ಬೆಳಗಾವಿಯಲ್ಲಿ ಠುಸ್ ಆದ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆ
ಬೆಳಗಾವಿ, ನವೆಂಬರ್.01: ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್ ಇಂದು ಗುರುವಾರ ಕರಾಳ ದಿನಾಚರಣೆ ಆಚರಿಸುತ್ತಿದೆ.
ಬೆಳಗಾವಿಯ ಸಂಭಾಜಿ ಉದ್ಯಾನವನದಲ್ಲಿ ಎಂಇಎಸ್ ಕಾರ್ಯಕರ್ತರು ಭಾಗವಹಿಸಿದ್ದು, ಮಾಜಿ ಶಾಸಕರಾದ ಸಂಭಾಜಿ ಪಾಟೀಲ್, ಮನೋಹರ ಕಿಣೇಕರ್ ನೇತೃತ್ವದಲ್ಲಿ ಕರಾಳ ದಿನಾಚರಣೆ ನಡೆಯುತ್ತಿದೆ.
ಸಂಭಾಜಿ ಉದ್ಯಾನವನದಿಂದ ಗೋವಾವೇಸ್ ವರೆಗೂ ಕರಾಳ ದಿನದ ಬೈಕ್ ರಾಲಿ ನಡೆದಿದ್ದು, ನಾಡದ್ರೋಹಿ ಎಂಇಎಸ್ ಗೆ ಪೋಲಿಸ್ ಇಲಾಖೆ ಷರತ್ತು ಬದ್ಧ ಅನುಮತಿ ನೀಡಿದೆ. ಕರ್ನಾಟಕ ಸರಕಾರ ವಿರೋಧಿ ಹಾಗೂ ಪ್ರಚೋದನಾತ್ಮಕ ಘೋಷಣೆಗಳು ಕೂಗದಂತೆ ಷರತ್ತು ಸಹ ವಿಧಿಸಿದೆ.

ಆದರೆ ನಾಡದ್ರೋಹಿ ಎಂಇಎಸ್ ನಡೆಸುತ್ತಿರುವ ಕರಾಳ ದಿನಾಚರಣೆಗೆ ಮರಾಠಿ ಭಾಷಿಕರ ಬೆಂಬಲ ಸಿಕ್ಕಿಲ್ಲ. ರಾಲಿಯಲ್ಲಿ ನೂರಾರು ಜನ ಮಾತ್ರ ಭಾಗಿಯಾಗಿದ್ದು, ನಾಡ ವಿರೋಧಿ ಘೋಷಣೆ ಕೂಗಿದ್ದಾರೆ.
ಅಷ್ಟೇ ಅಲ್ಲ, ನಿನ್ನೆ ರಾತ್ರಿ ಕೊಂಡಸಕೊಪ್ಪ ಗ್ರಾಮದ ಕನ್ನಡ ಶಾಲೆಯ ಮೇಲೆ ಕಪ್ಪು ಬಾವುಟ ಹಾರಿಸಿ ನಾಡದ್ರೋಹಿ ಎಂಇಎಸ್ ಎಂದಿನಂತೆ ತನ್ನ ಪುಂಡಾಟ ಮುಂದುವರೆಸಿದೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆ ತಿಳಿದು ಬಂದ ಕನ್ನಡ ಪರ ಕಾರ್ಯಕರ್ತ ಕಪ್ಪು ಬಾವುಟ ಕಿತ್ತೆಸೆದು, ನಂತರ ಪೊಲೀಸರು ರಾಷ್ಟ್ರ ಧ್ವಜ ಹಾರಿಸಿದ್ದಾರೆ.












Click it and Unblock the Notifications