ಮೋದಿ ದೆಹಲಿ ತಲುಪುವುದರೊಳಗೆ ಕಿತ್ತುಹೋದ ರಸ್ತೆ: ಗುತ್ತಿಗೆದಾರನಿಗೆ 3 ಲಕ್ಷ ದಂಡ
ಬೆಂಗಳೂರು, ಜೂ. 25: ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಬೆಂಗಳೂರು ನಗರ ಭೇಟಿಗೆ ಮುನ್ನ ಕಳಪೆ ರಸ್ತೆ ಕಾಮಗಾರಿ ನಡೆಸಿದ್ದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮೂವರು ಎಂಜಿನಿಯರ್ಗಳ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿದ ನಂತರ ಪಾಲಿಕೆಯು ಗುತ್ತಿಗೆದಾರ ರಮೇಶ್ಗೆ 3 ಲಕ್ಷ ರೂಪಾಯಿ ದಂಡ ವಿಧಿಸಿದೆ ಎನ್ನಲಾಗಿದೆ.
ಪ್ರಧಾನಿ ಮೋದಿ ನಾಗರಭಾವಿಯಲ್ಲಿರುವ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಹೊಸ ಕಟ್ಟಡ ಉದ್ಘಾಟನೆ ಮಾಡಲು ಆಗಮಿಸಿದ್ದಾಗ ರಸ್ತೆ ದುರಸ್ತಿ ಮಾಡಲಾಗಿತ್ತು. ಆ ವೇಳೆ ಹಾಕಲಾದ ರಸ್ತೆಗಳು ಕಿತ್ತು ಹೋಗಿದ್ದವು. ಎಚ್ಎಂಟಿ ಲೇಔಟ್ನಲ್ಲಿ ದುರಸ್ತಿ ಕಾರ್ಯದಲ್ಲಿ ಮತ್ತೆ ರಸ್ತೆ ಹಾನಿಯಾಗಿತ್ತು. ಮತ್ತು ಮರಿಯಪ್ಪನಪಾಳ್ಯದಲ್ಲಿ ಒಂದು ವಾರದೊಳಗೆ ಗುಂಡಿ ಬಿದ್ದಿರುವುದು ಮಾಧ್ಯಮಗಳಲ್ಲಿ ವರದಿಯಾದ ನಂತರ ಬಿಬಿಎಂಪಿ ವಿರುದ್ಧ ಟೀಕೆ ವ್ಯಕ್ತವಾಗಿತ್ತು.
ಪ್ರಧಾನಿ ಸಂಚರಿಸಿದ ರಸ್ತೆಯೇ ಕಳಪೆ: ಟ್ವೀಟ್ ಮೂಲಕ ಎಚ್ಡಿಕೆ ಲೇವಡಿ
ಪ್ರಧಾನಿ ಕಚೇರಿ ರಾಜ್ಯ ಸರ್ಕಾರಕ್ಕೆ ಸೂಚನೆ
9 ಕಿ.ಮೀ ರಸ್ತೆ ಮಾಡಲು 11.50 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಹೇಳಲಾಗಿದ್ದು, ಕೆಲವೇ ದಿನಗಳಲ್ಲಿ ರಸ್ತೆ ಹಾಳಾಗಿದೆ. ಕಾಮಗಾರಿಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಪರಿಶೀಲಿಸಿ ಸರಿಪಡಿಸಲು ಕ್ರಮಕೈಗೊಳ್ಳುವಂತೆ ಪ್ರಧಾನಿ ಕಚೇರಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಎನ್ನಲಾಗಿದೆ. ಇದು ಮಾಧ್ಯಮಗಳಲ್ಲಿ ವರದಿಯಾದ ನಂತರ ಪ್ರಮುಖ ರಸ್ತೆಗಳ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರು ಮುಖ್ಯ ಎಂಜಿನಿಯರ್ ಎಂ.ಟಿ. ಬಾಲಾಜಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಜೆ. ರವಿ ಮತ್ತು ಆರ್ಆರ್ ನಗರ ಉಪ ವಿಭಾಗದ ಸಹಾಯಕ ಎಂಜಿನಿಯರ್ ಐ.ಕೆ. ವಿಶ್ವಾಸ್ ಅವರಿಗೆ ಶೋಕಾಸ್ ಕಳುಹಿಸಿದ್ದಾರೆ. ಇದೀಗ ಒತ್ತಡ ಹೆಚ್ಚಾದ ಕಾರಣ ಪಾಲಿಕೆ ಗುತ್ತಿಗೆದಾರ ರಮೇಶ್ಗೆ ದಂಡ ವಿಧಿಸಿದೆ.
