ರಮೇಶ್ ಜಾರಕಿಹೊಳಿ ಅಸಮಾಧಾನ : ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 25 : 'ಸಂಪುಟ ಪುನರ್ ರಚನೆ ಬಳಿಕ ಅಸಮಾಧಾನ ಸಹಜ. ಯಾರೂ ಸಹ ರಾಜೀನಾಮೆ ನೀಡುವುದಿಲ್ಲ. ರಮೇಶ್ ಜಾರಕಿಹೊಳಿ ಜೊತೆ ನಾನು ಚರ್ಚೆ ಮಾಡುತ್ತೇನೆ' ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಮಂಗಳವಾರ ಸತೀಶ್ ಜಾರಕಿಹೊಳಿ ಭೇಟಿ ನೀಡಿದರು. ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಬಸವೇಶ್ವರ ಪ್ರತಿಮೆಗೆ ಅವರು ಮಾಲಾರ್ಪಣೆ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, 'ಪಕ್ಷದ ವರಿಷ್ಠರು ಸಹ ರಮೇಶ್ ಜಾರಕಿಹೊಳಿ ಅವರ ಜೊತೆ ಮಾತನಾಡಲಿದ್ದಾರೆ. ಬಿಜೆಪಿಯವರು ಹೇಳಿದ ಮಾತ್ರಕ್ಕೆ ಸರ್ಕಾರ ಬೀಳುವುದಿಲ್ಲ' ಎಂದರು.

'ರಮೇಶ್ ಜಾರಕಿಹೊಳಿ ಅವರು ಇನ್ನು ಸಂಪರ್ಕಕ್ಕೆ ಸಿಕ್ಕಿಲ್ಲ. ನಾನು ಅವರ ಜೊತೆ ಮಾತನಾಡುತ್ತೇನೆ. ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಸಮಸ್ಯೆ, ಸವಾಲು ಇದೆ. ಹಂತ-ಹಂತವಾಗಿ ಅವುಗಳನ್ನು ಪರಿಹಾರ ಮಾಡಲಾಗುತ್ತದೆ' ಎಂದು ಹೇಳಿದರು.
'ಬೆಳಗಾವಿ ನಗರದ ಅಭಿವೃದ್ಧಿ ಬಗ್ಗೆ ಜನರು ನಿರೀಕ್ಷೆ ಹೊಂದಿದ್ದಾರೆ. ರಾಜಕೀಯ ಸಮಸ್ಯೆ ಬಗ್ಗೆ ಮುಖಂಡರ ಜೊತೆಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಖಾತೆ ಹಂಚಿಕೆ ಬಗ್ಗೆ ಬುಧವಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸಲು ಸಿದ್ಧ' ಎಂದು ಸತೀಶ್ ಜಾರಕಿಹೊಳಿ ಹೇಳಿದರು.












Click it and Unblock the Notifications