ಯಾರಿವನು? ಸರಗಳ್ಳನಿಗಾಗಿ 300 ಕಿ.ಮೀ ಸಿಸಿಟಿವಿ ಚೆಕ್, 1 ಕೆಜಿ ಚಿನ್ನ ರಿಕವರಿ!
ಬೆಂಗಳೂರು, ಆಗಸ್ಟ್ 26: ಸರಗಳ್ಳತನ ಮಾಡೋಕೆ ಹೊರಟರೇ ಮುಗಿತು ಕೈತುಂಬ ಚಿನ್ನ ಹೊತ್ತೇ ವಾಪಸ್ಸಾಗುತ್ತಿದ್ದ. ಆ ಖತರ್ನಾಕ್ ಸರಗಳ್ಳನನ್ನು ಹಿಡಿಯಲು ಪೊಲೀಸರು ಹುಡಿಕಾಟವನ್ನು ನಡೆಸಿದ್ದರು. 300 ಕಿ.ಮೀ ಸಿಸಿಟಿವಿ ಪರಿಶೀಲನೆ ಸರಗಳ್ಳನ ಬಂಧನ. ಬರೊಬ್ಬರಿ 1 ಕೆಜಿ ಚಿನ್ನ ರಿಕವರಿ ಮಾಡಿ ಪೊಲೀಸರ ವಿಶಿಷ್ಠ ಕಾರ್ಯಾಚರಣೆಯ ರಿಪೋರ್ಟ್ ಇಲ್ಲಿದೆ.
ರಾಜ್ಯದ 51 ಠಾಣೆ ಬೇಕಾಗಿದ್ದ ಸರಗಳ್ಳನನ್ನು ಪುಟ್ಟೇನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೆಂಗಳೂರು ಸಿಟಿ ಪೊಲೀಸರ ನಿದ್ದೆಗೆಡೆಸಿದ್ದ ತಮಿಳುನಾಡು ಮೂಲದ ಸಂತೋಷ್ ಖತರ್ನಾಕ್ ಸರಗಳ್ಳನಾಗಿದ್ದು, ಸಂತೋಷ್ ಗೆ ಸಹಕರಿಸಿದ್ದ ಆರೋಪಿ ರವಿ ಎಂಬಾತನನ್ನು ಸಹ ಬಂಧಿಸಲಾಗಿದೆ.
ಸರಗಳ್ಳ ಸಂತೋಷ್ನಿಂದ ಸುಮಾರು 1 ಕೆ.ಜಿ.ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿ ಸಂತೋಷ್ ಇಡೀ ಬೆಂಗಳೂರು ನಗರ ಸುತ್ತಿ ಸರಗಳ್ಳತನ ಮಾಡುತ್ತಿದ್ದ. ಬೆಳಗ್ಗೆಯಿಂದ ಸಂಜೆಯವರೆಗೂ ಸರಗಳ್ಳತನವನ್ನು ಮಾಡಿ ಎಸ್ಕೇಪ್ ಆಗಿ ಬಿಡುತ್ತಿದ್ದ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಸುಮಾರು 51ಕ್ಕೂ ಹೆಚ್ಚು ಪೊಲೀಸ್ ಠಾಣೆಗೆ ಬೇಕಾಗಿದ್ದ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಪುಟ್ಟೇನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರ್ಟಿಓ ವೆಬ್ ಸೈಟ್ನಲ್ಲಿ ನಂಬರ್ ಹುಡುಕಾಟ
