತು.

ಸದ್ಯದ ಮಾಹಿತಿಯಂತೆ ನಗರದ 48 ಶಾಲೆಗಳಿಗೆ ಅನಾಮಿಕ ವ್ಯಕ್ತಿ ಬಾಂಬ್ ಬೆದರಿಕೆ ಇ-ಮೇಲ್ ಕಳಿಸಿದ್ದಾನೆ. ಇ-ಮೇಲ್ ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಶಾಲೆಗಳಿಂದ ಮಕ್ಕಳನ್ನು ಹೊರಗೆ ಕಳಿಸಿ, ಪರಿಶೀಲನೆ ನಡೆಸಿದರು.
ಪೊಲೀಸರ ಟ್ವೀಟ್; ಬೆಂಗಳೂರು ನಗರ ಪೊಲೀಸರ ಟ್ವೀಟ್ ಪ್ರಕಾರ, 'ನಗರದ ಕೆಲವು ಶಾಲೆಗಳಿಗೆ ಇಂದು ಮುಂಜಾನೆ ಇಮೇಲ್ ಮೂಲಕ 'ಬಾಂಬ್ ಬೆದರಿಕೆ' ಕರೆಗಳನ್ನು ಕಳುಹಿಸಲಾಗಿದೆ. ಈ ಬಗ್ಗೆ ನಮ್ಮ ಬಾಂಬ್ ಪತ್ತೆ ದಳದವರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದುವರೆಗಿನ ತಪಾಸಣೆಯಿಂದ ಇವು ಸುಳ್ಳು ಕರೆಗಳೆಂದು ಕಂಡುಬರುತ್ತಿದೆ. ಆದಾಗ್ಯೂ ಇಮೇಲ್ ಕಳುಹಿಸಿದ ವ್ಯಕ್ತಿಗಳ ಪತ್ತೆಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ.
ಸದಾಶಿವನಗರದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನಿವಾಸದ ಮುಂಭಾಗದಲ್ಲಿರುವ ಶಾಲೆಗೆ ಸಹ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ನಿವಾಸದಿಂದ ಸೀದಾ ಶಾಲೆಗೆ ಆಗಮಿಸಿದ ಡಿ. ಕೆ. ಶಿವಕುಮಾರ್ ಪೊಲೀಸರ ಜೊತೆ ಮಾತುಕತೆ ನಡೆಸಿದರು. ಲ್ಯಾಪ್ಟಾಪ್ನಲ್ಲಿ ಇ-ಮೇಲ್ ವೀಕ್ಷಿಸಿದರು. ಪೊಲೀಸರ ಜೊತೆ ಬಾಂಬ್ ಪತ್ತೆ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡರು.
ವಿವಿಧ ಶಾಲೆಗಳ ಆಡಳಿತ ಮಂಡಳಿಗಳು ಪೋಷಕರಿಗೆ ತುರ್ತು ಸಂದೇಶ ಕಳಿಸಿದವು. ಪೋಷಕರು ಶಾಲೆಗೆ ಆಗಮಿಸಿ ಮಕ್ಕಳನ್ನು ಮನೆಗೆ ವಾಪಸ್ ಕರೆದುಕೊಂಡು ಹೋದರು. ಶಾಲೆಯ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ಇದುವರೆಗೂ ಯಾವುದೇ ಶಾಲೆಯಲ್ಲಿ ಬಾಂಬ್ ಪತ್ತೆಯಾಗಿಲ್ಲ.
ಬೆದರಿಕೆ ಇ-ಮೇಲ್ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು. ಗೃಹ ಸಚಿವರು ತವರು ಜಿಲ್ಲೆ ತುಮಕೂರಿನಲ್ಲಿದ್ದು ಸಂಜೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವಂತೆ, ಇ-ಮೇಲ್ ಕಳಿಸಿದ ಮೂಲವನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದ ಬಸವೇಶ್ವರನಗರದ ನ್ಯಾಫಲ್ ಶಾಲೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಸಹ ಶಾಲೆಗೆ ಭೇಟಿ ನೀಡಿದರು.
ಆರ್. ಅಶೋಕ ಮಾತನಾಡಿ, "ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವುದರ ಹಿಂದೆ ಹೈ ಲೆವಲ್ ಉಗ್ರರ ಕೈವಾಡವಿದೆ" ಎಂದು ಆರೋಪಿಸಿದರು.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಟ್ವೀಟ್ ಮಾಡಿ, "ರಾಜ್ಯದಲ್ಲಿ ಸಮಾಜ ಕಂಟಕ ಶಕ್ತಿಗಳಿಗೆ ಪೊಲೀಸ್ ಭಯ ಇಲ್ಲದಂತಾಗಿದೆ. ಇದರ ಪರಿಣಾಮವಾಗಿಯೇ ಕಿಡಿಗೇಡಿಗಳು ಬೆಂಗಳೂರಿನ ಕೆಲವು ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂದು ಭಯದ ವಾತಾವರಣ ಸೃಷ್ಟಿಸಲು ನಿರ್ಭಯವಾಗಿ ಪ್ರಯತ್ನ ನಡೆಸಿದ್ದಾರೆ" ಎಂದು ಹೇಳಿದ್ದಾರೆ.
"ಆದರೆ ಈ ಪ್ರಕರಣವನ್ನು ಹುಸಿ ಎಂದು ಹಗುರವಾಗಿಯೂ ಪರಿಗಣಿಸುವಂತಿಲ್ಲ, ಸಮಾಜ ಪೀಡಕ ಶಕ್ತಿಗಳು ಶಾಲೆಗಳನ್ನೇ ಗುರಿಯಾಗಿಸಿಕೊಂಡು ಬೆದರಿಕೆ ಒಡ್ಡಿದ್ದಾರೆ ಎಂದರೆ, ಈ ಹಿನ್ನೆಲೆಯಲ್ಲಿ ಗಂಭೀರ ತನಿಖೆ ಹಾಗೂ ಮುಂಜಾಗ್ರತೆ ವಹಿಸಬೇಕಾಗಿರುವುದು ಸರ್ಕಾರದ ಆದ್ಯತೆಯಾಗಬೇಕಿದೆ. ರಾಜ್ಯದ ಪ್ರತಿಯೊಂದು ಶಾಲೆಗಳಿಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಆತಂಕ ರಹಿತ ವಾತಾವರಣ ಮೂಡಿಸಲು ಈ ಕೂಡಲೇ ಅಗತ್ಯ ಕ್ರಮ ಕೈಗೊಂಡು ಈ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸುತ್ತೇನೆ" ಎಂದು ತಿಳಿಸಿದ್ದಾರೆ.












Click it and Unblock the Notifications