ಮೋದಿ ನಿರ್ಗಮನದ ಬಳಿಕ ಕಿತ್ತುಹೋದ ರಸ್ತೆ; ವರದಿ ಕೇಳಿದ ಪ್ರಧಾನಿ ಕಚೇರಿ
ಗುತ್ತಿಗೆದಾರನಿಗೆ ದಂಡ ವಿಧಿಸಿದೆ
ರಸ್ತೆಗಳ ಜೊತೆಗೆ ನಮ್ಮ ಖ್ಯಾತಿಗೆ ಹಾನಿಯಾಗಿದೆ. ಆದ್ದರಿಂದ ಗುತ್ತಿಗೆದಾರನಿಗೆ ದಂಡ ವಿಧಿಸಲಾಗಿದೆ ಮತ್ತು ಅದನ್ನು ಸರಿಪಡಿಸಲು ಮಾತ್ರ ಕೇಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಬಿಬಿಎಂಪಿಯ ಈ ಕಳಪೆ ಕಾಮಗಾರಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಲಾಯಿತು.
ಡಾಂಬರು ಹಾಕಿದ ರಸ್ತೆಗಳು ಹಾಳು
ಪ್ರಧಾನಿ ಮೋದಿಯವರ ಭೇಟಿಯ ವೇಳೆ ಬಿಬಿಎಂಪಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಹಲವು ಪ್ರದೇಶಗಳಲ್ಲಿ ಡಾಂಬರು ಕಿತ್ತುಬಂದ ನಂತರ ಬಿಬಿಎಂಪಿಯನ್ನು ಹಲವು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಟೀಕಿಸಿದ್ದವು. ಹಲವೆಡೆ ಡಾಂಬರು ಹಾಕಿದ ರಸ್ತೆಗಳು ಹಾಳಾಗುತ್ತಿದ್ದು, ಕೆಲವೆಡೆ ರಸ್ತೆಗಳು ಗುಂಡಿ ಬಿದ್ದಿವೆ. ಪ್ರಧಾನಿ ಮೋದಿ ಭೇಟಿ ವೇಳೆ ದುರಸ್ತಿ ಮಾಡಲಾಗಿದ್ದ ರಸ್ತೆ ಹಾಳಾಗಿರುವ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವಿಟ್ಗಳನ್ನು ಮಾಡಿ ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಪ್ರಧಾನಿ ದೆಹಲಿಗೆ ಹೋದ ಬಳಿಕ ಕಿತ್ತು ಹೋದ ಡಾಂಬರು
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಹಾಗೂ ಬೆಂಗಳೂರಿನಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಟ್ಟಡ ಉದ್ಘಾಟನೆ ಹಿನ್ನೆಲೆ ಪ್ರಧಾನಿ ಮೋದಿ ನಗರಕ್ಕೆ ಬಂದಿದ್ದು, ಪ್ರಧಾನ ಮಂತ್ರಿ ಅವರು ಸಂಚರಿಸುವ ರಸ್ತೆಗಳನ್ನು 23 ಕೋಟಿ ಖರ್ಚು ಮಾಡಿ ದುರಸ್ತಿ ಮಾಡಲಾಗಿತ್ತು. ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಪ್ರಧಾನಿ ದೆಹಲಿಗೆ ಹೋದ ಬಳಿಕ ಡಾಂಬರು ಕಿತ್ತು ಹೋಗಿದೆ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದ್ದರು. ಪ್ರಧಾನಿಗಳಿಗಾಗಿ ಸಿದ್ಧಪಡಿಸಿದ್ದ ರಸ್ತೆಯೇ ಹಾಳಾಗಿದೆ. 40% ಕಮಿಷನ್ ಮತ್ತು ಕಳಪೆ ಕಾಮಗಾರಿಯ ಫಲಶ್ರುತಿ ಇದು. ದೇಶದ ಪ್ರಧಾನಿಯೇ ಸಂಚರಿಸಿದ ರಸ್ತೆಯೇ ಕಳಪೆ. ಬಿಜೆಪಿ ಅಭಿವೃದ್ಧೀ ಮಾದರಿ ಇದೇನಾ? ಐಟಿ ಸಿಟಿಯ ಸ್ಥಿತಿ ಅಯ್ಯೋ ಎನ್ನುವಂತಿದೆ ಎಂದು ಕುಮಾರಸ್ವಾಮಿ ಟ್ವಿಟ್ಟರ್ನಲ್ಲಿ ಟೀಕೆ ಮಾಡಿದ್ದರು.