ಲಕ್ಷ್ಮೀ ಕಾಲಿಗೆ ಬಿದ್ದು ರಮೇಶ್ ಜಾರಕಿಹೊಳಿ ಮಂತ್ರಿಯಾಗಿದ್ರಾ?
Recommended Video
ಬೆಳಗಾವಿ, ನವೆಂಬರ್ 18: ಉಪ ಚುನಾವಣೆ ಕದನ ಆರಂಭವಾಗಿದೆ. ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಬ್ರದರ್ಸ್ ನಡುವೆ ಹಣಾಹಣಿ ಆರಂಭವಾಗಿದೆ. ಅದರ ಜೊತೆಯಲ್ಲೇ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ಮೈತ್ರಿ ಸರ್ಕಾರದ ಪತನದ ರಹಸ್ಯ ಬಿಚ್ಚಿಟ್ಟ ಅನಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಅವರ ಸಹೋದರ ಸತೀಶ್ ಜಾರಕಿಹೊಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾಲಿಗೆ ಬಿದ್ದು ರಮೇಶ್ ಮಂತ್ರಿಯಾಗಿದ್ದ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಜಾರಕಿಹೊಳಿ ಸಹೋದರರ ನಡುವಿನ ವಾಕ್ಸಮರದ ಬೆಂಕಿಗೆ ಮತ್ತಷ್ಟು ಕಿಡಿ ಹೊತ್ತಿಸಿದಂತಾಗಿದೆ.

ಲಕ್ಷ್ಮೀ ಹೆಬ್ಬಾಳ್ಕರ್ ಮೇಲಿನ ಆರೋಪ ನಿರಾಕರಣೆ
ಬೆಳಗಾವಿಯ ಗೋಕಾಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಲಕ್ಷ್ಮೀ ಪವರ್ಫುಲ್ ನಾಯಕಿ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಬ್ಬರು ಪವರ್ಫುಲ್ ನಾಯಕಿ. ಅವರ ಕೈಕಾಲುಗಳಿಗೆ ಬಿದ್ದು ರಮೇಶ್ ಜಾರಕಿಹೊಳಿ ಮಂತ್ರಿಯಾಗಿದ್ದ. ಇಲ್ಲ ಎಂದು ಬಹಿರಂಗವಾಗಿ ಹೇಳಲಿ ನೋಡೋಣ. ರಮೇಶ್ ಮಂತ್ರಿ ಮಾಡಿದ್ದು ಹೇಗೆ ಎಂದು ಉಪ ಚುನಾವಣೆಯ ಪ್ರಚಾರದಲ್ಲಿ ಸಚಿವ ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಾಡಲು ಲಾಬಿ ಮಾಡಿದ್ದೇ ರಮೇಶ್, ಆಗ ಅಮರಿಕದಲ್ಲಿ ಕುಳಿತಿದ್ದ ರಮೇಶ್ ಅಲ್ಲಿಂದಲೇ ಹೆಬ್ಬಾಳ್ಕರ್ ಹೆಸರು ಶಿಫಾರಸ್ಸು ಮಾಡಿದ್ದ. ಅವರ ಮಧ್ಯೆ ಈಗ ಜಗಳ ಬಂದಿದ್ದರಿಂದ ವಿಷಯವನ್ನು ತಿರುಚಿ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ರಮೇಶ್ರನ್ನು ಸಚಿವರನ್ನಾಗಿ ಮಾಡಿದ್ದೇ ಲಕ್ಷ್ಮೀ ಹೆಬ್ಬಾಳ್ಕರ್
ರಮೇಶ್ ಅವರನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಾನು ವಿರೋಧಿಸುತ್ತಿದ್ದೆ, ಹುಚ್ಚನನ್ನು ಮಂತ್ರಿ ಮಾಡಿದರು ಅಂತ ಜಗಳವಿತ್ತು ಅಷ್ಟೇ , ಅದನ್ನು ಬಿಟ್ಟರೆ ಲಕ್ಷ್ಮೀ, ಡಿಕೆ ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಜಗಳವಿಲ್ಲ ಎಂದು ಸ್ಪಷ್ಟಪಡಿಸಿದರು.

ರಮೇಶ್ ಕೂಡಾ ಬ್ಯಾಗ್ ಹಿಡಿದಿದ್ದಾರೆ
ಇದೇ ವೇಳೆ ಕಾಂಗ್ರೆಸ್ನಲ್ಲಿ ಲೀಡರ್ ಆಗಬೇಕಾದರೆ ಬ್ಯಾಗ್ ಹಿಡಿಯಬೇಕು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೂ ಟಾಂಗ್ ನೀಡಿರುವ ಸತೀಶ್, ಎರಡು ವರ್ಷ ರಮೇಶ್ ಜಾರಕೊಹೊಳಿ ಸಹ ಕೈಚೀಲ ಹಿಡಿದಿದ್ದಾರೆ ಎಂದರು. ಆತ ಶಂಕರಾನಂದ್ ಕೈಚೀಲ ಹಿಡಿದುಕೊಂಡು ಓಡಾಡಿದ್ದ ಎಂದು ಹೇಳಿದ್ದಾರೆ.












Click it and Unblock the Notifications