22 ನಿಮಿಷದ ವಿಡಿಯೋದಲ್ಲಿ ಸ್ಫೋಟಕ ಮಾಹಿತಿ ಹೊರಹಾಕಿದ ಜಾರಕಿಹೊಳಿ
ಬೆಳಗಾವಿ, ನ 9: ಬೆಂಗಳೂರಿನ ನಂತರ ಅತಿಹೆಚ್ಚು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಬೆಳಗಾವಿ ಜಿಲ್ಲೆ, ರಾಜ್ಯ ರಾಜಕಾರಣದ ದಿಕ್ಸೂಚಿ ಬರೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದಕ್ಕೆ ಕೊಡಬಹುದಾದ ಉದಾಹರಣೆಯಲ್ಲೊಂದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡಿದ್ದದ್ದು.
ರಾಜ್ಯ ರಾಜಕಾರಣದ ಪ್ರಭಾವೀ ಕುಟುಂಬಗಳಲ್ಲೊಂದು ಜಾರಕಿಹೊಳಿ ಫ್ಯಾಮಿಲಿ. ಈ ಕುಟುಂಬದ ಎಲ್ಲಾ ಸಹೋದರರು ಒಂದೇ ಪಕ್ಷದಲ್ಲಿ ಇರುವುದಿಲ್ಲ ಎನ್ನುವುದು ಒಂದು ರೀತಿಯಲ್ಲಿ ವಾಡಿಕೆಯಂತೆ ನಡೆದುಕೊಂಡು ಬರುತ್ತಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳುವ ಈ ಅಣ್ ತಮ್ಮಾಸ್, ರಾಜ್ಯ ರಾಜಕೀಯದ ಭಾಷ್ಯ ಬರೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಮೇಲಿನ ಪೀಠಿಕೆ ಏನಕ್ಕೆ ಅಂದರೆ, ಉತ್ತಮ ವಾಗ್ಮಿಯಲ್ಲದ ಕೆಪಿಸಿಸಿ ಕಾರ್ಯಾಧ್ಯಕ್ಷರಲ್ಲಿ ಒಬ್ಬರಾದ ಸತೀಶ್ ಜಾರಕಿಹೊಳಿ, ತಿಂಗಳಿನಿಂದ ಮನಸ್ಸಿನಲ್ಲಿದ್ದ ನೋವನ್ನೆಲ್ಲಾ ವಿಡಿಯೋ ಮೂಲಕ ಹೊರಗೆಡವಿದ್ದಾರೆ.
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ, ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕೂದಲೆಳೆ ಅಂತರದಿಂದ ಕಾಂಗ್ರೆಸ್ ಸೋತಿದ್ದು ಯಾಕೆ ಎನ್ನುವುದನ್ನು ಸತೀಶ್ ಜಾರಕಿಹೊಳಿ ಇಂಚಿಂಚು ವಿವರಿಸಿದ್ದಾರೆ. ಗಮನಿಸಬೇಕಾದ ವಿಚಾರ ಏನಂದರೆ, ಕಾಂಗ್ರೆಸ್ ಸೋಲಿಗೆ ಬಿಜೆಪಿ ಕಾರಣವಲ್ಲ, ನಮ್ಮವರೇ ಎನ್ನುವ ಅವರ ಸ್ಪೋಟಕ ಹೇಳಿಕೆ. ಹಾಗಾದರೆ, ಯಾರದು?

ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿಯವರ ವಿಡಿಯೋ ಸಂದೇಶ
ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿಯವರ ವಿಡಿಯೋ ಸಂದೇಶದ ಪ್ರಕಾರ ಅವರ ಸ್ಪಷ್ಟ ನೋವಿರುವುದು ತಮ್ಮದೇ ಪಕ್ಷದ ಪ್ರಭಾವಿ ಕಾಂಗ್ರೆಸ್ ಮುಖಂಡರೊಬ್ಬರ ಮೇಲೆ. "ತಾನು, ತನ್ನ ಮಕ್ಕಳು, ತನ್ನ ಮರಿಮೊಕ್ಕಳು, ಬೆಳಗಾವಿ ರಾಜಕೀಯವೆಲ್ಲಾ ತನ್ನ ಕುಟುಂಬದ ಹುಕುಂನಂತೆ ನಡೆಯಬೇಕು ಎನ್ನುವ ರಾಜಕೀಯ ಅಭಿಲಾಷೆ ಹೊಂದಿರುವ ನಮ್ಮದೇ ಪಕ್ಷದ ನಾಯಕರೊಬ್ಬರಿಂದ ಕಾಂಗ್ರೆಸ್ಸಿಗೆ ಸೋಲಾಗಿದೆ"ಎಂದು ಸತೀಶ್ ಜಾರಕಿಹೊಳಿ ವಿಡಿಯೋದಲ್ಲಿ ಹೇಳಿದ್ದಾರೆ.

ಬೆಲೆ ಏರಿಕೆಯಾಗಿದ್ದರೂ ಮೋದಿಯ ವರ್ಚಸ್ಸು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ
"ನಾನು ಲೋಕಸಭಾ ಉಪ ಚುನಾವಣೆಯಲ್ಲಿ ಅಲ್ಪಮತದಿಂದ ಸೋತೆ, ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯವರು ಗೆದ್ದರು. ಅದೆಲ್ಲಾ, ಬಿಜೆಪಿ ಸಾಧನೆ, ಬೆಲೆ ಏರಿಕೆಯಾಗಿದ್ದರೂ ಮೋದಿಯ ವರ್ಚಸ್ಸು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಅಸಲಿ ವಿಚಾರವೇ ಬೇರೆಯಿದೆ. ನಮ್ಮದೇ ಪಕ್ಷದವರ ಷಡ್ಯಂತ್ರದಿಂದ ಕಾಂಗ್ರೆಸ್ಸಿಗೆ ಸೋಲಾಯಿತು"ಎಂದು ಸತೀಶ್ ಜಾರಕಿಹೊಳಿ, ಹೆಸರು ಹೇಳದೇ ಕಾಂಗ್ರೆಸ್ ಮುಖಂಡ ಫಿರೋಜ್ ಶೇಠ್ ವಿರುದ್ದ ಕಿಡಿಕಾರಿದ್ದಾರೆ.

ಪರೋಕ್ಷವಾಗಿ ಫಿರೋಜ್ ಶೇಠ್ ವಿರುದ್ದ ಕಿಡಿಕಾರಿದ ಸತೀಶ್ ಜಾರಕಿಹೊಳಿ
"ಲೋಕಸಭಾ ಉಪ ಚುನಾವಣೆ ಸೋತ ಇಷ್ಟು ತಿಂಗಳ ನಂತರ ನಾನು ಈ ಮಾಹಿತಿಯನ್ನು ನೀಡಲು ಕಾರಣ, ನನಗೆ ಅಂಕಿಅಂಶಕ್ಕಾಗಿ ಕಾಲಾವಕಾಶ ಬೇಕಾಗಿತ್ತು. ಬೆಳಗಾವಿಯಲ್ಲಿ ಯಾವುದೇ ಲೀಡರ್ ಬೆಳೆಯಲು ಅವಕಾಶವಿಲ್ಲದಾಗಿದೆ, ಹಾಗಾಗಿ, ನೇರವಾಗಿ ನಗರದಲ್ಲಿ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇವೆ. ಈ ವ್ಯಕ್ತಿಯಿಂದ ನಮಗೆ ತೊಂದರೆ ತಪ್ಪಿದಲ್ಲ, ಕಾಂಗ್ರೆಸ್ ಸೋಲಲು ಆ ವ್ಯಕ್ತಿಯ ಕಾರಣ"ಎಂದು ಸತೀಶ್ ಜಾರಕಿಹೊಳಿ ಬೇಸರ ವ್ಯಕ್ತ ಪಡಿಸಿದ್ದಾರೆ. (ಚಿತ್ರದಲ್ಲಿ: ಫಿರೋಜ್ ಶೇಠ್)
Recommended Video

ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ನನಗೆ ತುಂಬಾ ಅವಕಾಶವಿತ್ತು
"ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ನನಗೆ ತುಂಬಾ ಅವಕಾಶವಿತ್ತು, ಆದರೆ ಆ ವ್ಯಕ್ತಿಯ ಅಪಪ್ರಚಾರದಿಂದಾಗಿ ನಮ್ಮ ಕಾರ್ಯಕರ್ತರು ಸ್ಥೈರ್ಯ ಕಳೆದುಕೊಂಡು ಪ್ರಚಾರದಿಂದ ಹಿಂದಕ್ಕೆ ಸರಿದರು. ಇದರಿಂದಾಗಿ, ಚುನಾವಣೆಯ ಕೊನೆಯ ಕ್ಷಣದಲ್ಲಿ ನಮಗೆ ಸಂಘಟನಾತ್ಮಕವಾಗಿ ಹಿನ್ನಡೆಯಾಯಿತು. ಇದು ನಮ್ಮಿಂದಾಗಿರುವ ಸೋಲೇ ಹೊರತು, ಬಿಜೆಪಿಯ ಗೆಲುವಲ್ಲ"ಎಂದು ಸತೀಶ್ ಜಾರಕಿಹೊಳಿ, ತಮ್ಮದೇ ಪಕ್ಷದ ಫಿರೋಜ್ ಶೇಠ್ ವಿರುದ್ದ ಹರಿಹಾಯ್ದಿದ್ದಾರೆ.












Click it and Unblock the Notifications