ಕಾಗವಾಡ ಉಪ ಚುನಾವಣೆ; ಹೊಸ ಬಾಂಬ್ ಸಿಡಿಸಿದ ರಾಜು ಕಾಗೆ
ಬೆಳಗಾವಿ, ಅಕ್ಟೋಬರ್ 29 : ಕಾಗವಾಡ ಕ್ಷೇತ್ರದ ಉಪ ಚುನಾವಣೆ ವಿಚಾರದಲ್ಲಿ ಬಿಜೆಪಿಗೆ ದೊಡ್ಡ ಸಂಕಟ ಎದುರಾಗಿದೆ. ಬಿಜೆಪಿ ಟಿಕೆಟ್ಗಾಗಿ ಇಬ್ಬರು ಪಟ್ಟು ಹಿಡಿದು ಕೂತಿದ್ದು, ಪಕ್ಷಕ್ಕೆ ಬಂಡಾಯದ ಭೀತಿ ಎದುರಾಗಿದೆ.
ಕಾಗವಾಡ ಕ್ಷೇತ್ರದ ಶಾಸಕರಾಗಿದ್ದ ಶ್ರೀಮಂತ ಪಾಟೀಲ ಅನರ್ಹರಾಗಿದ್ದಾರೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಸಲು ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಆದರೆ, ಟಿಕೆಟ್ ಹಂಚಿಕೆ ವಿಚಾರ ಇಕ್ಕಟ್ಟಿಗೆ ಸಿಲುಕಿದೆ.
"ಉಪ ಚುನಾವಣೆಯಲ್ಲಿ ನಾನು ಕಣಕ್ಕಿಳಿಯುವುದು ಖಚಿತ. ಅದು ಅಥಣಿಯಲ್ಲಾದರೂ ಸರಿ. ಕಾಗವಾಡದಲ್ಲಾದರೂ ಸರಿ. ಬಿಜೆಪಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುತ್ತೇನೆ" ಎಂದು ಮಾಜಿ ಶಾಸಕ ರಾಜು ಕಾಗೆ ಎಚ್ಚರಿಕೆ ನೀಡಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ 50118 ಮತಗಳನ್ನು ಪಡೆದು ರಾಜು ಕಾಗೆ ಶ್ರೀಮಂತ ಪಾಟೀಲ ವಿರುದ್ಧ ಸೋಲು ಕಂಡಿದ್ದರು. ಉಪ ಚುನಾವಣೆಯ ಟಿಕೆಟ್ಗಾಗಿ ಅವರು ಪಟ್ಟು ಹಿಡಿದು ಕೂತಿದ್ದಾರೆ. ಇದೇ ಬಿಜೆಪಿಗೆ ತಲೆನೋವಾಗಿದೆ.

ಸಭೆಗೆ ನಾನು ಹೋಗಲಿಲ್ಲ
"ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರು ನಡೆಸಿದ ಸಭೆಗೆ ನಾನು ಹೋಗಲಿಲ್ಲ. ನನ್ನ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೋಗಿದ್ದರು. ನನಗೆ ಟಿಕೆಟ್ಗಾಗಿ ಒತ್ತಡ ಹೇರಿದ್ದಾರೆ" ಎಂದು ರಾಜು ಕಾಗೆ ಹೇಳಿದರು.

ಹೈಕಮಾಂಡ್ ತೀರ್ಮಾನ
"ನನಗೆ ಟಿಕೆಟ್ ಕೊಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಅಂತೆಯೇ ಅಥಣಿಯಿಂದ ಲಕ್ಷ್ಮಣ ಸವದಿ ಅವರಿಗೂ ಟಿಕೆಟ್ ಕೊಡಲ್ಲ ಎಂದಿದ್ದಾರೆ. ಇದು ಹೈಕಮಾಂಡ್ ತೀರ್ಮಾನ ಎಂದು ಹೇಳಿದ್ದಾರೆ" ಎಂದು ರಾಜು ಕಾಗೆ ತಿಳಿಸಿದರು.

ಅಥಣಿಯಿಂದ ಕಣಕ್ಕಿಳಿಯುವೆ
"ಕಾಗವಾಡ ಕ್ಷೇತ್ರದಲ್ಲಿ ಶಾಸಕ ಶ್ರೀಮಂತ ಪಾಟೀಲ ಅನರ್ಹರಾದಲ್ಲಿ ಕಾಗವಾಡದಿಂದ ಕಾಂಗ್ರೆಸ್ನಿಂದ ಕಣಕ್ಕಿಳಿಯುವೆ. ಇಲ್ಲವಾದಲ್ಲಿ ಅಥಣಿಯಲ್ಲಿ ನಿಲ್ಲುತ್ತೇನೆ" ಎಂದು ರಾಜು ಕಾಗೆ ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.

ಲಕ್ಷ್ಮಣ ಸವದಿಗೂ ಟಿಕೆಟ್ ಇಲ್ಲ?
"ನನ್ನಂತೆಯೇ ಲಕ್ಷ್ಮಣ ಸವದಿ ಕೂಡಾ ಪಕ್ಷಕ್ಕಾಗಿ ದುಡಿದಿಲ್ಲವೇ?. ಉಪ ಮುಖ್ಯಮಂತ್ರಿ ಆಗಿರುವ ಅವರಿಗೂ ಟಿಕೆಟ್ ಕೊಡುವುದಿಲ್ಲವೇ?. ಕಾಂಗ್ರೆಸ್ ನವರು ನನ್ನ ಸಂಪರ್ಕದಲ್ಲಿದ್ದಾರೆ. ಟಿಕೆಟ್ ಕೊಡದಿದ್ದರೆ ನನ್ನ ಭವಿಷ್ಯವನ್ನು ನೋಡಿಕೊಳ್ಳಬೇಕಾಗುತ್ತದೆ" ಎಂದು ರಾಜು ಕಾಗೆ ಹೇಳಿದರು.












Click it and Unblock the Notifications