ಬೆಳಗಾವಿ ಉಪ ಚುನಾವಣೆ; ಜೆಡಿಎಸ್ ತೊರೆದ ನಾಯಕ!
ಬೆಳಗಾವಿ, ಮಾರ್ಚ್ 29: ಬೆಳಗಾವಿ ಲೋಕಸಭೆ ಉಪ ಚುನಾವಣೆ ಹೊಸ್ತಿಲಲ್ಲಿಯೇ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಪಕ್ಷದ ನಾಯಕರೊಬ್ಬರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ.
ಜೆಡಿಎಸ್ ನಾಯಕ ಹಾಗೂ ಲಿಂಗಾಯತ ಸಮುದಾಯದ ಮುಖಂಡ ಅಶೋಕ ಪೂಜಾರಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಸೋಮವಾರ ಬೆಳಗಾವಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ಈ ಘೋಷಣೆಯಾಗಿದೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆ: ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಶೋಕ ಪೂಜಾರಿಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದರು. ಬೆಳಗಾವಿಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನವನ್ನು ಅಶೋಕ ಪೂಜಾರಿ ಪ್ರಕಟಿಸಿದ್ದಾರೆ.
ಉಪ ಚುನಾವಣೆ ಘೋಷಣೆ; ಬೆಳಗಾವಿ ಜಿಲ್ಲಾಧಿಕಾರಿ ವರ್ಗಾವಣೆ
ಏಪ್ರಿಲ್ 17ರಂದು ಬೆಳಗಾವಿ ಲೋಕಸಭೆ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗಿದ್ದು, ಇಂದು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ.
ಬೆಳಗಾವಿ ಉಪ ಚುನಾವಣೆ; ಕಣದಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ!
ಅಶೋಕ ಪೂಜಾರಿ ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿ ಅಶೋಕ ಪೂಜಾರಿ, "ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಅಶೋಕ ಪಟ್ಟಣ ಮುಂತಾದ ನಾಯಕರು ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಭಾನುವಾರ ಹಿತೈಷಿಗಳ ಸಭೆ ನಡೆಸಿದೆ. ಗೋಕಾಕ್ ವ್ಯವಸ್ಥೆ ಬದಲಾವಣೆಗೆ ಕಾಂಗ್ರೆಸ್ ಸೇರಿ ಎಂದು ಅವರು ಬೆಂಬಲ ನೀಡಿದ್ದಾರೆ. ಏಪ್ರಿಲ್ 2ರ ಬಳಿಕ ಪಕ್ಷ ಸೇರಲಿದ್ದೇನೆ" ಎಂದರು.
4 ಬಾರಿ ಸೋತಿದ್ದಾರೆ
ಅಶೋಕ ಪೂಜಾರಿ ಅವರು ಗೋಕಾಕ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಸೋಲು ಕಂಡಿದ್ದಾರೆ. 2008 ಮತ್ತು 2013ರಲ್ಲಿ ಜೆಡಿಎಸ್, 2018ರಲ್ಲಿ ಬಿಜೆಪಿ, 2019ರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದರು.
ರಮೇಶ್ ಜಾರಕಿಹೊಳಿ ವಿರುದ್ಧ ಸೋಲು
2018ರ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಶೋಕ ಪೂಜಾರಿ 75,969 ಮತಗಳನ್ನು ಪಡೆದು ರಮೇಶ್ ಜಾರಕಿಹೊಳಿ ವಿರುದ್ಧ ಸೋಲು ಕಂಡಿದ್ದರು. 90,249 ಮತ ಪಡೆದು ರಮೇಶ್ ಜಾರಕಿಹೊಳಿ ಗೆಲುವು ಕಂಡಿದ್ದರು.
ಉಪ ಚುನಾವಣೆಗೆ ಸ್ಪರ್ಧೆ ಇಲ್ಲ
ಏಪ್ರಿಲ್ 17ರಂದು ನಡೆಯುವ ಬೆಳಗಾವಿ ಉಪ ಚುನಾವಣೆಗೆ ಬಿಜೆಪಿಯಿಂದ ಮಂಗಲ ಸುರೇಶ್ ಅಂಗಡಿ, ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಅಭ್ಯರ್ಥಿಗಳು. ಜೆಡಿಎಸ್ ಉಪ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ.