ಉತ್ತರ ಪ್ರದೇಶದಲ್ಲಿ ಅರಾಜಕತೆ; ಯೋಗಿ ವಿರುದ್ಧ ಸಿದ್ದು ವಾಗ್ದಾಳಿ
ಬೆಳಗಾವಿ, ಅಕ್ಟೋಬರ್ 2: ಉತ್ತರ ಪ್ರದೇಶದಲ್ಲಿ ಕಾನೂನೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯುಪಿ ಸಿಎಂ ಯೋಗಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ವಾಗ್ದಾಳಿ ನಡೆಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಯೋಗಿ ಆದಿತ್ಯನಾಥ ಸರ್ಕಾರ ಕಾನೂನು ಸುವ್ಯವಸ್ಥೆ ಹಾಳು ಮಾಡಿದೆ. ಪೊಲೀಸರು ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ. ರಾಹುಲ್ ಗಾಂಧಿ ಏನು ತಪ್ಪು ಮಾಡಿದರು? ಇದಕ್ಮೆ ಪ್ರಜಾಪ್ರಭುತ್ವ ಎಂದು ಕರೀಬೇಕಾ? ಯುಪಿಯಲ್ಲಿ ಅರಾಜಕತೆ ವಾತಾವರಣ ನಿರ್ಮಾಣವಾಗಿದೆ" ಎಂದರು.
ದೇಶ ಬಿಜೆಪಿ, ಯೋಗಿ ಅವರ ಆಸ್ತಿ ಅಲ್ಲ. ಯೋಗಿ ಆದಿತ್ಯನಾಥ ಸೂಚನೆಯಂತೆ ರಾಹುಲ್ ಗಾಂಧಿಯನ್ನು ತಡೆದಿದ್ದಾರೆ. ಹೀಗಾಗಿ ಯೋಗಿ ಆದಿತ್ಯ ನಾಥ ಸಿಎಂ ಆಗಿ ಮುಂದುವರೆಯಲು ಅರ್ಹರಲ್ಲ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಿದ್ದರೆ ಅಧಿಕಾರದಲ್ಲಿ ಏಕೆ ಇರಬೇಕು. ಅಧಿಕಾರದಲ್ಲಿ ಇರಲು ಯೋಗಿ ಆದಿತ್ಯನಾಥ ನಾಲಾಯಕ್ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪನವರು ಚೆಕ್ ಮೂಲಕ ಲಂಚ ಪಡೆದರೆ, ಅವರ ಮೊಮ್ಮಗ ಆರ್ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ. ಕೊರೊನಾ ಇರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಲು ಆಗುತ್ತಿಲ್ಲ. ಸಿದ್ದರಾಮಯ್ಯ ಬ್ರಿಟಿಷರಿಗಿಂತ ಕಡೆಯಾಗಿ ಅಧಿಕಾರ ಚಲಾಯಿಸಿದರು ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, "ನಳಿನ್ ಕುಮಾರ್ ಕಟೀಲ್ ಗೆ ಪಾಪ ಏನೂ ಗೊತ್ತಿಲ್ಲ. ನನ್ನ ಕಾಲದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿರಲಿಲ್ಲ. ಅಭಿವೃದ್ಧಿ ಕೆಲಸಕ್ಕೆ ದುಡ್ಡು ಇರಲಿಲ್ಲ ಅಂತ ನಾನು ಎಂದೂ ಹೇಳಿರಲಿಲ್ಲ" ಎಂದು ಸರ್ಕಾರದ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications