ರಸ್ತೆ ಅಭಿವೃದ್ಧಿಪಡಿಸಿ ಎಂದು ಕೆಸರಿನಲ್ಲಿ ದಂಡ ನಮಸ್ಕಾರ ಹಾಕಿದ ಮೇಟ್ಯಾಲ್ ಗ್ರಾಮಸ್ಥರು
ಬೆಳಗಾವಿ, ಆಗಸ್ಟ್.12: ರಸ್ತೆ ಅಭಿವೃದ್ಧಿ ಮಾಡಿ ಎಂದು ಪದೇ ಪದೆ ಒತ್ತಾಯಿಸಿದರೂ ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳದಿರುವುದಕ್ಕೆ ಗ್ರಾಮಸ್ಥರು ಕೆಸರಿನಲ್ಲಿ ದಂಡ ನಮಸ್ಕಾರ ಹಾಕಿ ದೇವಿಗೆ ಪ್ರಾರ್ಥನೆಯನ್ನೂ ಸಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸರ್ಕಾರ ಪ್ರತಿ ವರ್ಷ ರಸ್ತೆ ಅಭಿವೃದ್ಧಿಗೆಂದು ಗ್ರಾಮ ಪಂಚಾಯತ್ ಗಳಿಗೆ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಈ ಗ್ರಾಮದಲ್ಲಿ ಕಳೆದ 10 ವರ್ಷದಿಂದ ರಸ್ತೆ ಅಭಿವೃದ್ಧಿ ಒಂದು ಕಡೆ ಇರಲಿ, ರಸ್ತೆನೇ ಆಗಿಲ್ಲ.
ಇದರಿಂದ ಬೇಸತ್ತ ಜನ ಗ್ರಾಮದ ರಸ್ತೆ ಅಭಿವೃದ್ಧಿ ಮಾಡಿ ಎಂದು ಕೆಸರಿನಲ್ಲಿ ದಂಡ ನಮಸ್ಕಾರ ಹಾಕಿ ದೇವರ ಮೊರೆ ಹೋಗಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಮೇಟ್ಯಾಲ್ ಗ್ರಾಮದಲ್ಲಿ ನಡೆದಿದೆ.

ಕೆಸರನ್ನೂ ಲೆಕ್ಕಿಸದೆ ನಮ್ಮ ಗ್ರಾಮದ ರಸ್ತೆ ಅಭಿವೃದ್ಧಿ ಆಗಲಿ ಎಂದು ದಂಡ ನಮಸ್ಕಾರ ಹಾಕಿ, ದೇವರಲ್ಲಿ ಪ್ರಾರ್ಥಿಸಿದ್ದಾರೆ. ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ, ಶಾಸಕರಿಗೆ ಕಳೆದ 10 ವರ್ಷಗಳಿಂದ ಹೇಳಿದರೂ ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.
ಪ್ರತಿ ವರ್ಷ ಮಳೆಗಾಲ ಬಂದರೆ ಸಾಕು, ಇಲ್ಲಿ ಸರ್ಕಸ್ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತುರಕರ ಶಿಗಿಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಬರುವ ಮೇಟ್ಯಾಲ್ ಗ್ರಾಮ ಇದುವರೆಗೂ ಅಭಿವೃದ್ಧಿ ಕಂಡಿಲ್ಲ ಎಂದು ಗ್ರಾಮಸ್ಥರು ಅಪಾದಿಸಿದ್ದಾರೆ.
ಇದರಿಂದ ಬೇಸತ್ತ ಜನ ರುಕ್ಮಿಣಿ ದೇವತೆಗೆ ದಂಡ ನಮಸ್ಕಾರ ಹಾಕಿ " ರಸ್ತೆ ಅಭಿವೃದ್ಧಿ ಮಾಡಲು ಜನಪ್ರತಿನಿಧಿಗಳಿಗೆ ಬುದ್ಧಿ ಕೊಡು" ಎಂದು ದೇವರ ಮೊರೆ ಹೋಗಿದ್ದಾರೆ.












Click it and Unblock the Notifications