ನರೇಂದ್ರ ಮೋದಿ ಸರ್ಕಾರದಿಂದ ಜನವಿರೋಧಿ ಕಾಯಿದೆ ಜಾರಿಗೆ
ಬೆಳಗಾವಿ, ಡಿಸೆಂಬರ್ 19: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜನರ ವಿಶ್ವಾಸ ಕಳೆದುಕೊಳ್ಳಲಿದ್ದಾರೆ, ಜಾರಿಗೆ ತರುವ ಮುನ್ನ ಜನರ ವಿಶ್ವಾಸ ತೆಗೆದುಕೊಳ್ಳಬೇಕೆಂದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ದೇಶದ ಪರಿಸ್ಥಿತಿ ಗಮನಿಸಿದರೆ ಇಬ್ಭಾಗ ಮಾಡುವತ್ತ ಹುನ್ನಾರ ನಡೀತಿದೆ ಎಂದು ಆರೋಪಿಸಿದರು.
ರಾಷ್ಟ್ರದಲ್ಲಿ ಪೌರತ್ವದ ಕಿಚ್ಚು ಹತ್ತಿಸುವ ಮೂಲಕ ಅದರ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ, ಇದು ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಗೆ ಗೌರವ ತರುವ ವಿಷಯವಲ್ಲ. ಹಿಂದೂ-ಮುಸ್ಲಿಂ ಮಧ್ಯೆ ಕಂದಕ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ದ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಸರ್ಕಾರ ಸದ್ಯದರಲ್ಲಿಯೇ ಪತನವಾಗಲಿದೆ ಎಂಬ ಸುಳಿವು ನೀಡಿದರು. ಈ ಸರ್ಕಾರ ಅನೈತಿಕೆಯಿಂದ ಜನಿಸಿದೆ, ಒಂದು ಪಕ್ಷದ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ಹರಿಹಾಯ್ದರು.
ಅನರ್ಹ ಶಾಸಕರ ಕೇಸ್ ಸುಪ್ರೀಂ ಕೋರ್ಟ್ ನಲ್ಲಿದ್ದಾಗ, ನಮಗೂ ಅವರಿಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದರು. ಸುಪ್ರೀಂ ತೀರ್ಪು ಬಂದ ನಂತರ ಪಕ್ಷಕ್ಕೆ ಸೇರಿಸಿಕೊಂಡು ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿದರು, ಇದು ಅನೈತಿಕವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಕೆಲವೇ ದಿನಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕಚ್ಚಾಟ ನಡೆಸಲಿದೆ, ಯಡಿಯೂರಪ್ಪ ಸರ್ಕಾರ ಒಳ್ಳೆಯ ಆಡಳಿತ ನೀಡುವುದಿಲ್ಲವೆಂದರು. ಬಿಜೆಪಿ ಸರ್ಕಾರ ಕೆಡವಲು ಕೆ.ಎಸ್.ಈಶ್ವರಪ್ಪ, ಎಂ.ಪಿ.ರೇಣುಕಾಚಾರ್ಯ ರಂಥವರು ಸಾಕು ಎಂದರು.
ರೇಣುಕಾಚಾರ್ಯ ಇತ್ತೀಚಿಗೆ ಡಿಸಿಎಂ ಹುದ್ದೆಗಳು ಬೇಡ ಹೇಳಿಕೆಯನ್ನು ತಾನಾಗಿಯೇ ಹೇಳಿದ್ದಾನೋ ಅಥವಾ ಯಾರಾದರೂ ದೊಡ್ಡ ನಾಯಕರು ಹೇಳಿಸಿದ್ದಾರೋ ಗೊತ್ತಿಲ್ಲ ಎಂದು ಬಿಎಸ್ ವೈ ಸರ್ಕಾರದ ವಿರುದ್ದ ಆರ್.ಬಿ.ತಿಮ್ಮಾಪುರ ಕುಟುಕಿದರು.












Click it and Unblock the Notifications