ನಿಮಗೆ ಹತ್ತು ಸಾವಿರ ರೂ ಪರಿಹಾರ ಕೊಟ್ಟಿದ್ದೇ ಹೆಚ್ಚು: ಈಶ್ವರಪ್ಪ
ಚಿಕ್ಕೋಡಿ, ಸೆಪ್ಟೆಂಬರ್ 7: 'ನಿಮಗೆ ಹತ್ತು ಸಾವಿರ ರೂ. ಪರಿಹಾರ ಕೊಟ್ಟಿದ್ದೇ ಹೆಚ್ಚು' ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆಎಸ್ ಈಶ್ವರಪ್ಪ ಅವರು ಪ್ರವಾಹ ಸಂತ್ರಸ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ, ಅವರು ಚಿಕ್ಕೋಡಿಯ ಯಡೂರು ಗ್ರಾಮದಲ್ಲಿ ಜನರು ಹೆಚ್ಚುವರಿ ಪರಿಹಾರ ಕೇಳಿದ್ದಕ್ಕೆ ಈ ರೀತಿ ಉದ್ದಟತನದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈಶ್ವರಪ್ಪ ಅವರಿದ್ದ ಕಾರ್ಗೆ ಮುತ್ತಿಗೆ ಹಾಕಿದ ಜನರು ಹೆಚ್ಚುವರಿ ಪರಿಹಾರಕ್ಕೆ ಮನವಿ ಸಲ್ಲಿಸಿದರು. ಆಗ ಈಶ್ವರಪ್ಪ ಅವರು ಉಡಾಫೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಈಶ್ವರಪ್ಪ ಅವರು ತಾವು ಈ ರೀತಿ ಹೇಳಿಕೆ ನೀಡಿಲ್ಲ ಎಂದು ಆರೋಪಗಳನ್ನು ತಳ್ಳಿಹಾಕಿದ್ದಾರೆ. ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಎಲ್ಲ ಹಳ್ಳಿಗಳಿಗೂ ರಾಜ್ಯ ಸರ್ಕಾರದಿಂದ ತಾತ್ಕಾಲಿಕ ಪರಿಹಾರವಾಗಿ 10 ಸಾವಿರ ರೂ. ನೀಡಲಾಗಿದೆ. ಈ ಬಗ್ಗೆ ಸಂತ್ರಸ್ತರು ಸಂತಸ ಪಡುತ್ತಿದ್ದಾರೆ. ಹಗಲು ರಾತ್ರಿ ಶ್ರಮಪಟ್ಟು ಅಧಿಕಾರಿಗಳು ಜನರಿಗೆ ಊಟ ಮತ್ತು ವಸತಿ ಕಲ್ಪಿಸುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಕಾಂಗ್ರೆಸ್ ಪ್ರಾಬಲ್ಯ ಇರುವ ಒಂದು ಗ್ರಾಮದಲ್ಲಿ ಮಾತ್ರ ಆ ಪಕ್ಷದ ಕೆಲವು ಬಂದು ರಾಜಕೀಯ ಪ್ರೇರಿತವಾಗಿ ಮಾತುಗಳನ್ನು ಆಡಿ ಕೂಗಾಟ ನಡೆಸಿದ್ದಾರೆ. ಈಗ ಹತ್ತು ಸಾವಿರ ಪರಿಹಾರ ನೀಡಿದ್ದೇವೆ. ಅವರಿಗೆ ಶೀಘ್ರವೇ ಶೆಡ್ ನಿರ್ಮಿಸಿಕೊಡಲಾಗುವುದು. ಅದಕ್ಕಾಗಿ ಕೂಡಲೇ ಐದು ಸಾವಿರ ರೂ. ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದೇವೆ. ಕೆಲವು ಕಡೆ ಜನರು ನಾವೇ ಶೆಡ್ಗಳನ್ನು ನಿರ್ಮಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಎಂಬುದಾಗಿ ಈಶ್ವರಪ್ಪ ಸ್ಪಷ್ಟೀಕರಣ ನೀಡಿದ್ದಾರೆ.
ಯಾವುದೇ ದಾಖಲಾತಿ ಕೇಳದೆಯೇ ಹತ್ತು ಸಾವಿರ ರೂಪಾಯಿ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಮನೆಗಳು ಕುಸಿದಿರುವ ಬಗ್ಗೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಸಂಪೂರ್ಣ ಸಮೀಕ್ಷೆ ನಡೆದ ತಕ್ಷಣವೇ ಶಾಶ್ವತ ಪರಿಹಾರವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications