ಸಂಭಾಜೀ ಪಾಟೀಲ್ ವಿರುದ್ಧ ದೂರು ದಾಖಲು
ಬೆಳಗಾವಿ, ಡಿ. 5 : "ಎಂಇಎಸ್ ನಲ್ಲಿ ನಾಲ್ವರು ಶಾಸಕರಿದ್ದರೆ ಕರ್ನಾಕಟದ ಶವಯಾತ್ರೆ ಮಾಡುತ್ತಿದ್ದೆ" ಎಂದು ಹೇಳಿದ್ದ ಶಾಸಕ ಸಂಭಾಜಿ ಪಾಟೀಲ್ ಅವರ ವಿರುದ್ಧ ಕಾನೂನು ಹೋರಾಟ ಆರಂಭವಾಗಿದೆ. ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಪಾಟೀಲ್ ವಿರುದ್ಧ ದೂರು ದಾಖಲಾಗಿದ್ದು, ಸಂಭಾಜಿ ಪಾಟೀಲ್ ಅವರಿಗೆ ಹೊಸ ಸಂಕಷ್ಟ ಆರಂಭವಾಗಿದೆ.
ಬುಧವಾರ ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ವಿರುದ್ಧ ಐವರು ನ್ಯಾಯವಾದಿಗಳು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಭೇದ ಹುಟ್ಟಿಸಿ ಶಾಂತಿಭಂಗಕ್ಕೆ ಶಾಸಕರು ಪ್ರಯತ್ನಿಸಿದ್ದಾರೆ ಎಂದು ವಕೀಲರು ದೂರಿನಲ್ಲಿ ಹೇಳಿದ್ದಾರೆ. (ಕರ್ನಾಟಕದ ಶವಯಾತ್ರೆ ಮಾಡುತ್ತೇನೆ)

ವಕೀಲರಾದ ಸಂಜಯ ಪಾಟೀಲ, ದಿಲೀಪ ಘಸ್ತಿ, ಇರ್ಫಾನ್ ಅತ್ತಾರ, ಶಿವಾನಂದ ಮತ್ತು ಸಂಗಪ್ಪ ಗಿರೆಪ್ಪಗೋಳ ದೂರು ಸಲ್ಲಿಸಿದ್ದು, ಸಂಭಾಜಿ ಪಾಟೀಲ್ ಹೇಳಿಕೆ ಐಪಿಸಿ ಸೆಕ್ಷನ್ 124ಎ ಮತ್ತು 153ಎ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. (ಬುಧವಾರದಿಂದ ಸಂಭಾಜಿ ಪಾಟೀಲ್ ಶವಯಾತ್ರೆ!)
ಬೆಂಗಳೂರಿನಲ್ಲೂ ದೂರು : ಶಾಸಕ ಸಂಭಾಜಿ ಪಾಟೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಂಗೂರಿನಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಹಾವೇರಿಯಲ್ಲಿ ವಾಟಾಳ್ ನಾಗರಾಜ್ ಬಂಧನ)
ಚುನಾಯಿತ ಪ್ರತಿನಿಧಿಯಾದ ಸಂಭಾಜಿ ಪಾಟೀಲ್, ಸಂವಿಧಾನದ ಆಶಯಕ್ಕೆ ಹಾಗೂ ವಿಧಾನಸಭೆಯ ನಡಾವಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕನ್ನಡ ನಾಡು ಮತ್ತು ನುಡಿಯನ್ನು ಅವಮಾನಿಸುವ ಮೂಲಕ ಕನ್ನಡ ನಾಡಿಗೆ ದ್ರೋಹ ಎಸಗಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಲಾಗಿದೆ. ಪಾಟೀಲ್ ವಿರುದ್ಧ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಸೇನೆ ಸಿದ್ಧತೆ ನಡೆಸಿದೆ.
ನ.25ರ ಸೋಮವಾರ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಯೋಜಿಸಿದ್ದ ಮಹಾಮೇಳವ ಸಮ್ಮೇಳನದಲ್ಲಿ ಶಾಸಕ ಸಂಭಾಜಿ ಪಾಟೀಲ್ "ಕರ್ನಾಟಕ ವಿಧಾನಸಭೆಯಲ್ಲಿ ನಾಲ್ಕು ಎಂಇಎಸ್ ಶಾಸಕರಿದ್ದರೆ, ಇಂದು ಕರ್ನಾಟಕದ ಶವಯಾತ್ರೆ ಮಾಡುತ್ತಿದ್ದೆವು. ಮರಾಠರ ಶಕ್ತಿ ಏನೆಂದು ತೋರಿಸುತ್ತಿದ್ದೆವು" ಎಂದು ಹೇಳಿಕೆ ನೀಡಿದ್ದರು.












Click it and Unblock the Notifications