ತಮಿಳುನಾಡು ಮೂಲದ ಆರೋಪಿ ಸಂತೋಷ್ ಬೆಂಗಳೂರಿಗೆ ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟರೇ ಸರಗಳ್ಳತನ ಮಾಡುವವರೆಗೂ ಬೈಕ್ ನಲ್ಲಿ ಸುತ್ತಾಡ್ತಿದ್ದ. ಬೈಕ್ಗೆ ನಕಲಿ ನಂಬರ್ ಪ್ಲೇಟ್ ಬಳಸುತ್ತಿದ್ದ ಆರೋಪಿ ಆರ್.ಟಿ.ಓ ವೆಬ್ಸೈಟ್ಗೆ ಹೋಗಿ ಬೈಕ್ ನಂಬರ್ ಸರ್ಚ್ ಮಾಡುತ್ತಿದ್ದ. ತನ್ನ ಪಲ್ಸರ್ ಬೈಕ್ ಕಲರ್ಗೆ ಯಾವ ಯಾವ ನಂಬರ್ ಇದೆ ಎಂದು ಸರ್ಚ್ ಮಾಡಿ ಬಳಿಕ ಅದೇ ಕಲರ್ ಬೈಕ್ ನ ಬೇರೆ ಬೇರೆ ಬೈಕ್ ಗಳ ನಕಲಿ ನಂಬರ್ ಕಲೆಕ್ಟ್ ಮಾಡುತ್ತಿದ್ದ. ಆ ನಕಲಿ ನಂಬರ್ ಪ್ಲೇಟ್ ಬಳಸಿಕೊಂಡು ಚೈನ್ ಸ್ನ್ಯಾಚ್ಗೆ ಫೀಲ್ಡ್ ಗಿಳಿಯುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸರಗಳ್ಳನಿಗಾಗಿ 300 ಕಿ.ಮೀ. ಸಿಸಿಟಿವಿ ಪರಿಶೀಲನೆ
ಸರಗಳ್ಳ ಸಂತೋಷ್ ಮನೆ ಬಿಡುವಾಗ ಹೆಲ್ಮೆಟ್ ಹಾಕುತ್ತಿದ್ದ. ಆತ ಎಲ್ಲಿಯೂ ಹೆಲ್ಮೆಟ್ ತೆಗೆಯದೇ ಬೈಕ್ ನಲ್ಲಿ ಓಡಾಟ ನಡೆಸ್ತಿದ್ದ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದ ಸಂತೋಷ್ ಬೈಕ್ ನಲ್ಲಿ ಸುತ್ತಾಡುವಾಗ ಊಟಕ್ಕೆ ಹೋದರು ಹೆಲ್ಮೆಟ್ ತೆಗೆಯುತ್ತಿರಲಿಲ್ಲ ಎನ್ನಲಾಗಿದೆ. ಕಳೆದ ಎರಡು ತಿಂಗಳಿಂದ ಪುಟ್ಟೇನಹಳ್ಳಿ ಪೊಲೀಸರು ಚೈನ್ ಸ್ನಾಚರ್ ಸಂತೋಷ್ ಹಿಂದೆ ಬಿದ್ದಿದ್ದರು. ಪುಟ್ಟೇನಹಳ್ಳಿ ಠಾಣೆಯಲ್ಲಿ ಎರಡು ಕಡೆ ಸರಗಳ್ಳತನ ಮಾಡಿದ್ದ ಸಂತೋಷ್ ನ ಹಿಡಿಯಲು ಪೊಲೀಸರು ಸುಮಾರು 300 ಕಿ.ಮೀ. ಸಿಸಿಟಿವಿ ಪರಿಶೀಲನೆ ನಡೆಸಿದ್ದರು.
ಸಿಸಿಟಿವಿಯಲ್ಲಿ ಕೊಟ್ಟ ಆರೋಪಿಯ ಸುಳಿವು
ಸಂತೋಷ್ ಕಳೆದ 4 ವರ್ಷದಿಂದ ಯಾರ ಕೈಗೂ ಸಿಕ್ಕಿರಲಿಲ್ಲ. ಪುಟ್ಟೇನಹಳ್ಳಿ ಪೊಲೀಸರು ಆರೋಪಿ ಸಂತೋಷ್ ಚಲನವಲನ ಬಗ್ಗೆ ಹದ್ದಿನ ಕಣ್ಣಿಟ್ಟು, ರಾತ್ರಿ ಹಗಲು ರೋಡ್ನಲ್ಲಿ ಕಾಯುತ್ತಿದ್ದ ಪುಟ್ಟೇನಹಳ್ಳಿ ಇನ್ಸ್ಪೆಕ್ಟರ್ ಮುನಿರೆಡ್ಡಿ, ಪಿಎಸ್ಐ ಪ್ರಸನ್ನ ಕುಮಾರ್ ,ರಮೇಶ್ ಹೂಗಾರ್,ಮನು ಹಾಗೂ ಸಿಬ್ಬಂದಿಗಳು ಹರಸಾಹಸ ಪಟ್ಟು ಆರೋಪಿ ಪತ್ತೆ ಮಾಡಿದ್ದಾರೆ. ಸಿಸಿಟಿವಿ ಕೊಟ್ಟ ಸುಳಿವಿನ ಮೇಲೆ ಆರೋಪಿ ಸಂತೋಷ್ ನ ಜಾಡು ಬೆನ್ನತ್ತಿ ಕೊನೆಗೂ ಯಶಸ್ವಿಯಾಗಿದ್ದಾರೆ. ಸಿಸಿಟಿವಿಯಲ್ಲಿ ಆರೋಪಿ ದೇಹದ ಮಾದರಿ, ಹೆಲ್ಮೆಟ್ ಹಾಗೂ ಬ್ಲೂ ಕಲರ್ ಶರ್ಟ್ ಸುಳಿವಿನ ಆಧಾರದ ಮೇಲೆ ಆರೋಪಿ ಬಂಧಿಸಿದ್ದಾರೆ.
51 ಪೊಲೀಸ್ ಠಾಣೆಗೆ ಬೇಕಾಗಿದ್ದ ಸಂತೋಷ
ಸರಗಳ್ಳತನ ಮಾಡುತ್ತಿದ್ದ ಸಂತೋಷ್ ಬಿಕಾಂ ಪದವೀಧರ. ಸಂತೋಷ್ ಇಂಟಿರಿಯರ್ ಕೆಲಸ ಮಾಡುತ್ತಿದ್ದ. ಇಂಟಿರಿಯರ್ ಕೆಲಸದಿಂದ ಬರುವ ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಕಳೆದ 4 ವರ್ಷದಿಂದ ಚೈನ್ ಸ್ನಾಚ್ ಅನ್ನೇ ವೃತ್ತಿಯಾಗಿಸಿಕೊಂಡಿದ್ದ. ರಾಜ್ಯದ 51 ಪೊಲೀಸ್ ಠಾಣೆಗೆ ಬೇಕಾಗಿದ್ದ ಸಂತೋಷ ಮೇಲೆ ಬೆಂಗಳೂರು ನಗರದ ಜೆ.ಪಿ.ನಗರ, ಪುಟ್ಟೇನಹಳ್ಳಿ, ಹೊಸಕೋಟೆ , ಜಯನಗರ , ಬನ್ನೇರಘಟ್ಟ , ಯಲಹಂಕ, ಕೊಡಗೇಹಳ್ಳಿ , ಅಮೃತಹಳ್ಳಿಯಲ್ಲಿ ಚೈನ್ ಸ್ನಾಚ್ ಮಾಡಿದ್ದ. ಸಂತೋಷ್ನ ಹಿಡಿಯಲು ಬೆಂಗಳೂರು ನಗರ, ಗ್ರಾಮಾಂತರ ಪೊಲೀಸರು ತಲೆ ಕೆಡೆಸಿಕೊಂಡಿದ್ದರು. ಸದ್ಯ ಪುಟ್ಟೇನಹಳ್ಳಿ ಪೊಲೀಸರು ಸಂತೋಷ್ ನನ್ನು ಬಂಧಿಸಲು ಯಶಸ್ವಿ ಆಗಿರುವುದರಿಂದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.