40 ಲಕ್ಷದ ಆಭರಣ ಜತೆಗೆ ಸಿಸಿಟಿವಿ ಕ್ಯಾಮೆರಾ ಹೊತ್ತೊಯ್ದ ಕಿಲಾಡಿ ಕಳ್ಳರು
ಬೆಂಗಳೂರು, ಜೂನ್ 16: ತಮ್ಮ ಸ್ವತ್ತು ಉಳಿಸಿಕೊಳ್ಳಲು ಜನರು ಚಾಪೆ ಕೆಳಗೆ ತೂರಿದರೆ, ಅದನ್ನು ಕದಿಯಲು ಕಳ್ಳರು ಸುರಂಗವೇ ತೋಡುತ್ತಾರೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ. ಕೆಆರ್ ಪುರ ಹತ್ತಿರದ ದೇವಸಂದ್ರ ಮುಖ್ಯರಸ್ತೆಯಲ್ಲಿರುವ ಬಾಲಾಜಿ ಆಭರಣ ಮಳಿಗೆಯಲ್ಲಿ ನಲವತ್ತು ಲಕ್ಷ ರುಪಾಯಿ ಮೌಲ್ಯದ ಆಭರಣವನ್ನು ಕಳ್ಳರು ಕದ್ದಿದ್ದಾರೆ.
ಜತೆಗೆ ಸಿಸಿಟಿವಿ ಕ್ಯಾಮೆರಾವನ್ನು ಹೊತ್ತೊಯ್ದಿದ್ದಾರೆ. ಕಳ್ಳತನಕ್ಕಾಗಿ ಸುರಂಗವನ್ನೇ ತೋಡಿದ್ದು, ಇದು ಪರಿಚಿತರ ಮಾಡಿರುವ ಕೃತ್ಯ ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಅಂಗಡಿಗೆ ಹೊಂದಿಕೊಂಡಂತೆ ಇರುವ ಚರಂಡಿ ಇದೆ. ಅದನ್ನು ಕಲ್ಲಿನಿಂದ ಮುಚ್ಚಿದ್ದಾರೆ. ಆದರೆ ಸಿಮೆಂಟ್ ಇರುವ ಭಾಗದಲ್ಲಿ ತೂತು ಮಾಡಿ, ಅಂಗಡಿ ಒಳಹೊಕ್ಕಿದ್ದಾರೆ ಕಳ್ಳರು.

ಆರು ಅಡಿಯಷ್ಟು ಸುರಂಗ ಕೊರೆದವರೇ ಈ ಕೆಲಸ ಮಾಡಿದ್ದಾರೆ. ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ವೈರ್ ಗಳನ್ನು ಕಿತ್ತುಹಾಕಿ, ಕ್ಯಾಮೆರಾ ಕೂಡ ಎತ್ತಿಹಾಕಿಕೊಂಡು ಹೋಗಿದ್ದಾರೆ.
ಇನ್ನು ಕಳ್ಳರು ತೋಡಿದ ಸುರಂಗದ ಉದ್ದಕ್ಕೂ ಆಭರಣಗಳನ್ನು ಬೀಳಿಸಿಕೊಂಡು ಹೋಗಿದ್ದಾರೆ. ಚರಂಡಿ ಬಳಿ ಸಿಸಿ ಟಿವಿ ಕ್ಯಾಮೆರಾ ಇದ್ದು, ಅವುಗಳ ದೃಶ್ಯಗಳನ್ನು ಪರಿಶೀಲಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications