ಪತ್ರಕರ್ತ ರವಿ ಬೆಳಗೆರೆ ನಾಲ್ಕು ದಿನ ಸಿಸಿಬಿ ಪೊಲೀಸರ ವಶಕ್ಕೆ
ಬೆಂಗಳೂರು, ಡಿಸೆಂಬರ್ 8: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಹಾಯ್ ಬೆಂಗಳೂರ್ ಸಂಪಾದಕ- ಪತ್ರಕರ್ತ ರವಿ ಬೆಳಗೆರೆ ಅವರನ್ನು ಒಂದನೇ ಎಸಿಎಂಎಂ ನ್ಯಾ.ಜಗದೀಶ್ ಅವರು ನಾಲ್ಕು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ರವಿ ಬೆಳಗೆರೆ ಪರ ವಕೀಲ ದಿವಾಕರ್, ಇನ್ನು ಸಿಸಿಬಿಯಲ್ಲಿ ರವಿ ಬೆಳಗೆರೆಯವರು ಉಳಿದುಕೊಳ್ಳುವಂಥ ವ್ಯವಸ್ಥೆ ಸಹ ಇಲ್ಲ. ರವಿ ಬೆಳಗೆರೆ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಮೂರು ಶಸ್ತ್ರ ಚಿಕಿತ್ಸೆಗಳಾಗಿವೆ. ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಬೇಕು. ಅಲ್ಲಿ ವಿಚಾರಣೆ ಮುಂದುವರಿಸುವುದಕ್ಕೆ ರವಿ ಬೆಳಗೆರೆ ಎಲ್ಲ ಸಹಕಾರಿ ನೀಡುತ್ತಾರೆ ಎಂದು ತಿಳಿಸಿರುವುದಾಗಿ ಹೇಳಿದರು.

ಸೋಮವಾರದಂದು ಜಾಮೀನಿಗಾಗಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ ಅವರು, ರವಿ ಬೆಳಗೆರೆ ಅವರ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾದದ್ದು. ಇನ್ನು ಅವರ ಬಳಿ ವಶಪಡಿಸಿಕೊಂಡ ರಿವಾಲ್ವರ್ ಮತ್ತು ಡಬಲ್ ಬ್ಯಾರಲ್ ಬಂದೂಕಿಗೆ ಲೈಸೆನ್ಸ್ ಇದೆ. ಆದ್ದರಿಂದ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಆಗುವುದಿಲ್ಲ ಎಂದು ಸಹ ಅವರು ಹೇಳಿದರು.
ಹಾಯ್ ಬೆಂಗಳೂರ್ ಪತ್ರಿಕಾ ಕಚೇರಿಯಲ್ಲಿ ಸಿಕ್ಕ ಜಿಂಕೆ ಚರ್ಮದ ಬಗ್ಗೆ ಮಾತನಾಡಿದ ದಿವಾಕರ್, ಧಾರ್ಮಿಕ ಆಚರಣೆ ಮಾಡುವ ಸಮುದಾಯದಲ್ಲಿ ಕೃಷ್ಣಾಜಿನ (ಜಿಂಕೆ ಚರ್ಮ) ಇಟ್ಟುಕೊಳ್ಳುವ ಪದ್ಧತಿ ಇದೆ. ಅದು ಬೇಟೆಯಾಡಿದ್ದಲ್ಲ. ಇದರಲ್ಲಿ ಯಾವುದೇ ಅಪರಾಧ ಇಲ್ಲ ಎಂದು ಕೂಡ ಸಮರ್ಥನೆ ಮಾಡಿಕೊಂಡರು.












Click it and Unblock the Notifications