ರಾಜ್ಯದಲ್ಲಿರುವ ಮೂರು ಡಿಸಿಎಂ ಹುದ್ದೆಗಳು ಅಸಂವಿಧಾನಿಕ!
ಬೆಳಗಾವಿ, ಡಿಸೆಂಬರ್ 28: ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಸದ್ಯ ಮೂರು ಉಪ ಮುಖ್ಯಮಂತ್ರಿಗಳಿದ್ದು, ಈ ಡಿಸಿಎಂ ಹುದ್ದೆಗಳು ಅಸಂವಿಧಾನಿಕ ಎಂದು ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಹೇಳಿದ್ದಾರೆ.
ಅಸಂವಿಧಾನಿಕ ಹುದ್ದೆ ಅಲಂಕರಿಸಿರುವ ಮೂವರು ಪ್ರಭಾವಿಗಳಿಗೆ ಸಂಕಷ್ಟ ಎದುರಾಗಿದ್ದು, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವಥ್ ನಾರಾಯಣ್ ಅವರು ಉಪ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಭೀಮಪ್ಪ ಗಡಾದ್ ತಿಳಿಸಿದ್ದಾರೆ.
ಬೆಳಗಾವಿ ಉಪಚುನಾವಣೆಗೆ ಸುರೇಶ್ ಅಂಗಡಿ ಮಗಳು ಸ್ಪರ್ಧೆ?
ರಾಜ್ಯದಲ್ಲಿರುವ ಮೂರು ಡಿಸಿಎಂ ಹುದ್ದೆ ರದ್ದುಗೊಳಿಸುವಂತೆ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹಿಸಿದ್ದು, ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಡಿಸಿಎಂ ಹುದ್ದೆ ರದ್ದುಗೊಳಿಸದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದು, ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಡಿಸಿಎಂ ಹುದ್ದೆಗಳ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬಳಿ ಹಾಗೂ ಸಂಸದೀಯ ವ್ಯವಹಾರ, ಶಾಸನ ರಚನಾ ಶಾಖೆ ಮತ್ತು ಕಾನೂನು ಇಲಾಖೆ ಬಳಿಯೂ ಮಾಹಿತಿ ಇಲ್ಲ ಎಂದು ತಿಳಿಸಿದರು.
ಡಿಸಿಎಂ ಹುದ್ದೆಯ ಬಗ್ಗೆ ಸರ್ಕಾರ ಬಳಿ ಮಾಹಿತಿ ಇಲ್ಲದಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ. ತಕ್ಷಣವೇ ರಾಜ್ಯದಲ್ಲಿರುವ ಮೂರು ಡಿಸಿಎಂ ಹುದ್ದೆಗಳನ್ನು ರದ್ದುಪಡಿಸಬೇಕು, ಸಾರ್ವಜನಿಕ ತೆರಿಗೆ ಹಣ ಪೋಲಾಗುವುದನ್ನು ತಡೆಯಬೇಕು, ಇಲ್ಲದಿದ್ದರೆ ಕಾನೂನು ಹೋರಾಟ ಅನಿವಾರ್ಯ ಎಂದು ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಎಚ್ಚರಿಕೆ ನೀಡಿದ್ದಾರೆ.